ಕೊಠಾರಿ ಆಯೋಗ ವರದಿಗೆ 50 ವರ್ಷ!
![ಕೊಠಾರಿ ಆಯೋಗ ವರದಿಗೆ 50 ವರ್ಷ! ಕೊಠಾರಿ ಆಯೋಗ ವರದಿಗೆ 50 ವರ್ಷ!](https://www.varthabharati.in/sites/default/files/images/articles/2016/08/21/2-kothari-commission.jpg)
ಶಿಕ್ಷಣದ ದೀರ್ಘಾವಧಿ ಉದ್ದೇಶ ಹಾಗೂ ಗುರಿಗಳು ಮತ್ತು ಉದ್ಯೋಗಕ್ಕೆ ಸಜ್ಜುಗೊಳಿಸುವಂತಹ ಅಲ್ಪಾವಧಿ ಗುರಿ; ಶೈಕ್ಷಣಿಕ ನ್ಯಾಯ ಆದರ್ಶದ ಪರಿಕಲ್ಪನೆ ಹಾಗೂ ಇದನ್ನು ಅನುಷ್ಠಾನಕ್ಕೆ ತರಲು ಬೇಕಾದ ಹಣಕಾಸು/ ಆಡಳಿತಾತ್ಮಕ ಅಗತ್ಯಗಳನ್ನು ಈ ವರದಿ ಪರಿಗಣಿಸಿದೆ. ಇವೆಲ್ಲ ಅಂಶಗಳ ಆಧಾರದಲ್ಲಿ ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆ ಅಭಿವೃದ್ಧಿಪಡಿಸುವ ಕಲ್ಪನೆ ಈ ವರದಿಯ ತಿರುಳು.
ಶಿಕ್ಷಣ ಸುಧಾರಣೆಗೆ ಸಂಬಂಧಿಸಿದ ಕೊಠಾರಿ ಆಯೋಗದ ವರದಿಗೆ 50 ವರ್ಷ ತುಂಬಿದೆ. ಅರ್ಧ ಶತಮಾನ ಕಳೆದರೂ ಈ ವರದಿಗೆ ಭಾರತದ ಶಿಕ್ಷಣ ಕುರಿತ ಚರ್ಚೆಯಲ್ಲಿ ಮಹತ್ವದ ಸ್ಥಾನವಿದೆ. ಯಾವ ಸೈದ್ಧಾಂತಿಕ ಚೌಕಟ್ಟಿನಲ್ಲಿ ಭಾರತೀಯ ಶಿಕ್ಷಣದ ಚರ್ಚೆ ನಡೆದರೂ, ಈ ವರದಿಯ ಉಲ್ಲೇಖ ಆಗುತ್ತದೆ. ಸಮಿತಿಯ ಕೆಲ ಶಿಫಾರಸುಗಳು ದೇಶದ ನೀತಿ ಹಾಗೂ ಯೋಜನೆ ನಿರೂಪಣೆ ಸೇರಿದಂತೆ ಹಲವೆಡೆ ಸ್ಥಾನ ಪಡೆದಿದ್ದರೂ, ಈ ವರದಿ ಎತ್ತಿದ ಶಿಕ್ಷಣ ಕ್ಷೇತ್ರದ ಹಲವು ಪ್ರಮುಖ ವಿಷಯಗಳು ನಮ್ಮ ನೆನಪಿನಾಚೆಗೆ ಸರಿದಿವೆ.
