ಕಾಸರಗೋಡು: ದೋಣಿ ದುರಂತ; ಐವರು ಮೀನುಗಾರರಿಗೆ ಗಾಯ
ಕಾಸರಗೋಡು, ಆ.26: ಕಿಯೂರು ಸಮುದ್ರದಲ್ಲಿ ಶುಕ್ರವಾರ ಸಂಜೆ ದೋಣಿಯೊಂದು ಅವಘಡಕ್ಕೀಡಾಗಿದ್ದು, ಐವರು ಬೆಸ್ತರು ಗಾಯಗೊಂಡಿದ್ದಾರೆ.
ಕಿಯೂರಿನ ಆರಿಫ್ ಬಾವ ಎಂಬವರ ಫೈಬರ್ ದೋಣಿ ಶುಕ್ರವಾರ ದುರಂತಕ್ಕೀಡಾಗಿದ್ದು, ದೋಣಿಯಲ್ಲಿದ್ದ ಪ್ರಭೋಶ್ (25), ಶಾಜಿ (28) ಕೆ.ವಿ. ಆನಂದ (40), ಧನುಷ್ (24) ಸೇರಿದಂತೆ ಐವರು ಮೀನುಗಾರರು ಗಾಯಗೊಂಡಿದ್ದಾರೆ.
ದೋಣಿಯಲ್ಲಿ ಒಟ್ಟು 10 ಮಂದಿ ಮೀನುಗಾರರಿದ್ದರು. ಈ ಪೈಕಿ ಐವರು ಈಜಿ ದಡ ಸೇರಿದ್ದು, ಐವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದರು.
ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಇ. ಚಂದ್ರಶೇಖರನ್, ಉದುಮ ಶಾಸಕ ಕೆ. ಕುಂಞಿರಾಮನ್ ಮೊದಲಾದವರು ಭೇಟಿ ನೀಡಿದರು.ಇಂತಹ ದುರಂತಗಳು ನಡೆದ ಸಂದರ್ಭದಲ್ಲಿ ನಿರ್ಲಕ್ಷ ವಹಿಸದೆ ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಕರಾವಳಿ ಪೊಲೀಸರಿಗೆ ಸಚಿವರು ಆದೇಶ ನೀಡಿದರು.
ಗುರುವಾರ ಬೆಳಗ್ಗೆ ಎರಡು ಬೋಟ್ಗಳು ದುರಂತಕ್ಕೀಡಾಗಿ 20 ಮಂದಿ ಗಾಯಗೊಂಡಿದ್ದರು. ಈ ಸಂದರ್ಭದಲ್ಲಿ ಮಾಹಿತಿ ನೀಡಿದ್ದರೂ ಕರಾವಳಿ ಪೊಲೀಸರು ಒಂದೂವರೆ ಗಂಟೆ ವಿಳಂಬವಾಗಿ ಸ್ಥಳಕ್ಕಾಗಮಿಸಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು.
ದುರಂತದಿಂದ ನಷ್ಟ ಸಂಭವಿಸಿದವರಿಗೆ ಪರಿಹಾರ ಕಲ್ಪಿಸುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.