ಮಕ್ಕಳ ಕ್ರಿಯಾಶೀಲತೆಗೆ ಕಡಿವಾಣ ಹಾಕದಿರಿ : ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ
![ಮಕ್ಕಳ ಕ್ರಿಯಾಶೀಲತೆಗೆ ಕಡಿವಾಣ ಹಾಕದಿರಿ : ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ ಮಕ್ಕಳ ಕ್ರಿಯಾಶೀಲತೆಗೆ ಕಡಿವಾಣ ಹಾಕದಿರಿ : ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ](https://www.varthabharati.in/sites/default/files/images/articles/2016/08/23/23mdbkalikamba.jpg)
ಮೂಡುಬಿದಿರೆ, ಆ.23: ಮಕ್ಕಳ ಕ್ರಿಯಾಶೀಲತೆಗೆ ಕಡಿವಾಣ ಹಾಕುವುದು, ಅವರು ಚಟುವಟಿಕೆಗಳನ್ನು ನಡೆಸದಂತೆ ಬಂಧಿಸಿಡುವುದು ತಪ್ಪು. ಇದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ, ಸ್ವಂತಿಕೆಯನ್ನು ಕಳೆದುಕೊಳ್ಳುವ ಅಪಾಯವಿದೆ. ಅತಿಯಾದ ವೈಭವೀಕರಣವೂ ಸಲ್ಲದು ಎಂದು ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ ಸಂಪಾಜೆ ಹೇಳಿದರು.
ಇಲ್ಲಿನ ಕಾಳಿಕಾಂಬಾ ಸೇವಾ ಸಮಿತಿಯು ಕಾಳಿಕಾಂಬಾ ದೇವಸ್ಥಾನದಲ್ಲಿ ರವಿವಾರ ನಡೆದ ಯಕ್ಷಗಾನ ತಾಳಮದ್ದಳೆಯ ಸಂದರ್ಭದಲ್ಲಿ 10 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಅವರು ಮಾತನಾಡಿದರು.
ಮಕ್ಕಳು ಮುಕ್ತವಾಗಿ ಬೆಳೆಯುವ ವಾತಾವರಣ ಕಲ್ಪಿಸಬೇಕು. ಧನಾತ್ಮಕವಾದ ಅಂಶಗಳನ್ನು ಪ್ರೋತ್ಸಾಹಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಜಬ್ಬಾರ್ ಸಮೋ ಅವರು ಇತ್ತೀಚೆಗೆ ನಿಧನರಾದ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿಯವರ ಸಂಸ್ಮರಣೆ ನಡೆಸಿದರು.
ಕ್ಷೇತ್ರದ ಆಡಳಿತ ಮೊಕ್ತೇಸರ ಸುಂದರ ಜಿ.ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಮೊಕ್ತೇಸರರಾದ ಜಯಕರ ಪುರೋಹಿತ್, ಬಾಲಕೃಷ್ಣ ಆಚಾರ್ಯ, ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಶಿವರಾಮ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಗದೀಶ ಬೇಲಾಡಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ರಾಮಾಂಜನೇಯ ಯಕ್ಷಗಾನ ತಾಳಮದ್ದಳೆ ನಡೆಯಿತು.