ಭಟ್ಕಳ: ಭಾರತೀಯ ಕೋಸ್ಟ್ಗಾರ್ಡ್ನಿಂದ ಸಾಹಸಿ ಮೀನುಗಾರರಿಗೆ ನಗದು ಬಹುಮಾನ ವಿತರಣೆ

ಭಟ್ಕಳ,ಆ.22: ಕಳೆದ ಆ.3ರಂದು ದೋಣಿ ದುರಂತದಲ್ಲಿ ಸಮುದ್ರದಲ್ಲಿ 9 ತಾಸುಗಳ ಕಾಲ ಈಜುತ್ತಾ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮೀನುಗಾರರನ್ನು ರಕ್ಷಣೆ ಮಾಡಿದ ಬೋಟ್ ಚಾಲಕ ಗೋಪಾಲ ಮೊಗೇರ, ಸುರೇಶ ಬಸವ ಖಾರ್ವಿ, ನವೀನ್ ಮಾಸ್ತಿ ಖಾರ್ವಿ, ಶ್ರೀನಿವಾಸ ನಾರಾಯಣ ಖಾರ್ವಿ ಇವರುಗಳಿಗೆ ಇಂಡಿಯನ್ ಕೋಸ್ಟ್ ಗಾರ್ಡ ವತಿಯಿಂದ 10 ಸಾವಿರ ರೂಪಾಯಿ ಬಹುಮಾನ, ಪದಕ ಹಾಗೂ ಪ್ರಮಾಣ ಪತ್ರವನ್ನು ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೋಸ್ಟ್ ಗಾರ್ಡ ಸ್ಟೇಶನ್ ಕಾರವಾರದ ಕಮಾಂಡೆಂಟ್ ಎಂ. ಕೆ. ಶರ್ಮ ಮೀನುಗಾರರ ಜೀವ ರಕ್ಷಣೆ ಮಾಡಿರುವ ಮಹತ್ಕಾರ್ಯವನ್ನು ಮಾಡಿರುವ ಇವರುಗಳನ್ನು ಸನ್ಮಾನಿಸಿರುವುದು ಸಂತಸ ತಂದಿದೆ. ನಾವು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಇನ್ನಷ್ಟು ಜನರಿಗೆ ಸಂಕಷ್ಟದಲ್ಲಿರುವವರಿಗೆ ಸಹಕಾರ ಮಾಡಲು ಸಹಾಯವಾಗುತ್ತದೆ. ಮೀನುಗಾರರು ಸಮುದ್ರಕ್ಕೆ ಹೋಗುವಾಗ ಕಡ್ಡಾಯವಾಗಿ ಜೀವ ರಕ್ಷಕ ಸಾಧನಗಳನ್ನು ತೆಗೆದುಕೊಂಡು ಹೋಗಬೇಕು. ನಮಗೆ ಮೀನುಗಾರಿಕೆಗಿಂತ ನಮ್ಮ ಜೀವ ಮುಖ್ಯವಾಗಿರುತ್ತದೆ. ಮುಖ್ಯವಾಗಿ ಜೂನ್ನಿಂದ ಆಗಸ್ಟ ತನಕ ಸಮುದ್ರ ತೀರ ಅಪಾಯಕಾರಿಯಾಗಿರುವುದರಿಂದ ಪ್ರತಿಯೋರ್ವರೂ ಕೂಡಾ ಕನಿಷ್ಟ ಜೀವ ರಕ್ಷಕಗಳನ್ನು ಇಟ್ಟುಕೊಂಡೇ ಸಮುದ್ರಕ್ಕೆ ಹೋಗಬೇಕು ಎಂದು ಅವರು ನಿಮ್ಮಲ್ಲಿ ಜೀವ ರಕ್ಷಕವಿದ್ದೆ 10 ದಿನವಾದರೂ ನೀರಿನಲ್ಲಿ ಬದುಕುವ ಸಾಧ್ಯತೆ ಇದೆ ಎಂದರು.