ಸುಮಾರು 700 ಪುಟಗಳ ಈ ಬೃಹತ್ ವರದಿ, ಶಿಕ್ಷಣ ಕ್ಷೇತ್ರ ಬಗೆಗಿನ ಸಂವಾದದಲ್ಲಿ ಪರಸ್ಪರ ಸಂಬಂಧದ ಹಲವು ವಿಷಯಗಳನ್ನು ಉಲ್ಲೇಖಿಸಿದೆ. ಜತೆಗೆ ಒಂದಕ್ಕೊಂದು ಪೂರಕವಲ್ಲದ ಹಲವು ವಿಷಯಗಳನ್ನೂ ಈ ವರದಿ ಒಳಗೊಂಡಿದೆ. ಶಿಕ್ಷಣದ ದೀರ್ಘಾವಧಿ ಉದ್ದೇಶ ಹಾಗೂ ಗುರಿಗಳು ಮತ್ತು ಉದ್ಯೋಗಕ್ಕೆ ಸಜ್ಜುಗೊಳಿಸುವಂತಹ ಅಲ್ಪಾವಧಿ ಗುರಿ; ಶೈಕ್ಷಣಿಕ ನ್ಯಾಯ ಆದರ್ಶದ ಪರಿಕಲ್ಪನೆ ಹಾಗೂ ಇದನ್ನು ಅನುಷ್ಠಾನಕ್ಕೆ ತರಲು ಬೇಕಾದ ಹಣಕಾಸು/ ಆಡಳಿತಾತ್ಮಕ ಅಗತ್ಯಗಳನ್ನು ಈ ವರದಿ ಪರಿಗಣಿಸಿದೆ. ಇವೆಲ್ಲ ಅಂಶಗಳ ಆಧಾರದಲ್ಲಿ ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆ ಅಭಿವೃದ್ಧಿಪಡಿಸುವ ಕಲ್ಪನೆ ಈ ವರದಿಯ ತಿರುಳು. ದಶಕದ ಬಳಿಕ ಈ ಆಯೋಗದಲ್ಲಿ ಕೆಲಸ ಮಾಡಿದ್ದ ಜೆ.ಪಿ.ನಾಯ್ಕಿ, ಶಿಕ್ಷಣ ಆಯೋಗ ಮತ್ತು ಆ ಬಳಿಕ (1982) ಎಂಬ ಲೇಖನದಲ್ಲಿ, ಆಯೋಗ ರೂಪುಗೊಂಡ ಕಾಲಾನುಕ್ರಮ, ಅದರ ದೃಷ್ಟಿಕೋನ ಮತ್ತು ವ್ಯಾಪ್ತಿಯ ಬಗ್ಗೆ ಆಸಕ್ತಿದಾಯಕ ಒಳನೋಟವನ್ನು ನೀಡಿದ್ದಾರೆ.
ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯನ್ನು ಆರಂಭಿಸುವ ಆಯೋಗದ ಕಾರ್ಯದ ಬಗ್ಗೆ ವಿವರಿಸಿರುವ ನಾಯ್ಕೆ, ಇದು ಪುನರುಜ್ಜೀವಕವೂ ಅಲ್ಲ; ಕಟ್ಟಾ ಪ್ರತಿಪಾದನಾತ್ಮಕವೂ ಅಲ್ಲ, ಬದಲಾಗಿ ಶಿಕ್ಷಣವನ್ನು ಆಕಾಂಕ್ಷೆ ಹಾಗೂ ಜನರ ಜೀವನಾಧಾರವಾಗಿ ಪರಿಗಣಿಸಿರುವ ತೃತೀಯ ಜಗತ್ತಿನಲ್ಲಿ ರೂಪುಗೊಳ್ಳುತ್ತಿರುವ ರಾಜಕೀಯ ಪ್ರಜ್ಞೆಯ ಒಂದು ಭಾಗ ಎಂದು ಹೇಳಿದ್ದಾರೆ. ಸಾಮ್ರಾಜ್ಯಶಾಹಿ ವ್ಯವಸ್ಥೆ ಹಾಗೂ ಔಪಚಾರಿಕ ಶಿಕ್ಷಣದ ನಡುವಿನ ಐತಿಹಾಸಿಕ ಸಂಬಂಧದ ಹಿನ್ನೆಲೆಯಲ್ಲಿ, ಜ್ಞಾನವನ್ನು, ಕಲಿಕಾ ವಿಧಾನ ಅಥವಾ ಬೋಧನಾ ಕ್ರಮವನ್ನು ಸಾಮ್ರಾಜ್ಯಶಾಹಿ ವ್ಯವಸ್ಥೆಯ ವಾಸನೆ ಇಲ್ಲದಂತೆ ರೂಪಿಸಲು ಸಾಧ್ಯವೇ? ಸಾಮ್ರಾಜ್ಯಶಾಹಿ ಹಾಗೂ ಊಳಿಗಮಾನ್ಯ ತಾರ್ಕಿಕತೆಗೆ ಹೊರತಾಗಿ ಕಾರ್ಯನಿರ್ವಹಿಸುವ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಎಂಬಂಥ ಪ್ರಶ್ನೆಗಳು, ಸೈದ್ಧಾಂತಿಕವಾಗಿ ದೃಢ ಮತ್ತು ವಾಸ್ತವಿಕವಾಗಿ ಜನಜೀವನಕ್ಕೆ ಪ್ರಸ್ತುತ ಎನಿಸುವ ಶಿಕ್ಷಣ ನೀತಿಯನ್ನು ರೂಪಿಸುವ ಆಯೋಗದ ದೃಷ್ಟಿಗೆ ಎದುರಾದವು.
