ಸಪ್ತಭಾಷಾ ಸಂಶೋಧನಾ ಕೇಂದ್ರದ ಉದ್ಘಾಟನೆ ಭಾಗ್ಯ ಎಂದು ?
[2307563].jpg)
ಕಾಸರಗೋಡು,ಆ.22 : ಮಂಜೇಶ್ವರದಲ್ಲಿ ಸಪ್ತಭಾಷಾ ಸಂಶೋಧನಾ ಕೇಂದ್ರ ಕನಸಾಗಿ ಉಳಿದುಕೊಂಡಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡರೂ ಇನ್ನೂ ಉದ್ಘಾಟನೆ ಭಾಗ್ಯ ಲಭಿಸಿಲ್ಲ. ಕಾಮಗಾರಿ ಪೂರ್ಣಗೊಂಡು ತಿಂಗಳುಗಳು ಸಂದರೂ ಈ ಬಗ್ಗೆ ಅಧಿಕಾರಿಗಳು ಗಮನ ನೀಡಿಲ್ಲ.
ಕಣ್ಣೂರು ವಿಶ್ವವಿದ್ಯಾನಿಲಯ ಅಧೀನತೆಯಲ್ಲಿ ಮಂಜೇಶ್ವರ ಗೋವಿಂದ ಪೈ ಕಾಲೇಜು ಸಮೀಪ ಸಂಶೋಧನಾ ಕೇಂದ್ರ ಕ್ಕೆ ಕಟ್ಟಡ ನಿರ್ಮಿಸಲಾಗಿದೆ.
ಕಳೆದ ಜನವರಿ ಕೊನೆಗೆ ಕಾಮಗಾರಿ ಪೂರ್ಣಗೊಂಡಿತ್ತು. ಕಟ್ಟಡ ನಿರ್ಮಾಣಗೊಂಡರೂ ಇನ್ನೂ ಕಾರ್ಯಾರಂಭಗೊಳ್ಳದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.
ಕನ್ನಡ , ಮಲಯಾಳ , ತುಳು , ಕೊಂಕಣಿ, ಉರ್ದು , ಬ್ಯಾರಿ , ಮರಾಠಿ ಭಾಷೆಗಳ ಕೃತಿಗಳು , ತಾಳೆ ಗ್ರಂಥ , ಯಕ್ಷ ಗಾನ , ಇತರ ಕಲಾರೂಪ , ಪ್ರಮುಖ ಸಾಹಿತಿ, ಕವಿಗಳ ಸಾಂಸ್ಕ್ರತಿಕ , ಸಾಹಿತ್ಯಿಕ ಹಿನ್ನಲೆ ಸಾರುವ ಸಪ್ತಭಾಷಾ ಸಂಶೋಧನಾ ಅಧ್ಯಯನ ಕೇಂದ್ರ ವನ್ನು ಇಲ್ಲಿ ಆರಂಭಿಸುವ ನಿಟ್ಟಿನಲ್ಲಿ ಕೇಂದ್ರಕ್ಕೆ ಕಟ್ಟಡ ನಿರ್ಮಿಸಲಾಗಿದೆ.
ಕನ್ನಡ ಎಂ . ಫಿಲ್ ಕೋರ್ಸ್ ಆರಂಭಿಸಲು , ಏಳು ಭಾಷೆಗಳ ಸಾಹಿತ್ಯ , ಸಾಂಸ್ಕೃತಿಕ ಕಾರ್ಯಕರ್ತರನ್ನು ಒಳಗೊಂಡ ಚರ್ಚೆ , ಸಂವಾದ , ಗೋಷ್ಠಿಗಳನ್ನು ಆಯೋಜಿಸಿಸುವ ಬಗ್ಗೆ ಭರವಸೆ ನೀಡಲಾಗಿತ್ತು.
ಈಗ ಉನ್ನತ ಅಧ್ಯಯನಕ್ಕೆ ಮಂಗಳೂರು ಮತ್ತು ಇತರ ಕಡೆಗಳನ್ನು ಅವಲಂಬಿಸಬೇಕಿರುವುದರಿಂದ ಮಂಜೇಶ್ವರದಲ್ಲಿ ಕೇಂದ್ರ ಆರಂಭಗೊಂಡಲ್ಲಿ ಸಾಕಷ್ಟು ಅನುಕೂಲ ಲಭಿಸಲಿದೆ.
ಸುಮಾರು 1.42 ಕೋಟಿ ರೂ . ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಆದರೆ ಕಟ್ಟಡ ತಲೆ ಎತ್ತಿದರೂ ಕಾರ್ಯಾರಂಭಗೊಳ್ಳದಿರುವ ಬಗ್ಗೆ ನಿರಾಶೆ ಮೂಡಿಸಿದೆ.







