ಕೇರಳದ ಜೊತೆ ಕತ್ತಿ, ಸುತ್ತಿಗೆಯನ್ನೂ ಉಳಿಸಿಕೊಂಡ ಸಿಪಿಎಂ!
ಹೊಸದಿಲ್ಲಿ, ಆ.23: ಕಳೆದ ಲೋಕಸಭಾ ಚುನಾವಣೆ ಹಾಗೂ ನಂತರ ನಡೆದ ಅಸೆಂಬ್ಲಿ ಚುನಾವಣೆಗಳಲ್ಲಿ ಕಳಪೆ ನಿರ್ವಹಣೆ ತೋರಿ ತಮ್ಮ ರಾಷ್ಟ್ರೀಯ ಪಕ್ಷ ಸ್ಥಾನ ಮಾನ ಕಳೆದುಕೊಳ್ಳಲಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಬಹುಜನ ಸಮಾಜ ಪಕ್ಷ ಹಾಗೂ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ರಕ್ಷಣೆಗೆ ಭಾರತದ ಚುನಾವಣಾ ಆಯೋಗ ಮುಂದೆ ಬಂದಿದೆ. ಈ ಪಕ್ಷಗಳಿಗೆ ತಂತಮ್ಮ ಚುನಾವಣಾ ಚಿಹ್ನೆಗಳನ್ನು ಉಳಿಸಿಕೊಂಡು ಮುಂದುವರಿಸಿಕೊಂಡು ಹೋಗಲು ಚುನಾವಣಾ ಆಯೋಗದ ಹೊಸ ಆದೇಶ ಸಹಾಯ ಮಾಡಿದೆ.
ಪ್ರತಿ ಎರಡು ಸತತ ಚುನಾವಣೆಗಳ ಬಳಿಕ ಪಕ್ಷಗಳ ರಾಷ್ಟ್ರೀಯ ಸ್ಥಾನಮಾನದ ಬಗ್ಗೆ ಪರಿಶೀಲಿಸಲಾಗುವು ದಲ್ಲದೆ ಈಗಿನಂತೆ ಪ್ರತಿ ಚುನಾವಣೆಯ ನಂತರ ನಡೆಸ ಲಾಗುವುದಿಲ್ಲ ಎಂದು ಸೋಮವಾರ ತಿದ್ದುಪಡಿಗೊಂಡ ಇಲೆಕ್ಷನ್ ಸಿಂಬಲ್ಸ್ (ರಿಸರ್ವೇಶನ್ ಆ್ಯಂಡ್ ಅಲಾಟ್ಮೆಂಟ್) ಆದೇಶ ತಿಳಿಸುತ್ತವೆ. ಮೇಲೆ ತಿಳಿಸಿದ ಪಕ್ಷಗಳು ಸೇರಿದಂತೆ ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾ ದಳಗಳು ಈ ನಿಟ್ಟಿನಲ್ಲಿ ಈ ಹಿಂದೆ ಮನವಿ ಸಲ್ಲಿಸಿದ್ದವು.
ಹೊಸ ಆದೇಶದಂತೆ ಲೋಕಸಭಾ ಅಥವಾ ವಿಧಾನಸಭಾ ಚುನಾವಣೆಗಳಲ್ಲಿ ಶೇ.6 ಮತಗಳನ್ನು ಪಡೆದ ಪಕ್ಷಗಳು ಮಾತ್ರ ರಾಷ್ಟ್ರೀಯ ಪಕ್ಷಗಳೆಂಬ ಅರ್ಹತೆ ಪಡೆಯುತ್ತವೆ. ಮೂರು ರಾಜ್ಯಗಳಲ್ಲಿ ಪಕ್ಷವೊಂದಕ್ಕೆ 11 ಸಂಸದರಿದ್ದರೆ ಸಹ ಅದು ರಾಷ್ಟ್ರೀಯ ಪಕ್ಷವೆಂದು ಪರಿಗಣಿತವಾಗುತ್ತದೆ.
2014ರ ಚುನಾವಣೆಯ ನಂತರ ಬಿಜೆಪಿ, ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾತ್ರ ರಾಷ್ಟ್ರೀಯ ಪಕ್ಷಗಳೆಂಬ ಸ್ಥಾನಮಾನ ಪಡೆದಿದೆ. ಚುನಾವಣಾ ಫಲಿತಾಂಶಗಳು ಹಲವು ಅಂಶಗಳ ಮೇಲೆ ಅವಲಂಬಿತವಾಗುತ್ತವೆ ಹಾಗೂ ಹಲವಾರು ಬಾರಿ ಬಲಿಷ್ಠ ಪಕ್ಷಗಳೇ ಚುನಾವಣೆಯಲ್ಲಿ ಕಳಪೆ ನಿರ್ವಹಣೆ ತೋರುವುದರಿಂದ ರಾಷ್ಟ್ರೀಯ ಪಕ್ಷಗಳ ಸ್ಥಾನಮಾನವನ್ನು ಪ್ರತಿ 10 ವರ್ಷಗಳಿಗೊಮ್ಮೆ ನಿರ್ಧರಿಸಬೇಕು ಎಂದು ಹಲವು ಪಕ್ಷಗಳು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದವು.