ಇಂಥ ಪರಸ್ಪರ ಸಂಬಂಧವಿಲ್ಲದ ಮೂರು ಕಲ್ಪನೆಗಳು ಆಯೋಗದ ದೃಷ್ಟಿಯನ್ನು ನಿರ್ಧರಿಸಿದವು. ಸಾಮಾಜಿಕ ಹಾಗೂ ಶೈಕ್ಷಣಿಕ ಅಸಮಾನತೆಗಳಿಗೆ ನಿಕಟ ಸಂಬಂಧವಿದೆ ಎನ್ನುವುದನ್ನು ಆಯೋಗ ಗಮನಿಸಿತು, ಬಹಳಷ್ಟು ಬಾರಿ ಶಿಕ್ಷಣವು ಅಸಮಾನತೆಯನ್ನು ಹೆಚ್ಚಿಸುವ ಸಾಧನವಾಗಿ ಬಳಕೆಯಾಗುತ್ತದೆ. ಸ್ವಾತಂತ್ರೋತ್ತರ ಭಾರತದಲ್ಲಿ ಶಿಕ್ಷಣವು ಸಾಮಾಜಿಕ ವರ್ಗಾವಣೆಯಿಂದ ಪ್ರತ್ಯೇಕವಾಗಬೇಕು ಎನ್ನುವುದು ಆಯೋಗದ ನಿರ್ಣಯವಾಗಿತ್ತು. ಈ ಸಾಮಾಜಿಕ ವರ್ಗಾವಣೆಗೆ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ ಹಾಗೂ ಸಾರ್ವತ್ರಿಕ ವಯಸ್ಕರ ಶಿಕ್ಷಣ ಆರಂಭಿಕ ಹೆಜ್ಜೆಗಳಾಗಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ತನ್ನ ಒಟ್ಟು ವೆಚ್ಚದ ಶೇ.6ನ್ನು ಶಿಕ್ಷಣಕ್ಕೆ ವಿನಿಯೋಗಿಸಬೇಕು ಹಾಗೂ ಶಿಕ್ಷಕರ ಗೌರವಧನ ಹೆಚ್ಚಿಸಬೇಕು ಎಂದು ಶಿಫಾರಸು ಮಾಡಿತು. ಕೊಠಾರಿ ಆಯೋಗದ ಮಹತ್ವದ ಕೊಡುಗೆ ಎಂದರೆ, ಒಂದೇ ಬಗೆಯ ನಿರ್ಮಾಣವನ್ನು ಒಳಗೊಂಡ ಸಾರ್ವಜನಿಕ ವ್ಯವಸ್ಥೆ ಅಭಿವೃದ್ಧಿಪಡಿಸುವ ಸಮಾನ ಶಾಲಾ ವ್ಯವಸ್ಥೆಯನ್ನು ರೂಪಿಸಿದ್ದು.
