ಉಡುಪಿ: ಲೀಲೋತ್ಸವದೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿಗೆ ತೆರೆ

ಉಡುಪಿ, ಆ.26: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಕಳೆದ ಒಂದು ವಾರದಿಂದ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಗಳು ಇಂದು ಆಕರ್ಷಕ ಶ್ರೀಕೃಷ್ಣ ಲೀಲೋತ್ಸವ- ವಿಟ್ಲಪಿಂಡಿ ಯೊಂದಿಗೆ ಸಂಪನ್ನಗೊಂಡಿತು.
ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ಶ್ರದ್ಧೆ, ಭಕ್ತಿಯಿಂದ ಕೃಷ್ಣನ ಬಾಲಲೀಲೆಗಳನ್ನು ನೆನಪಿಸುವ ಹಾಗೂ ಅದಕ್ಕೆ ಸಂಬಂಧಿಸಿದ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ವೀಕ್ಷಿಸಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು.
ಇಂದು ನಡೆದ ಶ್ರೀಕೃಷ್ಣ ಲೀಲೋತ್ಸವಕ್ಕೆ ಪೂರ್ವಭಾವಿಯಾಗಿ ಕಳೆದೊಂದು ವಾರದಿಂದ ಶ್ರೀಕೃಷ್ಣ ಮಠ ಹಾಗೂ ರಾಜಾಂಗಣದಲ್ಲಿ ಹಲವು ಕಾರ್ಯಕ್ರಮ ಮತ್ತು ಸ್ಪರ್ಧೆಗಳು ನಡೆದಿದ್ದವು. ಈ ಬಾರಿ ಎರಡು ದಿನ-ಬುಧವಾರ ಮತ್ತು ಗುರುವಾರ- ಉಡುಪಿಯ ಜನತೆ ಉಪವಾಸ ಹಾಗೂ ಜಾಗರಣೆಯೊಂದಿಗೆ ಶ್ರೀಕೃಷ್ಣನ ಜನ್ಮದಿನದ ಸಂಭ್ರಮವನ್ನು ಆಚರಿಸಿತ್ತು. ಇಂದು ನಂದಗೋಕುಲದಲ್ಲಿ ಬಾಲಕೃಷ್ಣನ ತುಂಟತನವನ್ನು ನೆನಪಿಸುವ ವಿಶಿಷ್ಟವಾದ ವಿಟ್ಲಪಿಂಡಿ (ಮೊಸರು ಕುಡಿಕೆ) ಆಟದಲ್ಲಿ ಭಾಗಿಯಾಗಿ ಖುಷಿಪಟ್ಟಿತು. ಕಳೆದ ರಾತ್ರಿ 11:52ಕ್ಕೆ ಪರ್ಯಾಯ ಪೇಜಾವರಶ್ರೀಗಳು ಗರ್ಭಗುಡಿಯಲ್ಲಿ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಹಾಗೂ ಹೊರಗೆ ತೀರ್ಥ ಮಂಟಪದ ಬಳಿ ಚಂದ್ರನಿಗೆ ಅರ್ಘ್ಯ ಪ್ರದಾನ ಮಾಡಿದರು. ಬಳಿಕ ನೆರೆದ ಭಕ್ತಾದಿಗಳಿಗೆ ಅರ್ಘ್ಯ ಬಿಡಲು ಅವಕಾಶ ನೀಡಲಾಯಿತು.
ಶೋಭಾ ಯಾತ್ರೆ:
ಇಂದು ಅಪರಾಹ್ನ 3:30ಕ್ಕೆ ವಿಟ್ಲಪಿಂಡಿ ಉತ್ಸವ ಆರಂಭಗೊಂಡಿತು. ಶ್ರೀಕೃಷ್ಣ ಲೀಲೋತ್ಸವದ ವೈಭವದ ಶೋಭಾ ಯಾತ್ರೆಯಲ್ಲಿ ಪರ್ಯಾಯ ಪೇಜಾವರ ಮಠದ ಹಿರಿಯ ಮತ್ತು ಕಿರಿಯ ಯತಿಗಳೊಂದಿಗೆ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರು ಅಷ್ಟಮಠಗಳ ವತಿಯಿಂದ ಭಾಗವಹಿಸಿದ್ದರು. ಉಳಿದಂತೆ ಕ್ಷತ್ರೀಯ ಪೀಠದ ಶ್ರೀವಿಶ್ವಾಧಿರಾಜ ತೀರ್ಥ ಸ್ವಾಮೀಜಿ, ಶ್ರೀವಿಶ್ವನಂದನ ತೀರ್ಥ ಸ್ವಾಮೀಜಿ, ಶ್ರೀವಿಶ್ವಭೂಷಣ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
