ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳ ಬಂಧನ
ಮಾನರ್ಮಿಕಟ್ಟೆ ಸಂದೀಪ್ ಶೆಟ್ಟಿ ಕೊಲೆ ಯತ್ನ ಪ್ರಕರಣ

ಮಂಗಳೂರು, ಆ.24: 2016ರ ಮೇ 24ರಂದು ಮಂಗಳೂರಿನ ಮಾರ್ನಮಿಕಟ್ಟೆಯಲ್ಲಿ ಸಂಭವಿಸಿದ್ದ ಸಂದೀಪ್ ಶೆಟ್ಟಿ ಎಂಬವರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ತಿಳಿಸಿದ್ದಾರೆ.
ಮಂಗಳೂರು ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಲೆಮರೆಸಿಕೊಂಡಿದ್ದ ಆರೋಪಿಗಳಾದ ನಗರದ ಮಂಕಿಸ್ಟಾಂಡ್ನ ವಿಜಯ ಯಾನೆ ಮಂಕಿಸ್ಟಾಂಡ್ ವಿಜಯ (30), ಮೆಲ್ರಿಕ್ ಯಾನೆ ಮೆಲ್ರಿಕ್ ಡಿಸೋಜ (20), ಪ್ರವೀಣ್ ಯಾನೆ ಚೋಟು (23)ರನ್ನು ಬೆಳಗಾವಿ ಜಿಲ್ಲೆಯ ರಾಯ್ಬಾಗ್ ತಾಲೂಕಿನ ಬೆಕ್ಕೇರಿ ಎಂಬಲ್ಲಿ ಮಂಗಳವಾರ ರಾತ್ರಿ ಬಂಧಿಸಲಾಗಿದೆ ಎಂದು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ನಿಖಿಲ್ ಶೆಟ್ಟಿ ಯಾನೆ ಎಲಿ, ಅಣ್ಣಯ್ಯ ಯಾನೆ ಅಣ್ಣು, ಧನರಾಜ್ ಅಲಿಯಾಸ್ ಧನು, ಅಭಿಷೇಕ್ ಮತ್ತು ಸಂಪತ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ವೈಯಕ್ತಿಕ ದ್ವೇಷವೇ ಘಟನೆಗೆ ಕಾರಣ ಎಂದು ಹೇಳಿದರು.
ಮಂಕಿಸ್ಟಾಂಡ್ ವಿಜಯನ ಮೇಲೆ ಕೊಲೆಯತ್ನ, ಕೊಲೆ ಸೇರಿದಂತೆ 16 ಪ್ರಕರಣಗಳಿದೆ. ಮೆಲ್ರಿಕ್ ಮೇಲೆ 5 ಪ್ರಕರಣ ಮತ್ತು ಪ್ರವೀಣ್ ಮೇಲೆ 3 ಪ್ರರಣಗಳಿದೆ ಎಂದು ಹೇಳಿದರು. ಆರೋಪಿಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ಪೊಲೀಸ್ ಸಿಬ್ಬಂದಿಗಳಿಗೆ 10 ಸಾವಿರ ನಗದು ಪುರಸ್ಕಾರ ಮತ್ತು ಪ್ರಶಂಸ ಪತ್ರ ನೀಡಲಾಗುವುದು ಎಂದು ಹೇಳಿದರು.
ಆರೋಪಿಗಳು ಸುಮಾರು ಮೂರು ತಿಂಗಳುಗಳಿಂದ ತಲೆ ಮರೆಸಿಕೊಂಡಿದ್ದು, ಇವರುಗಳಿಗೆ ಹಣಕಾಸು ನೆರವು ಹಾಗೂ ಆಶ್ರಯ ನೀಡಿದವರ ವಿರುದ್ದವು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಶ್ರುತಿ ಎನ್.ಎಸ್, ಮಂಗಳೂರು ದಕ್ಷಿಣ ಠಾಣೆಯ ಪೊಲೀಸ್ ನಿರೀಕ್ಷಕ ಬೆಳ್ಳಿಯಪ್ಪ ಕೆ.ಯು, ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಠಾಣೆಯ ಪೊಲೀಸ್ ಉಪನಿರೀಕ್ಷಕ ಮುಹಮ್ಮದ್ ಶರೀಫ್ ಕೆ ಬಂಧಿಸಿದ್ದಾರೆ. ಆರೋಪಿಗಳ ಪತ್ತೆಗೆ ಪಿ.ಎಸ್.ಐ ಅನಂತ ಮುರ್ಡೇಶ್ವರ , ಎ.ಎಸ್.ಐ ಕೃಷ್ಣ , ಸಿಬ್ಬಂದಿಗಳಾದ ಗಂಗಾಧರ, ಶೇಖರ ಗಟ್ಟಿ, ವಿಶ್ವನಾಥ,. ಧನಂಜಯ, ಸತ್ಯನಾರಾಯಣ, ಪ್ರದೀಪ್ ಕುಮಾರ್ ರೈ, ನೂತನ್ ಕುಮಾರ್, ವಿನೋದ್, ಸಿದ್ದಾರ್ಥ, ಪ್ರವೀಣ್ ಶೆಟ್ಟಿ, ಚಂದ್ರಶೇಖರ, ಸುನಿಲ್ ಕುಮಾರ್, ಪುರುಷೋತ್ತಮ ರೈ, ಭೀಮಪ್ಪ ಉಪ್ಪಾರ, ವೀರೇಶ್ ಮತ್ತು ಕಂಪ್ಯೂಟರ್ ವಿಭಾಗದ ಮನೋಜ್ ಕುಮಾರ್ ಹಾಗೂ ಸುನಿಲ್ ಪ್ರವೀಣ್ ಪಿರೇರಾರವರು ಸಹಕರಿಸಿರುತ್ತಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಕೆ.ಎಂ.ಶಾಂತರಾಜು, ಡಾ.ಸಂಜೀವ ಎಂ ಪಾಟೀಲ್, ಎಸಿಪಿ ಶ್ರುತಿ ಎನ್ .ಎಸ್ ಉಪಸ್ಥಿತರಿದ್ದರು.