ಎರಡನೆ ಯೋಚನಾ ಲಹರಿಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಆಯೋಗ, ಶಾಲಾ ಅವಧಿಯನ್ನು ವಿಸ್ತರಿಸುವ ಇತಿಮಿತಿಗಳನ್ನು ಗುರುತಿಸಿದೆ. ಆಧುನಿಕ ಶಿಕ್ಷಣವು ವಿದ್ಯಾರ್ಥಿಗಳ ಪರಿವರ್ತನೆಗೆ ಕಾರಣವಾಗುತ್ತದೆ ಮತ್ತು ಮಧ್ಯಮವರ್ಗದ ರೂಢಿಗಳೊಂದಿಗೆ ಕೊನೆಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ವರದಿಯು ಇಂಥ ದೈಹಿಕ, ಉತ್ಪಾದಕ ಕೆಲಸ ಕೌಶಲವನ್ನು ಪಠ್ಯಕ್ರಮದಲ್ಲಿ ಅಳವಡಿಸುವ, ಶ್ರಮ ಗೌರವವನ್ನು ಪುನಃಸ್ಥಾಪಿಸುವ, ವೃತ್ತಿಪರ ಹಾಗೂ ಕೃಷಿ ಶಿಕ್ಷಣವನ್ನು ವಿಸ್ತರಿಸುವ ಬಗ್ಗೆ ಗಮನ ಹರಿಸಿತು. ಸಾರ್ವಜನಿಕ ಶಿಕ್ಷಣ ಹೇಗಿರಬೇಕು ಎಂಬ ಕಲ್ಪನೆಗೆ, ವಿಸ್ತೃತವಾಗಿ ವೈಜ್ಞಾನಿಕ ಸಾಕ್ಷರತೆಗೆ ಒತ್ತು ನೀಡಬೇಕು ಮತ್ತು ಇದು ತಾರ್ಕಿಕ, ನ್ಯಾಯ ಹಾಗೂ ಅನುಭೂತಿಗೆ ಒತ್ತು ನೀಡಬೇಕು ಎಂಬ ನಿರ್ಣಯಕ್ಕೆ ಬಂತು. ಸಮಗ್ರ ಶಿಕ್ಷಣ ವ್ಯವಸ್ಥೆಯ ಜಾರಿಗೆ ಶಿಫಾರಸು ಮಾಡಿದ ಆಯೋಗ, ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು, ಶಾಲೆಗಳು, ಪಾಲಿಟೆಕ್ನಿಕ್ ಮತ್ತು ಅನೌಪಚಾರಿಕ ಕಲಿಕೆ ನಡುವೆ ಕೃತಕ ಗಡಿಗಳನ್ನು ನಿರ್ಮಿಸಿದರೂ, ಈ ಎಲ್ಲ ವೈವಿಧ್ಯಮಯ ವ್ಯವಸ್ಥೆಯ ನಡುವೆ ಸಂಬಂಧ ಕಲ್ಪಿಸಲು ಸಲಹೆ ನೀಡಿತು.
ಮೂರನೆಯದಾಗಿ ಆಯೋಗವು, ಶಿಕ್ಷಣದಲ್ಲಿ ಇಂಗ್ಲಿಷ್ನ ಪಾತ್ರದ ರೂಪಾಂತರಕ್ಕೆ ಸಾಕಷ್ಟು ಅವಕಾಶ ಕಲ್ಪಿಸಿತು. ವೈಜ್ಞಾನಿಕ ಜ್ಞಾನವನ್ನು ಪಡೆಯಲು ಇಂಗ್ಲಿಷ್ ಪ್ರಬಲ ಸಾಧನ. ಆದ್ದರಿಂದ ಶಾಲಾಹಂತದಲ್ಲೇ ಇದನ್ನು ಒಂದು ವಿಷಯವಾಗಿ ಬೋಧಿಸಬೇಕು. ಆಧುನಿಕ ಭಾರತೀಯ ಭಾಷೆಗಳ ಕಲಿಕೆ ಹಾಗೂ ಬೋಧನೆಯನ್ನು ಕೂಡಾ ಅಭಿವೃದ್ಧಿಪಡಿಸಬೇಕು ಮತ್ತು ವಿದ್ಯಾರ್ಥಿಗಳ ಭಾಷಾ ಜ್ಞಾನವನ್ನು ದೃಢಗೊಳಿಸಬೇಕು. ಈ ಶಿಫಾರಸು 1968ರ ಶಿಕ್ಷಣ ನೀತಿಯಲ್ಲಿ ಬಿಂಬಿತವಾಗಿದೆ. ಇದರಿಂದಾಗಿ ಭಾರತದಲ್ಲಿ ಮೂರು ಭಾಷೆಗಳ ಕಲಿಕಾ ವ್ಯವಸ್ಥೆ ಅಭಿವೃದ್ಧಿಯಾಯಿತು.