ಮೀನುಗಾರಿಕೆಗೆ ತೆರಳುವಾಗ ಕನಿಷ್ಟ 2-3 ಬೋಟುಗಳನ್ನು ತೆಗೆದುಕೊಂಡು ಹೋಗಬೇಕು. ಪ್ರತಿಯೊಂದು ಬೋಟಿನವರೂ ಕೂಡಾ ಇನ್ನೊಂದು ಬೋಟಿನ ಕುರಿತು ನಿಗಾವಹಿಸುವಂತಾದಾಗ ಮಾತ್ರ ನಿಮ್ಮ ಜೀವ ರಕ್ಷಣೆಯಾಗುತ್ತದೆ ಎಂದ ಅವರು ಮೀನುಗಾರರು ನಮ್ಮ ಸಹಕಾರಿಗಳು ಸಮುದ್ರದಲ್ಲಿ ಯಾವುದೇ ರೀತಿಯ ಅಪಾಯಕಾರಿ ಪರಿಸ್ಥಿತಿ ಕಂಡರೆ, ಯಾವುದೇ ಅಪರಿಚಿತ ಬೋಟುಗಳು, ವಸ್ತುಗಳನ್ನು ಕಂಡರೆ ತಕ್ಷಣ ನಮಗೆ ಮಾಹಿತಿ ನೀಡಿ. ಇಂತಹ ಕಾರ್ಯದಿಂದ ಅನೇಕ ಅವಘಡಗಳನ್ನು ತಪ್ಪಿಸಬಹುದು ಎಂದು ಹೇಳಿದ ಅವರು ತಾವು ಸದಾ ತಮ್ಮ ಜೊತೆಗಿರುತ್ತೇವೆ. ಯಾರು ಕೂಡಾ ಧೈರ್ಯಗೆಡುವ ಪ್ರಶ್ನೆಯೇ ಇಲ್ಲ ಎಂದು ಮೀನುಗಾರರ ಬೆನ್ನುತಟ್ಟಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಶಾಸಕ ಮಂಕಾಳ ಎಸ್. ವೈದ್ಯ ಮೀನುಗಾರರ ಜೊತೆ ನಾವಿದ್ದೇವೆ, ನಮ್ಮ ಸರಕಾರವಿದೆ ಎನ್ನುವುದನ್ನು ಈಗಾಗಲೇ ನಾವು ಸಾಬೀತು ಪಡಿಸಿದ್ದೇವೆ. ನಿಮಗೆ ಸಂಕಷ್ಟದ ಸಂದರ್ಭದಲ್ಲಿ ನಾವು ಎಂದೂ ಸಹ ಬಿಟ್ಟು ಕೊಡುವುದಿಲ್ಲ ಎಂದು ಭರವಸೆ ನೀಡಿದ ಅವರು ಸಮಯ ಪ್ರಜ್ಞೆಯಿಂದ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿಯೂ ತಮ್ಮ ಬೋಟನ್ನು ತೆಗೆದುಕೊಂಡು ಹೋಗಿ 7 ಜನರ ಪ್ರಾಣ ಉಳಿಸಿದ ಗೋಪಾಲ ಮೊಗೇರ ಅವರ ಕಾರ್ಯ ಶ್ಲಾಘನೀಯವಾದದ್ದು. ಅವರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಹಾಗೂ ಸಾಹಸ ತೋರಿದ ಎಲ್ಲರಿಗೂ ನಗದು, ಪದಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿರುವುದು ಸಂತಸ ತಂದಿದೆ ಎಂದರು. ಕೋಸ್ಟ್ ಗಾರ್ಡನವನ್ನು ತಮ್ಮ ಬೋಟನ್ನು ಇಡಲು ಸ್ಥಳಾವಕಾಶ ಕೇಳಿದರೆ ಭಟ್ಕಳದಲ್ಲಿ ಕೊಡಲು ನಾವುಸಿದ್ಧರಿದ್ದೇವೆ ಎಂದೂ ಘೋಷಿಸಿದರು.
ಮೀನುಗಾರರ ಮುಖಂಡ ವಸಂತ ಖಾರ್ವಿ ಮಾತನಾಡಿ ಕೋಸ್ಟ್ ಗಾರ್ಡ ಚಿಕ್ಕ ಬೋಟನ್ನು ಮಳೆಗಾಲದ ಸಮಯದಲ್ಲಿ ಬಂದರಿನಲ್ಲಿ ಇಡುವಂತಾಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಕೋಸ್ಟ್ ಗಾರ್ಡ ಸಹಾಯಕ ಕಮಾಂಡೆಂಟ್ ಅಭಿಷೇಕ್ ಗಡಿಯಾಲ್, ಪಿ.ಆರ್.ಓ. ಎಂ. ಎಸ್. ರಾಜನ್, ಗ್ರಾಮೀಣ ಠಾಣೆಯ ಸಬ್ ಇನ್ಸಪೆಕ್ಟರ್ ಮಂಜಪ್ಪ, ಸಿ.ಎಸ್.ಪಿ. ಸಬ್ ಇನ್ಸಪೆಕ್ಟರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.







