ಸಿಐಡಿ ತನಿಖೆ ಶೀಘ್ರ ಪೂರ್ಣ: ಸಚಿವ ಪರಮೇಶ್ವರ್
ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ
![ಸಿಐಡಿ ತನಿಖೆ ಶೀಘ್ರ ಪೂರ್ಣ: ಸಚಿವ ಪರಮೇಶ್ವರ್ ಸಿಐಡಿ ತನಿಖೆ ಶೀಘ್ರ ಪೂರ್ಣ: ಸಚಿವ ಪರಮೇಶ್ವರ್](https://www.varthabharati.in/sites/default/files/images/articles/2016/08/26/UD-A26 PARAMESHWAR.jpg)
ಉಡುಪಿ, ಆ.26: ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಕೆಲವೊಂದು ಲೋಪಗಳಾಗಿವೆ ಎಂಬ ಜನರ ಆರೋಪದ ಹಿನ್ನೆಲೆಯಲ್ಲಿ ಸತ್ಯವನ್ನು ಜನರ ಮುಂದಿಡುವ ಉದ್ದೇಶದಿಂದ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದೆ. ಆದಷ್ಟು ಬೇಗ ತನಿಖೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಉಡುಪಿ ಶ್ರೀಕೃಷ್ಣಮಠಕ್ಕೆ ಇಂದು ಆಗಮಿಸಿ, ಪರ್ಯಾಯ ಪೇಜಾವರಶ್ರೀ ಸ್ವಾಮೀಜಿಯಿಂದ ಆಶೀರ್ವಾದ ಪಡೆದ ಬಳಿಕ ಬಡಗುಮಳಿಗೆಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಈ ಪ್ರಕರಣದ ತನಿಖೆ ನಡೆಸಿ ವರದಿ ನೀಡಲು ಸಮಯ ನಿಗದಿಪಡಿಸಲು ಆಗಲ್ಲ. ಆದಷ್ಟು ಶೀಘ್ರದಲ್ಲಿ ತನಿಖೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದ ಅವರು, ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣದಲ್ಲಿ ಬಂಧಿತರು ಅಮಾಯಕರೇ ಎಂಬುದನ್ನು ಕಾನೂನು ಪ್ರಕ್ರಿಯೆ ನಿರ್ಧರಿಸುತ್ತದೆಯೇ ಹೊರತು ತಾನಲ್ಲ ಎಂದರು.
ರಮ್ಯಾ ತಾನು ನೀಡಿರುವ ಹೇಳಿಕೆ ಬಗ್ಗೆ ಅವರೇ ಈಗಾಗಲೇ ಸಮರ್ಥನೆ ಮಾಡಿಕೊಂಡಿದ್ದಾರೆ. ಅವರು ಯಾವ ದೃಷ್ಟಿಯಿಂದ ಹೇಳಿದರು ಎಂಬುದು ಬಹಳ ಮುಖ್ಯ. ಅವರು ಸಂಸದರಾಗಿದ್ದಾಗ ಅಲ್ಲಿಗೆ ಹೋದ ಸಂದರ್ಭದಲ್ಲಿ ಬಹಳ ಚೆನ್ನಾಗಿ ಆ ದೇಶದ ಜನ ನೋಡಿಕೊಂಡರು ಎಂಬ ಹಿನ್ನೆಲೆಯಲ್ಲಿ ಹೇಳಿರಬಹುದು. ಅದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸುವ ಆವಶ್ಯಕತೆ ಇಲ್ಲ ಎಂದು ಅವರು ಹೇಳಿದರು.
ಮಂಗಳೂರು ನರಕ ಎಂಬ ರಮ್ಯಾ ಹೇಳಿಕೆ ಬಗ್ಗೆ ತನಗೆ ಗೊತ್ತಿಲ್ಲ. ಅದಕ್ಕೆ ಪ್ರತಿಕ್ರಿಯೆ ಕೂಡ ಕೊಡಲ್ಲ. ಮಂಗಳೂರು ಎಷ್ಟು ಪ್ರಾಮುಖ್ಯ ಎಂಬುದು ನಮಗೆಲ್ಲ ಗೊತ್ತಿದೆ. ಮಂಗಳೂರು ನಗರವು ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯಬೇಕಾದ ನಗರ. ನಮ್ಮ ರಾಜ್ಯದ ಎರಡನೆ ಸಿಟಿಯಾಗಿ ಬೆಳೆಸಬೇಕಾಗಿದೆ. ಬಂದರು ನಗರವಾಗಿರುವ ಮಂಗಳೂರಿನಲ್ಲಿ ಆರ್ಥಿಕ ಚಟುವಟಿಕೆಗಳು ನಡೆಸಲು ವಿಫುಲ ಅವಕಾಶಗಳಿವೆ ಎಂದು ಅವರು ಹೇಳಿದರು. ಈ ಹೇಳಿಕೆ ಕಾಂಗ್ರೆಸ್ಗೆ ಹಿನ್ನೆಡೆಯಾಗು ವುದಿಲ್ಲವೇ ಎಂಬ ಪ್ರಶ್ನೆಗೆ ಅದು ತನಗೆ ಗೊತ್ತಿಲ್ಲ. ಅವರು ಏನು ಹೇಳಿದ್ದಾರೆಂಬುದು ನನಗೆ ಸ್ಪಷ್ಟವಾಗಿ ಗೊತ್ತಿಲ್ಲ ಎಂದರು.
ರಾಜ್ಯದಲ್ಲಿ ಬಹಳ ಭೀಕರವಾದ ಬರಗಾಲ ಬಂದಿದೆ. ಮೂರನೆ ವರ್ಷ ಸತತ ಈ ರೀತಿ ಆಗುತ್ತಿದೆ. ಮಳೆಗಾಲ ಇನ್ನು ಕೆಲವೇ ದಿನ ಬಾಕಿ ಇದೆ. ಹಾಗಾಗಿ ಹೆಚ್ಚು ಮಳೆ ಬಂದು ರಾಜ್ಯದಲ್ಲಿರುವ ಬರ ಪರಿಹಾರವಾಗಲಿ ಎಂದು ತಾನು ಕೊಲ್ಲೂರು ಶ್ರೀಮೂಕಾಂಬಿಕಾ ತಾಯಿ ಹಾಗೂ ಶ್ರೀಕೃಷ್ಣ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಸಚಿವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅತ್ತಿಬೆಲೆ ಪೊಲೀಸ್ ಠಾಣಾಧಿಕಾರಿಗೆ ಬೆದರಿಕೆ ಹಾಕಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಮಾಹಿತಿ ಪಡೆದು ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡಿ ಮುಂದೆ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇನೆ ಎಂದರು.ಈ ಸಂದರ್ಭ ಪರಮೇಶ್ವರ್ರ ಪತ್ನಿ, ಎಸ್ಪಿ ಕೆ.ಟಿ.ಬಾಲಕೃಷ್ಣ, ಹೆಚ್ಚುವರಿ ಎಸ್ಪಿ ವಿಷ್ಣುವರ್ಧನ್, ಡಿವೈಎಸ್ಪಿ ಕುಮಾರಸ್ವಾಮಿ ಉಪಸ್ಥಿತರಿದ್ದರು.