ಸಿಆರ್ಝೆಡ್ ಸಮಸ್ಯೆ ಕುರಿತು ಕೇಂದ್ರ ಪರಿಸರ ಇಲಾಖೆ ಜೊತೆ ಚರ್ಚೆ: ಸಚಿವ ಪ್ರಮೋದ್
![ಸಿಆರ್ಝೆಡ್ ಸಮಸ್ಯೆ ಕುರಿತು ಕೇಂದ್ರ ಪರಿಸರ ಇಲಾಖೆ ಜೊತೆ ಚರ್ಚೆ: ಸಚಿವ ಪ್ರಮೋದ್ ಸಿಆರ್ಝೆಡ್ ಸಮಸ್ಯೆ ಕುರಿತು ಕೇಂದ್ರ ಪರಿಸರ ಇಲಾಖೆ ಜೊತೆ ಚರ್ಚೆ: ಸಚಿವ ಪ್ರಮೋದ್](https://www.varthabharati.in/sites/default/files/images/articles/2016/08/26/WhatsApp-Image-2016-08-26-at-18.16.jpg)
ಮಂಗಳೂರು, ಆ.26: ಸಿಆರ್ಝೆಡ್ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಎರಡು ಜಿಲ್ಲೆಗಳ ಸಂಸದರ ಜೊತೆಗೂಡಿ ಕೇಂದ್ರ ಪರಿಸರ ಇಲಾಖೆ ಜೊತೆ ಮಾತುಕತೆ ನಡೆಸಲಾಗುವುದು ಎಂದು ಮೀನುಗಾರಿಕಾ ಮತ್ತು ಯುವಜನ, ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಸ್ಯಾಂಡ್ಪಿಟ್ ಬೆಂಗ್ರೆಯ ಮಹಾಜನ ಸಭಾ ಬೆಂಗ್ರೆಯಿಂದ ನಿರ್ಮಾಣಗೊಂಡಿರುವ ‘ನೇತ್ರಾವತಿ‘ ಫೆರಿ ಬೋಟ್ ಹಾಗೂ ನೂತನ ಪ್ರಯಾಣಿಕರ ಜೆಟ್ಟಿಯನ್ನು ಸಾರ್ವಜನಿಕರಿಗೆ ಸಮರ್ಪಿಸಿ ಮಾತನಾಡಿದರು.
ಮಂಗಳೂರಿನಲ್ಲಿ 3ನೆ ಹಂತದ ಜೆಟ್ಟಿ ನಿರ್ಮಾಣಕ್ಕೆ ಕೇಂದ್ರದಿಂದ ಬರಬೇಕಿದ್ದ 33 ಕೋಟಿ ರೂ. ಅನುದಾನ ಬಾಕಿಯಿದೆ. ಸೆ.27 ರಿಂದ 29 ರವರೆಗೆ ದಿಲ್ಲಿಗೆ ಭೇಟಿ ನೀಡಲಿದ್ದು ಈ ಸಂದರ್ಭದಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಸಮಾರಂಭದ ಉದ್ಘಾಟನೆಯನ್ನು ಮನಪಾ ಸದಸ್ಯೆ ಮೀರಾ ಕೆ.ಕರ್ಕೇರ ನೆರವೇರಿಸಿದರು. ಶಾಸಕ ಜೆ.ಆರ್.ಲೋಬೊ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಸೆಸೆಲ್ಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸೋಹನ್ ಕೋಟ್ಯಾನ್, ಮುಹಮ್ಮದ್ ಝಮೀರ್, ಸ್ಫೂರ್ತಿ ಪುಷ್ಪರಾಜ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾಜನ ಸಭಾ ಬೆಂಗ್ರೆ ಅಧ್ಯಕ್ಷ ಚೇತನ್ ಬೆಂಗ್ರೆ, ಪ್ರಧಾನ ಕಾರ್ಯದರ್ಶಿ ಸಂಜಯ್ ಸುವರ್ಣ, ಮೀನುಗಾರಿಕಾ ಇಲಾಖೆಯ ನಿರ್ದೇಶಕ ವೀರಪ್ಪ ಗೌಡ ಉಪಸ್ಥಿತರಿದ್ದರು.