ಆಯೋಗ ತನ್ನ ದೃಷ್ಟಿಯಲ್ಲಿ ಶಿಕ್ಷಣವನ್ನು ನ್ಯಾಯ ಹಾಗೂ ಸಮಾನತೆ ಜತೆ ಸಂಪರ್ಕಿಸುವ ಅವಕಾಶಗಳ ಬಾಗಿಲನ್ನು ತೆರೆಯಿತು. ಆದಾಗ್ಯೂ, 1960ರ ದಶಕದಲ್ಲಿ ಈ ವರದಿ ತನ್ನ ಸಾರ್ವಜನಿಕ ಜೀವನ ಆರಂಭಿಸಿದಾಗ, ಭಾರತೀಯ ಶಿಕ್ಷಣ ಹಲವು ವೈರುಧ್ಯಗಳನ್ನು ಒಳಗೊಂಡ ಪರ್ಯಾಯ ವ್ಯವಸ್ಥೆ ಚಲನಶೀಲವಾಗಿತ್ತು. ಉದಾಹರಣೆಗೆ, ಬೋಧನಾ ಸಂಸ್ಥೆಗಳು ವಿಸ್ತರಣೆಗೊಂಡವು, ಹಲವು ಮಂದಿ ಮೊಟ್ಟಮೊದಲ ಬಾರಿಗೆ ಕಾಲೇಜು ಪ್ರವೇಶದ ಅವಕಾಶ ಪಡೆದರು, ಇದರ ಜತೆಗೆ ನಿರ್ದಿಷ್ಟ ಆಯ್ಕೆಗಷ್ಟೇ ಸೀಮಿತವಾದ ಶಿಕ್ಷಣ ಸಂಸ್ಥೆಗಳೂ ಬೆಳೆದವು. ಸರಕಾರ ನಡೆಸುವ ಶಾಲೆಗಳ ಜಾಲ ದುರ್ಬಲವಾಯಿತು ಹಾಗೂ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣ, ಸ್ವಾತಂತ್ರ್ಯ ಬಂದು ಹಲವು ವರ್ಷಗಳ ವರೆಗೂ ಕನ್ನಡಿಯ ಗಂಟಾಗಿಯೇ ಉಳಿಯಿತು.
ಕೊಠಾರಿ ಆಯೋಗದ ವರದಿಯ ಉಲ್ಲೇಖ ಹಲವು ಚರ್ಚೆಗಳಲ್ಲಿ ಹಾಗೂ ನೀತಿಗಳಲ್ಲಿ ಬಂದರೂ, ಈ ವರದಿಯ ಅಂಶಗಳನ್ನು ಅನುಷ್ಠಾನಗೊಳಿಸುವ ಗಂಭೀರ ಪ್ರಯತ್ನಗಳು ಮಾತ್ರ ಕಾಣೆಯಾದವು. ಬಹುಶಃ ಈ ವರದಿಯ ಸಂಪ್ರದಾಯವನ್ನು ಗೌರವಿಸುವ ಮೊದಲ ಹೆಜ್ಜೆ ಎಂದರೆ, ಆ ವರದಿಯ ಅಂಶಗಳಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳುವುದು.
ಕೃಪೆ: ಕೌಂಟರ್ ಕರೆಂಟ್ಸ್