ಮುಸ್ಲಿಂ ಧರ್ಮಗುರು ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿ
ಬಿಜೆಪಿ ನಾಯಕರಿಗೆ ಜೀವಬೆದರಿಕೆಯೊಡ್ಡಿದ ಎಸ್ಐ ಪುತ್ರ

ಮುಝಾಫರ್ನಗರ್,ಆ.20: ಸ್ಥಳೀಯ ಮಸೀದಿಯ ಧರ್ಮಗುರುವೊಬ್ಬರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಪ್ರೊಫೈಲ್ ಸೃಷ್ಟಿಸಿ,ಅದರಲ್ಲಿ ಬಿಜೆಪಿ ನಾಯಕರಿಗೆ ಹತ್ಯೆ ಬೆದರಿಕೆಯ ಸಂದೇಶಗಳನ್ನು ಪ್ರಕಟಿಸಿದ ಆರೋಪದಲ್ಲಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ಒಬ್ಬರ ಪುತ್ರನನ್ನು ಶನಿವಾರ ಬಂಧಿಸಲಾಗಿದೆ.
ಮುಝಾಫರ್ನಗರ್ನ ಕಂಪ್ಯೂಟರ್ ಕೇಂದ್ರವೊಂದರ ಮಾಲಕನಾದ ಅಜಯ್ ಕುಮಾರ್ ಬಂಧಿತ ಆರೋಪಿ. ಸ್ಥಳೀಯ ಮುಸ್ಲಿಂ ಧರ್ಮಗುರು ವೌಲಾನಾ ಶೌಕೀನ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಅಜಯ್ನನ್ನ್ನು ಶಾಮ್ಲಿ ನಗರದಲ್ಲಿರುವ ಆತನ ನಿವಾಸದಿಂದ ಬಂಧಿಸಲಾಯಿತೆಂದು ಪೊಲೀಸ್ ಠಾಣಾಧಿಕಾರಿ ನಿಶಾಂಕ್ ಶರ್ಮಾ ತಿಳಿಸಿದ್ದಾರೆ.
ಮುಸ್ಲಿಂ ಧರ್ಮಗುರು ಶೌಕಿನ್ ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿದ್ದ ಅಜಯ್ ಬಿಜೆಪಿ ಸಂಸದ ಹುಕುಂ ಸಿಂಗ್, ಬಿಜೆಪಿ ಶಾಸಕ ಸುರೇಶ್ ರಾಣಾ, ಬಜರಂಗ ದಳ ನಾಯಕ ವಿವೇಕ್ ಪ್ರೇಮಿ ಅವರನ್ನು ಹತ್ಯೆಗೈಯುವ ಬೆದರಿಕೆ ಸಂದೇಶಗಳನ್ನು ಪ್ರಸಾರ ಮಾಡಿದ್ದನೆನ್ನಲಾಗಿದೆ.ಸ್ಥಳೀಯ ಹಿಂದೂ ಕಾರ್ಯಕರ್ತರಿಗೂ ಆತ ಈ ನಕಲಿ ಫೇಸ್ಬುಕ್ ಖಾತೆಯ ಮೂಲಕ ಬೆದರಿಕೆ ಒಡ್ಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.





