ಭಾರತವೆಂಬ ಸ್ವರ್ಗದೊಳಗಿರುವ ನರಕಗಳು!

‘‘ಅಯ್ಯ ಎಂದರೆ ಸ್ವರ್ಗ, ಎಲವೋ ಎಂದರೆ ನರಕ’’ ಇದು ಬಸವಣ್ಣನವರು ಪ್ರತಿಪಾದಿಸಿದ ಸ್ವರ್ಗ, ನರಕಗಳ ವ್ಯಾಖ್ಯಾನ. ಅಯ್ಯ ಎನ್ನುವುದು ವಿನಯದ ಸಂಕೇತ. ಎಲವೋ ಎನ್ನುವುದು ಅಹಂಕಾರದ ಸಂಕೇತ. ಸ್ವರ್ಗವೆನ್ನುವುದು ಇನ್ನೊಬ್ಬರನ್ನು ವಿನಯದಿಂದ ಸ್ವೀಕರಿಸುವುದರಲ್ಲಿರುತ್ತದೆಯೇ ಹೊರತು, ಎಲವೋ ಎಂಬ ತಿರಸ್ಕಾರದಲ್ಲಿ ಇರುವುದಿಲ್ಲ. ಪಾಕಿಸ್ತಾನದ ಜನರೂ ಒಳ್ಳೆಯವರೇ ಎಂಬ ಸ್ವೀಕಾರದ ಮೂಲಕ ನಟಿ ರಮ್ಯಾ ಭಾರತದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ‘ಅವರವರ ಭಕುತಿಗೆ ಅವರವರ ಭಾವಕ್ಕೆ’ ಎಂಬಂತೆ ಎದೆಯೊಳಗೆ ನರಕವನ್ನು ತುಂಬಿಕೊಂಡವನಿಗೆ ಇತರರಲ್ಲೂ ನರಕವೇ ಕಾಣುತ್ತದೆಯಂತೆ. ಎದೆಯೊಳಗೆ ಸ್ವರ್ಗವನ್ನು ತುಂಬಿಕೊಂಡವನಿಗೆ ಸ್ವರ್ಗವಷ್ಟೇ ಕಾಣುತ್ತದೆಯಂತೆ. ಪಾರಿಕ್ಕರ್ಗೆ ಈ ಅರ್ಥದಲ್ಲಿ ಪಾಕಿಸ್ತಾನ ನರಕವಾಗಿ ಕಂಡಿದೆ. ಆ ಮೂಲಕ, ತನ್ನೊಳಗಿನ ನರಕವನ್ನು ಅವರು ಹೊರಗೆಡಹಿದ್ದಾರೆ. ಪಾಕಿಸ್ತಾನಕ್ಕೆ ಹೋದ ರಮ್ಯಾರಿಗೆ ಅಲ್ಲಿಯ ಜನರ ಒಳ್ಳೆಯತನ ಪರಿಚಯವಾಗಿದೆ. ಅಲ್ಲಿನ ಒಳಿತನ್ನು ಅವರು ಭಾರತಕ್ಕೆ ತಂದರು. ಅದನ್ನು ಇಲ್ಲಿ ಪಸರಿಸಿದರು. ಆ ಮೂಲಕ ಭಾರತದೊಳಗಿನ ಸ್ವರ್ಗವನ್ನು ಅವರು ಪಾಕಿಸ್ತಾನಕ್ಕೆ ಪರಿಚಯಿಸಿದರು.
