ಸ್ಕೈ ವಾಕ್ ಕಾಮಗಾರಿಗೆ ಶಿಲಾನ್ಯಾಸ
![ಸ್ಕೈ ವಾಕ್ ಕಾಮಗಾರಿಗೆ ಶಿಲಾನ್ಯಾಸ ಸ್ಕೈ ವಾಕ್ ಕಾಮಗಾರಿಗೆ ಶಿಲಾನ್ಯಾಸ](https://www.varthabharati.in/sites/default/files/images/articles/2016/08/23/DSC_0529.jpg)
ಮಂಗಳೂರು, ಆ. 23: ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಸಹಭಾಗಿತ್ವದಲ್ಲಿ ನಗರದ ಪುರಭವನದ ಬಳಿ ಹೊಸದಾಗಿ ನಿರ್ಮಿಸಲುದ್ದೇಶಿಸಿರುವ ಸ್ಕೈ ವಾಕ್ (ಮೇಲ್ಸೇತುವೆ) ಕಾಮಗಾರಿಯ ಶಿಲಾನ್ಯಾಸವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಇಂದು ಸಂಜೆ ನಗರದ ಪುರಭವನದಲ್ಲಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಪಾದಚಾರಿಗಳಿಗೆ ರಸ್ತೆ ದಾಟಲು ಅನುಕೂಲವಾಗುವ ನಿಟ್ಟಿನಲ್ಲಿ ಎಸ್ಕಲೇಟರ್ ಅಳವಡಿಸಿ ನಿರ್ಮಾಣವಾಗಲಿರುವ ಸ್ಕೈ ವಾಕರ್ ಮಂಗಳೂರಿಗೆ ಹೊಸತಾಗಿದೆ ಎಂದರು.
ಶಾಸಕ ಜೆ.ಆರ್.ಲೋಬೊ ಮಾತನಾಡಿ, 1.57 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸ್ಕೈ ವಾಕರ್ ಕಾಮಗಾರಿಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ 78 ಲಕ್ಷ ರೂ., ನಗರಾಭಿವೃದ್ದಿ ಇಲಾಖೆಯಿಂದ 71 ಲಕ್ಷ ರೂ. ಹಾಗೂ ಪಾಲಿಕೆಯಿಂದ 7 ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದೆ ಎಂದರು. ರೈಲ್ವೆ ನಿಲ್ದಾಣದಿಂದ ನಗರಕ್ಕೆ ಬರುವ ಜನರು ರಸ್ತೆ ದಾಟಲು ರಸ್ತೆ ಬದಿಯಲ್ಲೇ ಕಾಯಬೇಕಾದ ಪರಿಸ್ಥಿತಿ ಇರುವುದರಿಂದ ಹಾಗೂ ಕೆಲಸ ಕಾರ್ಯಗಳಿಗೆ ಮಿನಿವಿಧಾನಸೌದಕ್ಕೆ ಆಗಮಿಸುವ ಜನರಿಗೆ ರಸ್ತೆ ದಾಟಲು ಎಸ್ಕಲೇಟರ್ ಸ್ಕೈ ವಾಕ್ ಅನುಕಾಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ, ಮೇಯರ್ ಹರಿನಾಥ್, ಉಪಮೇಯರ್ ಸುಮಿತ್ರಾ ಕೆ., ಮನಪಾ ಆಯುಕ್ತ ಮುಹಮ್ಮದ್ ನಝೀರ್, ಪಾಲಿಕೆಯ ಸದಸ್ಯರಾದ ಎ.ಸಿ.ವಿನಯರಾಜ್, ದಿವಾಕರ್, ಲ್ಯಾನ್ಸ್ಲಾಟ್ ಪಿಂಟೊ, ಕವಿತಾ ಸನಿಲ್, ಜುಬೇದಾ, ಬಶೀರ್ ಅಹ್ಮದ್, ಟಿ.ಕೆ.ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.