ಕೋಮುಘರ್ಷಣೆ: ಬರೇಲಿ ಉದ್ವಿಗ್ನ
ಬರೇಲಿ, ಆ.20: ಮಸೀದಿಯಲ್ಲಿ ‘ಆಝಾನ್’ ಗಾಗಿ ಧ್ವನಿವರ್ಧಕಗಳನ್ನು ಬಳಸಿದ ವಿಚಾರವಾಗಿ ಎರಡು ಸಮುದಾಯಗಳ ಗುಂಪುಗಳ ನಡುವೆ ಘರ್ಷಣೆ ನಡೆದ ಬಳಿಕ ಉತ್ತರಪ್ರದೇಶದ ಬರೇಲಿ ನಗರದಲ್ಲಿ ಕೋಮು ಉದ್ವಿಗ್ನ ಸ್ಥಿತಿ ನೆಲೆಸಿದೆ.ಒಂದು ಕೋಮಿಗೆ ಸೇರಿದ ಜನರ ಗುಂಪೊಂದು ಹಫೀಝ್ಗಂಝ್ ಪ್ರದೇಶದಲ್ಲಿರುವ ಮಸೀದಿಯೊಳಗೆ ಅಕ್ರಮವಾಗಿ ಪ್ರವೇಶಿಸಿ ಅಲ್ಲಿದ್ದವರೊಂದಿಗೆ ವಾಗ್ವಾದಕ್ಕಿಳಿಯಿತು. ಆನಂತರ ಎರಡೂ ಗುಂಪುಗಳು ಪರಸ್ಪರ ಕಲ್ಲುತೂರಾಟ ಹಾಗೂ ಗುಂಡೆಸೆತ ತೊಡಗಿದ್ದರಿಂದ ಪರಿಸ್ಥಿತಿ ಹಿಂಸಾತ್ಮಕ ತಿರುವನ್ನು ಪಡೆಯಿತೆಂದು ಪೊಲೀಸರು ತಿಳಿಸಿದ್ದಾರೆ. ಘರ್ಷಣೆಯಲ್ಲಿ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆಂದು ಅವರು ಹೇಳಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ದೊರೆತ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯಿಂದ ಮೊದಲನೇ ತಂಡವನ್ನು ಸ್ಥಳಕ್ಕೆ ರವಾನಿಸಲಾಯಿತು. ಆನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸ ಲಾಯಿತೆಂದು ಗ್ರಾಮಾಂತರ ಪೊಲೀಸ್ ಅಧೀಕ್ಷಕ ಯಮುನಾ ಪ್ರಸಾದ್ ತಿಳಿಸಿದ್ದಾರೆ.
ಎರಡೂ ತಂಡಗಳ ಸುಮಾರು 300 ಮಂದಿ ಹಿಂಸಾಚಾರದಲ್ಲಿ ತೊಡಗಿದ್ದವು. ಹೆಚ್ಚುವರಿ ಪಡೆಗಳು ಸ್ಥಳಕ್ಕೆ ಧಾವಿಸಿದ ಕೂಡಲೇ ಸ್ಥಳದಿಂದ ಪರಾರಿಯಾದವು. ಆದರೆ ನೆರೆಹೊರೆಯ ಪ್ರದೇಶಗಳಲ್ಲಿ ಶುಕ್ರವಾರ ತಡಸಂಜೆಯವರೆಗೂ ಎರಡೂ ಕೋಮುಗಳ ನಡುವೆ ಘರ್ಷಣೆಗಳು ನಡೆದಿದ್ದಾಗಿ ವರದಿಗಳು ಬಂದಿವೆ. ಕೇಂದ್ರ ಗೃಹ ಸಚಿವ ರಾಜ್ನಾಥ್ಸಿಂಗ್ ಅವರ ಭೇಟಿಯ ಹಿನ್ನೆಲೆಯಲ್ಲಿ ಶಹಜಹಾನ್ಪುರ್ನಲ್ಲಿ ಭದ್ರತಾ ವ್ಯವಸ್ಥೆಗಾಗಿ ನಿಯೋಜಿತವಾಗಿದ್ದ ಸ್ಥಳೀಯ ಪೊಲೀಸರನ್ನು, ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಹಿಂದಕ್ಕೆ ಕರೆಸಿಕೊಳ್ಳಲಾಗಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ಘರ್ಷಣೆಯಲ್ಲಿ ತೊಡಗಿದ್ದವರನ್ನು ಪೊಲೀಸರು ಗುರುತಿಸುವ ಹಾಗೂ ಬಂಧಿಸುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಯಮುನಾ ಪ್ರಸಾದ್ ತಿಳಿಸಿದ್ದಾರೆ.