ನರಕದ ವಿಷಯ ಬಂದಾಗ ರಮ್ಯಾ ಪಾಕಿಸ್ತಾನದಲ್ಲಿ ಮಾತ್ರವಲ್ಲ, ಎಲ್ಲ ಕಡೆಯೂ ಇಂದು ನರಕಗಳಿವೆ ಎನ್ನುವುದನ್ನು ಹೇಳಿದರು. ಮಂಗಳೂರಿನಲ್ಲೂ ಅದು ಇದೆ ಎಂದರು. ಅದರರ್ಥ ಮಂಗಳೂರು ನರಕವೆಂದಲ್ಲ. ಮಂಗಳೂರನ್ನು ಕೆಲವರು ನರಕ ಮಾಡಲು ಹವಣಿಸುತ್ತಿರುವ ಸಂಚಿನ ಕುರಿತಂತೆ ಅವರು ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದ್ದರು. ಮಂಗಳೂರಿನ ಕುರಿತಂತೆ ಅವರಿಗಿರುವ ಪ್ರೀತಿಯೇ ಆ ಮಾತನ್ನಾಡಿಸಿತ್ತು. ಮತ್ತು ಗುರುವಾರ ರಮ್ಯಾ ಅವರು ಮಂಗಳೂರಿಗೆ ಬಂದಾಗ, ಆ ನರಕ ಯಾವುದು ಎನ್ನುವುದನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟರು. ಬಂದ ಅತಿಥಿಗೆ ಮೊಟ್ಟೆ ಎಸೆದು, ಚಪ್ಪಲಿ ಎಸೆದು ಸ್ವಾಗತಿಸುವ ಮನುಷ್ಯನೊಳಗಿನ ನರಕವನ್ನಷ್ಟೇ ಅವರು ಹೇಳಿದ್ದರು. ಕೆಲವು ಸಂಘಪರಿವಾರ ಕಾರ್ಯಕರ್ತರು, ಹೌದು ಮಂಗಳೂರಿನಲ್ಲೂ ನರಕವಿದೆ ಎನ್ನುವುದನ್ನೂ ಸಾಬೀತು ಪಡಿಸಿದರು. ಅದೆಷ್ಟೆ ಕೆಟ್ಟದಾಗಿರಲಿ, ಮನುಷ್ಯನಿಗೆ ತನ್ನ ಊರೇ ಸ್ವರ್ಗ ಎನ್ನುವುದು ಭಾರತೀಯ ಪರಂಪರೆಯ ಮೂಲಕ ನಾವು ಕಲಿತಿದ್ದೇವೆ. ‘ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂಬ ಮಾತು ಈ ಹಿನ್ನೆಲೆಯಲ್ಲೇ ಹುಟ್ಟಿತು. ನಮ್ಮೂರಿನಲ್ಲಿ ಅದೆಷ್ಟು ಕೆಟ್ಟದಿದ್ದರೂ ನಮ್ಮೂರನ್ನು ತ್ಯಜಿಸಲು ಸಾಧ್ಯವಾಗುವುದಿಲ್ಲ. ಆದರೆ ಇದೇ ಸಂದರ್ಭದಲ್ಲಿ, ತನ್ನೂರಿನ ನರಕವನ್ನು ನಾವು ಗುರುತಿಸಿಕೊಳ್ಳದೇ ಇದ್ದರೆ, ನಮ್ಮ ಸ್ವರ್ಗ ದೀರ್ಘ ಕಾಲ ಉಳಿಯುವುದೂ ಇಲ್ಲ. ನಮ್ಮ ಊರಿನ ಮೇಲೆ ನಮಗೆ ಪ್ರೀತಿ ಇದೆ ಎನ್ನುವುದು ನಿಜವೇ ಆಗಿದ್ದರೆ ನಾವು ಮೊತ್ತಮೊದಲು ನಮ್ಮ ಊರಿನಲ್ಲಿರುವ ನರಕಗಳನ್ನು ಗುರುತಿಸಿ ಅವನ್ನು ನಿವಾರಿಸುವ ಕಡೆಗೆ ಮನ ಮಾಡಬೇಕು. ಭಾರತದಲ್ಲಿ ನರಕವಿದೆ ಎಂದಾಕ್ಷಣ ಗದ್ದಲ ಎಬ್ಬಿಸುವವರೇ ಭಾರತದೊಳಗಿರುವ ನರಕಗಳ ಕಾವಲುಗಾರರು. ಗುರುವಾರ ರಮ್ಯಾ ಅವರ ಮೇಲೆ ಮೊಟ್ಟೆ ತೂರಿದವರು ಮಂಗಳೂರಿನೊಳಗಿರುವ ನರಕದ ಪ್ರತಿನಿಧಿಗಳೇ ಆಗಿದ್ದಾರೆ.
