ಕಾಸರಗೋಡು: ಆಸ್ಪತ್ರೆಯಿಂದ ದಲಿತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ
ಮೂವರ ಬಂಧನ
![ಕಾಸರಗೋಡು: ಆಸ್ಪತ್ರೆಯಿಂದ ದಲಿತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಕಾಸರಗೋಡು: ಆಸ್ಪತ್ರೆಯಿಂದ ದಲಿತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ](https://www.varthabharati.in/sites/default/files/images/articles/2016/08/26/prathikal1-(1).jpg)
ಕಾಸರಗೋಡು, ಆ.26: ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ದಲಿತ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರಗೈದ ಘಟನೆ ಕಾಸರಗೋಡಿನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಪಟ್ಟನಂತೆ ಮೂವರನ್ನು ಬಂಧಿಸಲಾಗಿದೆ.
ಬಂಧಿತರನ್ನು ಉದುಮ ಕುಂಡುಂಕುಳಂಪಾರದ ನಿವಾಸಿಗಳಾದ ಕಿಶೋರ್(29), ಮಂಜುನಾಥ (34) ಮತ್ತು ಬಾರ ಮುಕುನ್ನತ್ತ್ನ ಅನಿಲ್ ಕುಮಾರ್(32) ಎಂದು ಗುರುತಿಸಲಾಗಿದೆ. ರಾಜಪುರಂ ಪರಿಸರದ ಶಾಲೆಯೊಂದರ ಹತ್ತನೆ ತರಗತಿಯ ವಿದ್ಯಾರ್ಥಿನಿ, ಮೂಲತಃ ಕರ್ನಾಟಕ ನಿವಾಸಿಯಾದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಈ ಮೂವರನ್ನು ಪೊಲೀಸರು ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ.
ಆ.23ರಂದು ಬಾಲಕಿಯು ಚಿಕಿತ್ಸೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಬಂದಿದ್ದಳು. ಆಸ್ಪತ್ರೆಯಲ್ಲಿ ತಾತ್ಕಾಲಿಕ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರೋಪಿ ಕಿಶೋರ್ ಆಸ್ಪತ್ರೆಯಲ್ಲಿ ಆಕೆಯನ್ನು ಪರಿಚಯಿಸಿಕೊಂಡು, ಚಿಕಿತ್ಸೆಗೆ ಬೇಕಾದ ಎಲ್ಲಾ ಸಹಾಯ ಒದಗಿಸುವುದಾಗಿ ನಂಬಿಸಿ ಪುಸಲಾಯಿಸಿ ಆಕೆಯನ್ನು ತನ್ನ ಸ್ವಂತ ಆಟೊರಿಕ್ಷಾದಲ್ಲಿ ಕರೆದೊಯ್ದಿದ್ದ. ಅಲ್ಲದೆ, ದಾರಿಮಧ್ಯೆ ಇತರ ಇಬ್ಬರ ಸ್ನೇಹಿತರನ್ನೂ ಆಟೊರಿಕ್ಷಾಕ್ಕೆ ಹತ್ತಿಸಿ ಕರೆದೊಯ್ದಿದ್ದು ಬಳಿಕ ಆ ಮೂವರೂ ಸೇರಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಬಳಿಕ ಮರುದಿನ ಆಕೆಯನ್ನು ಹೊಸದುರ್ಗದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ದೂರು ನೀಡಲಾಗಿದೆ.
ತೀವ್ರವಾಗಿ ಅಸ್ವಸ್ಥಗೊಂಡಿದ್ದ ಬಾಲಕಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಾಗ ಸಾಮೂಹಿಕ ಲೈಂಗಿಕ ಕಿರುಕುಳಕ್ಕೊಳಗಾದ ವಿಷಯ ವೈದ್ಯರ ಗಮನಕ್ಕೆ ಬಂದಿದೆ. ಬಳಿಕ ಅವರು ನೀಡಿದ ಮಾಹಿತಿಯಂತೆ ಪೊಲೀಸರು ಕೇಸು ದಾಖಲಿಸಿ ಮೂವರನ್ನು ಬಂಧಿಸಿದ್ದಾರೆ.