ಈ ಉತ್ಸವಕ್ಕೆಂದು ವಿಶೇಷವಾಗಿ ತಯಾರಿಸಲಾದ ಮೃಣ್ಮಯಿ (ಮಣ್ಣಿನಲ್ಲಿ ತಯಾರಿಸಿದ ಚಿನ್ನದ ಬಣ್ಣದ ಶ್ರೀಕೃಷ್ಣನ ಮೂರ್ತಿ) ಮೂರ್ತಿಯನ್ನು ಚಿನ್ನದ ರಥದಲ್ಲಿರಿಸಿ ರಥಬೀದಿಯ ಸುತ್ತ ಮೆರವಣಿಗೆ ನಡೆಸಲಾಯಿತು. ನವರತ್ನ ರಥದಲ್ಲಿ ಅನಂತೇಶ್ವರ, ಚಂದ್ರವೌಳೀಶ್ವರ ಉತ್ಸವ ಮೂರ್ತಿಯನ್ನಿರಿಸಿ ಮೆರವಣಿಗೆಯಲ್ಲಿ ತರಲಾಯಿತು. ಈ ಸಂದರ್ಭದಲ್ಲಿ ಕೃಷ್ಣನ ಬಾಲಲೀಲೆಗಳನ್ನು ನೆನಪಿಸುವ ಸಲುವಾಗಿ ಮಣ್ಣಿನ ಮಡಕೆಯಲ್ಲಿ ಮೊಸರು, ಹಾಲು, ಓಕುಳಿಗಳನ್ನು ತುಂಬಿ ರಥಬೀದಿಯ ಸುತ್ತಲೂ ವಿಶೇಷವಾಗಿ ನಿರ್ಮಿಸಿದ 15 ಗುರ್ಜಿಗಳಿಗೆ ಅವುಗಳನ್ನು ಕಟ್ಟಿ ಯಾದವ ವೇಷಧಾರಿಗಳಾದ ಉಡುಪಿಯ ಗೊಲ್ಲರು ಉದ್ದನೆಯ ಕೋಲುಗಳಿಂದ ಮಡಕೆಗಳನ್ನು ಒಡೆಯುವ ಆಟವನ್ನು ಆಡಲಾಯಿತು. ಇದು ಕೃಷ್ಣನಿಗೆ ಅತ್ಯಂತ ಪ್ರಿಯದ ಆಟವೆಂದು ಜನರ ನಂಬಿಕೆಯಾಗಿದ್ದು ಇದನ್ನು ಮೊಸಕು ಕುಡಿಕೆ ಎಂದು ಕರೆಯಲಾಗುತ್ತದೆ. ಈ ಆಟವನ್ನು ರಥಬೀದಿಯ ಸುತ್ತಲೂ ಆಡಿದ ನಂತರ ಮೆರವಣಿಗೆಯ ಕೊನೆಯಲ್ಲಿ ಚಿನ್ನದ ರಥದಲ್ಲಿರಿಸಿದ ಕೃಷ್ಣನ ಉತ್ಸವ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸುವುದರೊಂದಿಗೆ ಈ ಬಾರಿಯ ಕೃಷ್ಣ ಜಯಂತಿ ಸಂಪನ್ನಗೊಂಡಿತು. ಬಳಿಕ ರಥಬೀದಿಯ ರಾಘವೇಂದ್ರ ಮಠದ ಎದುರು, ರಾಜಾಂಗಣ ಸೇರಿದಂತೆ ಮಠ ಆಸುಪಾಸಿನ ವಿವಿದೆಡೆ ಹಾಕಲಾದ ವೇದಿಕೆಯಲ್ಲಿ ಹುಲಿ ವೇಷಗಳು ಹಾಗೂ ಇತರ ವೇಷಗಳು ವಿಶೇಷ ಪ್ರದರ್ಶನ ನೀಡಿದವು. ಈ ಬಾರಿ ಬುಡಕಟ್ಟು ಜನಾಂಗದಿಂದ, ಹಾಲಿವುಡ್ ಸಿನಿಮಾಗಳಿಂದ ಸ್ಪೂರ್ತಿ ಪಡೆದ ಹಲವು ವೈವಿದ್ಯಮಯ ವೇಷಗಳು ಕಂಡಬಂದವು.
ರವಿವಾರ ಬೆಳಗ್ಗಿನಿಂದಲೇ ರಾಜಾಂಗಣ ಸೇರಿದಂತೆ ಮಠದ ವಿವಿದೆಡೆಗಳಲ್ಲಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ರಾಜಾಂಗಣದಲ್ಲಿ ನಡೆದ ಸಂತರ್ಪಣೆಯಲ್ಲಿ ಸಾವಿರಾರು ಮಂದಿ ಸರದಿ ಸಾಲಿನಲ್ಲಿ ನಿಂತು ಪ್ರಸಾದ ಸ್ವೀಕರಿಸಿದರು. ಅಲ್ಲದೇ ಕೃಷ್ಣನಿಗೆ ಕಳೆದ ರಾತ್ರಿ ಅರ್ಪಿಸಿದ ಉಂಡೆ ಮತ್ತು ಚಕ್ಕುಲಿಗಳನ್ನು ರಥಗಳಿಂದ ಎಸೆಯದೇ, ಅಲ್ಲಲ್ಲಿ ಭಕ್ತರಿಗೆ ಹಂಚಲಾಯಿತು.