ಮಂಗಳೂರಿನಲ್ಲಿರುವ ನರಕ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರವಾಗಿದೆ. ಉಡುಪಿಯಲ್ಲಿ ದನದ ವ್ಯಾಪಾರಿ ಪ್ರವೀಣ್ ಪೂಜಾರಿಯನ್ನು ಹುಚ್ಚುನಾಯಿಗಳಂತೆ ಎರಗಿ ಬರ್ಬರವಾಗಿ ಕೊಂದು ಹಾಕಿರುವುದು ನರಕದ ಲಕ್ಷಣವೋ, ಸ್ವರ್ಗದ ಲಕ್ಷಣವೋ ಎನ್ನುವುದನ್ನು ಮೊಟ್ಟೆ ಎಸೆದವರಿಗೆ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಬೆಳ್ತಂಗಡಿಯಲ್ಲಿ ಬರ್ಬರವಾಗಿ ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ ಸೌಜನ್ಯಾ ಯಾವ ಸ್ವರ್ಗ ಸುಖವನ್ನು ಅನುಭವಿಸಿ ನಮ್ಮೂರಿನಿಂದ ತೆರಳಿದರು? ಚರ್ಚ್ ದಾಳಿಯ ಮೂಲಕ ಮಂಗಳೂರು ಸೇರಿದಂತೆ ಇಡೀ ಅವಿಭಜಿತ ಜಿಲ್ಲೆಯನ್ನು ನರಕ ಮಾಡಿರುವುದು ಯಾರು? ಗೋಸಾಗಣೆಯ ಹೆಸರಿನಲ್ಲಿ ಹಾಜಬ್ಬ ಎನ್ನುವ ವೃದ್ಧರನ್ನು ಮತ್ತು ಅವರ ಪುತ್ರರನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಥಳಿಸಿದ್ದು ನರಕವನ್ನು ಬಿಂಬಿಸುತ್ತದೆಯೋ, ಸ್ವರ್ಗವನ್ನೋ? ಕೋಮುಗಲಭೆ ಸೃಷ್ಟಿಸುವುದಕ್ಕಾಗಿಯೇ ಸಂಘಪರಿವಾರವು ಹಿಂದೂ ಅಮಾಯಕ ಹುಡುಗನೊಬ್ಬನನ್ನು ಕೊಂದದ್ದು ಯಾವ ಸ್ವರ್ಗದ ಕನಸಿಗಾಗಿ? ಮಡೆಸ್ನಾನ, ಪಂಕ್ತಿ ಭೇದ ಇವೆಲ್ಲವೂ ಮಂಗಳೂರಿನ ನರಕಗಳ ಭಾಗವೇ ಆಗಿವೆ. ಎಂಆರ್ಪಿಎಲ್ನಂತಹ ಬೃಹತ್ಕೈಗಾರಿಕೆಗಳಂತೂ ಸಂತ್ರಸ್ತರ ಬದುಕನ್ನು ಅಕ್ಷರಶಃ ನರಕವನ್ನಾಗಿಸಿದೆ. ಇಂತಹ ಅಭಿವೃದ್ಧಿಯ ಕಲ್ಪನೆಗಳು ಇನ್ನಷ್ಟು ನರಕಗಳನ್ನು ಜನಸಾಮಾನ್ಯರಿಗಾಗಿ ಕಾದಿರಿಸಿದೆ. ಹಾಗೆಂದು ಮಂಗಳೂರು ಕೇವಲ ನರಕಕ್ಕಷ್ಟೇ ಖ್ಯಾತಿ ಪಡೆದ ಊರಲ್ಲ. ಕೆಡುಕುಗಳಿಂದ ಊರಿಗೆ ಕುಖ್ಯಾತಿಯನ್ನು ತಂದವರಿಗಿಂತ, ತಮ್ಮ ಒಳ್ಳೆಯತನದಿಂದ ಊರಿಗೆ ಖ್ಯಾತಿಯನ್ನು ತಂದವರು ದೊಡ್ಡ ಸಂಖ್ಯೆಯಲ್ಲಿದ್ದಾರೆ.
ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬ ಇದೇ ಮಂಗಳೂರಿನವರು. ಕಾರ್ನಾಡು ಸದಾಶಿವರಾಯರು, ಕುದ್ಮುಲ್ ರಂಗರಾವ್ರಂತಹ ಹಿರಿಯರು ಈ ನೆಲದಲ್ಲೇ ಆಗಿಹೋಗಿದ್ದಾರೆ. ಮೊಗವೀರರು, ಬಿಲ್ಲವರು, ಬ್ಯಾರಿಗಳು ಜೊತೆ ಜೊತೆಯಾಗಿ ಬದುಕಿ ಈ ನೆಲವನ್ನು ಸ್ವರ್ಗ ಸಮಾನವಾಗಿಸಿದ್ದಾರೆ. ಹಿಂದೂಗಳು ಸಂಕಷ್ಟದಲ್ಲಿದ್ದಾಗ ಮುಸ್ಲಿಮರು ಅವರ ರಕ್ಷಣೆಗೆ ದಾವಿಸಿದ ನೂರಾರು ಉದಾಹರಣೆಗಳಿವೆ. ಹಾಗೆಯೇ ಮುಸ್ಲಿಮರಿಗಾಗಿ ಪ್ರಾಣ ಒತ್ತೆಯಿಟ್ಟ ನೂರಾರು ಹಿಂದೂಗಳೂ ಇದೇ ನೆಲದಲ್ಲಿದ್ದಾರೆ. ನೂರು ಕೈಗಳು ಕೆಡವಿದರೆ, ಸಾವಿರ ಕೈಗಳು ಕಟ್ಟುವುದಕ್ಕೆ ಮುಂದಾಗುತ್ತವೆ. ಆದುದರಿಂದಲೇ ನರಕ ಶಾಶ್ವತವೇನೂ ಅಲ್ಲ. ಅದನ್ನು ಗುರುತಿಸಿ, ಸರಿಪಡಿಸಲು ಮುಂದಾದರೆ ಸ್ವರ್ಗದ ಕುಂದುಕೊರತೆಗಳು ನೀಗುತ್ತವೆ. ಆದರೆ, ನಮ್ಮ ನಡುವೆ ಇರುವ ನರಕಗಳನ್ನು ನೋಡಿಯೂ ನೋಡದಂತೆ ವರ್ತಿಸಿದರೆ ಅದು ಇರುವ ಸ್ವರ್ಗದ ನೆಮ್ಮದಿಯನ್ನೂ ಕೆಡಿಸಿ ಬಿಡಬಹುದು. ಬಹುಶಃ ಈ ನಿಟ್ಟಿನಲ್ಲೇ ನಟಿ ರಮ್ಯಾ ಅವರು ಪ್ರಬುದ್ಧ ಮಾತುಗಳನ್ನಾಡಿದ್ದಾರೆ. ವಯಸ್ಸಿನಲ್ಲಿ ತೀರಾ ಚಿಕ್ಕವಳಾಗಿದ್ದರೂ ಅವರ ಮಾತಿನಲ್ಲಿರುವ ವಿವೇಕ, ಮುತ್ಸದ್ದಿತನ ನಮ್ಮ ರಕ್ಷಣಾ ಸಚಿವ ಪಾರಿಕ್ಕರ್ ಅವರಲ್ಲಿ ಇಲ್ಲದಿರುವುದು ನಮ್ಮ ದೇಶದ ದೌರ್ಭಾಗ್ಯವೆಂದೇ ಹೇಳಬೇಕು.
