ಕೊಣಾಜೆ: ಊರಿನ ಸರ್ವಾಂಗೀಣ ಅಭಿವೃದ್ಧಿಗೆ ಜಮಾತ್ ಗ್ರೂಪ್ - ಶರೀಫ್ ಇನೋಳಿ
ಕೊಣಾಜೆ,ಆ.22: ಯಾವುದೋ ಊರಿನ ಬಗ್ಗೆ ಚಿಂತಿಸುವ ಮೊದಲು ನಾವು ವಾಸವಿರು ಊರಿನ ಅಭಿವೃದ್ಧಿ ಅಗತ್ಯ, ಈ ಕಾರ್ಯಕ್ಕಾಗಿ ಜಮಾತ್ ಗ್ರೂಪ್ ರಚಿಸಲಾಗಿದೆ ಎಂದು ಇನೋಳಿ ಜಮಾತ್ ಗ್ರೂಪ್ ಮುಖ್ಯಸ್ಥ ಮಹಮ್ಮದ್ ಶರೀಫ್ ಇನೋಳಿ ತಿಳಿಸಿದರು.
ಇನೋಳಿ ಬಿ.ಸೈಟ್ನಲ್ಲಿ ಭಾನುವಾರ ಇನೋಳಿ ಜಮಾತ್ ಗ್ರೂಪ್ ಸದಸ್ಯ ಅಕ್ರಂ ಎಂಬವರ ಮನೆಯಲ್ಲಿ ನಡೆದ ಇನೋಳಿ ಜಮಾತ್ ಗ್ರೂಪ್ ಸಭೆಯಲ್ಲಿ ಅವರು ಮಾತನಾಡಿದರು.
ವಾಟ್ಸಾಪ್ ಮೂಲಕ ಆರಂಭಿಸಲಾದ ಜಮಾತ್ ಗ್ರೂಪ್ ಈಗಾಗಲೇ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಹಣ ವ್ಯಯಿಸಿದೆ. ಊರಿನ ಪ್ರತಿಯೊಬ್ಬರು ವೈಯುಕ್ತಿಕವಾಗಿ ಅಭಿವೃದ್ಧಿಗೊಂಡರೆ ಊರು ಅಭಿವೃದ್ಧಿ ಸಾಧ್ಯ. ತಾವು ದುಡಿದ ಹಣದಲ್ಲಿ ಕಿಂಚಿತ್ ಸಾಮಾಜಿಕ ಕಾರ್ಯಕ್ಕೆ ಬಳಸಲಾಗುತ್ತಿದ್ದು ವಿದೇಶದಲ್ಲಿರುವವರು ಸರ್ವ ರೀತಿಯ ಸಹಕಾರ ನೀಡುತ್ತಿದ್ದಾರೆ. ಊರಿನ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಕಳೆದ ವರ್ಷ 10ನೇ ತರಗತಿ ವಿದ್ಯಾರ್ಥಿಗಳ ವಿಶೇಷ ತರಗತಿಗೆ ಶಾಲೆಯಲ್ಲಿ ಬೇಕಾದ ಚಹಾ, ತಿಂಡಿ ವ್ಯವಸ್ಥೆ, ಪರಿಕರ ನೀಡಲಾಗಿದೆ. ಮುಂದೆಯೂ ವಿವಿಧ ಕಾರ್ಯಕ್ರಮ ಹಮ್ಮಿಕೊಂಡು ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.
ಪಾವೂರು ಗ್ರಾಮ ಪಂಚಾಯಿತಿ ಸದಸ್ಯ ಚಕ್ಕರ್ ಮಹಮ್ಮದ್ ಮಾತನಾಡಿ, ರಸ್ತೆ, ಚರಂಡಿ ಮುಂತಾದವುಗಳ ಸಮರ್ಪಕ ವ್ಯವಸ್ಥೆಯೂ ಊರಿನ ಅಭಿವೃದ್ಧಿಗೆ ಸಹಕಾರಿಯಾಗಿದೆ. ಜಮಾತ್ ಗ್ರೂಪ್ ಮುಖಾಂತರ ಇಂತಹ ಕಾರ್ಯಗಳ ಬಗ್ಗೆ ಸರ್ಕಾರ, ಸ್ಥಳೀಯ ಸಂಸ್ಥೆಗಳ ಗಮನ ಸೆಳೆಯಬೇಕಿದ್ದು, ಜನಪ್ರತಿನಿಧಿಗಳೂ ಸಹಕಾರ ನೀಡಬೇಕು ಎಂದರು.
ಜಮಾತ್ ಗ್ರೂಪ್ ಸ್ಥಾಪಕ ಹಾರೀಸ್ ಕಲ್ಲಕಂಡ ಅಧ್ಯಕ್ಷತೆ ವಹಿಸಿದ್ದರು. ಇನೋಳಿ ಜಾಮಿಯಾ ಮುಬಾರಕ್ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್, ಸದಸ್ಯ ಹುಸೈನ್ ಬಾವು, ಬಿ ಸೈಟ್ ಹಿದಾಯತುಲ್ ಇಸ್ಲಾಂ ಮದರಸಾದ ಕೋಶಾಧಿಕಾರಿ ಹಮೀದ್, ಇಕ್ಬಾಲ್ ಕಕ್ಕೆಬೊಟ್ಟು, ಫಾರೂಕ್ ಪೊರ್ಸೋಟ, ಬಿ ಸೈಟ್ ಹಿದಾಯತುಲ್ ಇಸ್ಲಾಂ ಯಂಗ್ಮೆನ್ಸ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಅಕ್ರಮ್, ಕಾರ್ಯದರ್ಶಿ ಸಿ.ಇಸ್ಮಾಯಿಲ್, ಸದಸ್ಯ ಅಬೂಬಕ್ಕರ್, ರಿಯಾರ್ ಮೈಕೋಡಿ, ಝಕರಿಯಾ, ರಶೀದ್ ಮೊದಲಾದವರು ಉಪಸ್ಥಿತರಿದ್ದರು.