ಪಾಕ್ ನರಕವೋ, ಸ್ವರ್ಗವೋ ಎನ್ನುವುದು ಪಕ್ಕಕ್ಕಿರಲಿ. ಮೊದಲು ನಮ್ಮ ನೆಲದ ನರಕಗಳನ್ನು ಕಣ್ಣು ತೆರೆದು ನೋಡುವ ಯೋಗ್ಯತೆಯನ್ನು ನಮ್ಮ ರಾಜಕಾರಣಿಗಳು ಬೆಳೆಸಿಕೊಳ್ಳಬೇಕು. ಗೋಮಾಂಸ ಸೇವಿಸಿದ ಆರೋಪದಲ್ಲಿ ವೃದ್ಧರೊಬ್ಬರನ್ನು ಕೊಂದು ಹಾಕಿದ ದಾದ್ರಿ ನಮ್ಮ ದೇಶದ ನರಕ. ಗೋವಿನ ಹೆಸರಲ್ಲಿ ದಲಿತರನ್ನು ನಾಯಿಗಿಂತ ಕೀಳಾಗಿ ಕಂಡ ಗುಜರಾತ್ನ ಉನಾ ನಮ್ಮ ದೇಶದ ನರಕ. ದೇವಸ್ಥಾನ ಪ್ರವೇಶಿಸಿದ ಹೆಸರಿನಲ್ಲಿ ದಲಿತರನ್ನು ಬೆಂಕಿ ಹಚ್ಚಿ ಕೊಂದ ಉತ್ತರ ಪ್ರದೇಶದಲ್ಲೂ ನರಕ ಇದೆ. ತನ್ನ ಪತ್ನಿಯ ಹೆಣವನ್ನು ಕೊಂಡೊಯ್ಯಲು ವಾಹನವಿಲ್ಲದೆ ಒಬ್ಬನೇ ಹಲವು ಕಿಲೋಮೀಟರ್ಗಳವರೆಗೆ ಹೊತ್ತುಕೊಂಡ ಹೋದ ನತದೃಷ್ಟ ವ್ಯಕ್ತಿ ಬಾಳುತ್ತಿರುವ ಒಡಿಶಾದಲ್ಲೂ ನರಕವಿದೆ. ಗುಜರಾತ್ನಲ್ಲಿ ನಡೆದ ಹತ್ಯಾಕಾಂಡ ಯಾವ ಸ್ವರ್ಗವನ್ನು ಈ ದೇಶಕ್ಕೆ ತಂದು ಇಳಿಸಿತು? ಖೈರ್ಲಾಂಜಿಯಂತಹ ಬರ್ಬರ ಘಟನೆ ನಡೆದ ನೆಲವನ್ನು ಯಾವ ಬಾಯಿಯಲ್ಲಿ ನಾವು ಸ್ವರ್ಗವೆಂದು ಬಣ್ಣಿಸಬೇಕು. ಈ ದೇಶವನ್ನು ಅಲ್ಲಲ್ಲಿ ಹುಣ್ಣಿನಂತೆ ಬಾಧಿಸುತ್ತಿರುವ ಈ ನರಕಗಳನ್ನು ಗುರುತಿಸಿ ಅದನ್ನು ನಿವಾರಿಸುವುದು ಬಿಟ್ಟು, ನಮ್ಮ ರಕ್ಷಣಾ ಸಚಿವರು, ನೆರೆಯ ನರಕದ ಕುರಿತಂತೆ ಆತಂಕ ವ್ಯಕ್ತಪಡಿಸಿರುವುದು ಅವರ ಸಣ್ಣತನವನ್ನು ತೋರಿಸುತ್ತದೆ. ತನ್ಮೂಲಕ ಅವರು ಈ ದೇಶದ ಜನರನ್ನೂ ಸಣ್ಣವರನ್ನಾಗಿಸಿದರು.
ಇದೇ ಸಂದರ್ಭದಲ್ಲಿ ರಮ್ಯಾ ಅವರಿಗೆ ಮೊಟ್ಟೆ ಎಸೆದ ನರಕದ ಕಾವಲುಗಾರರನ್ನು ಬಂಧಿಸಿ, ಅವರನ್ನು ಬಳ್ಳಾರಿ ಜೈಲಿನಲ್ಲಿ ಕೊಳೆಯುವಂತೆ ಮಾಡಿ ನಿಜವಾದ ನರಕದ ಪರಿಚಯ ಮಾಡಿಕೊಡಬೇಕು. ಆಗ ಮಾತ್ರ ನಮ್ಮೂರು ಸದಾ ಸ್ವರ್ಗವಾಗಿ ಉಳಿಯಲು ಸಾಧ್ಯ.







