ಪಾವೂರು: ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣಕ್ಕೆ ಶಿಲಾನ್ಯಾಸ
![ಪಾವೂರು: ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣಕ್ಕೆ ಶಿಲಾನ್ಯಾಸ ಪಾವೂರು: ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣಕ್ಕೆ ಶಿಲಾನ್ಯಾಸ](https://www.varthabharati.in/sites/default/files/images/articles/2016/08/27/27mdp1.jpg)
ಕೊಣಾಜೆ, ಆ.27: ಪಾವೂರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಶನಿವಾರ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆಗೆ ಶಿಲಾನ್ಯಾಸವನ್ನು ತಾಲೂಕು ಪಂಚಾಯತ್ ಸದಸ್ಯ ಮುಹಮ್ಮದ್ ಮೋನು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಶ್ರೀಮಂತ, ಬಡವ ಎನ್ನುವ ಭೇದವಿಲ್ಲದೆ ಪ್ರತಿಯೊಬ್ಬರೂ ಶುದ್ಧ ನೀರು ಕುಡಿಯಬೇಕಿದ್ದು, ಈ ನಿಟ್ಟಿನಲ್ಲಿ ಸರಕಾರಿ ಯೋಜನೆಯಂತೆ ಮಂಗಳೂರು ಕ್ಷೇತ್ರ ವ್ಯಾಪ್ತಿಯ ಪಾವೂರಿನಲ್ಲಿ ಶುದ್ಧ ನೀರಿನ ಘಟಕ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಸಲಾಗಿದೆ ಎಂದು ತಿಳಿಸಿದರು.
ಇಂದು ಕಲುಷಿತ ನೀರಿನಿಂದಾಗಿ ಹಲವು ರೋಗಗಳು ಹರಡುತ್ತಿದ್ದು ಮಂಗಳೂರು ಕ್ಷೇತ್ರದ 11 ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕ ನಿರ್ಮಾಣಕ್ಕೆ ಸಚಿವ ಯು.ಟಿ.ಖಾದರ್ ಯೋಜನೆ ರೂಪಿಸಿದ್ದು ಸರಕಾರದಿಂದ ಮಾನ್ಯತೆ ದೊರಕಿದೆ. 2 ರೂಪಾಯಿಗೆ 20 ಲೀಟರ್ ನೀರು ಗ್ರಾಮಸ್ಥರಿಗೆ ದೊರಕಲಿದ್ದು, ಕ್ಯಾನ್ ಸರಕಾರವೇ ನೀಡಲಿದೆ. ಕ್ಷೇತ್ರದಲ್ಲಿ ಪ್ರಥಮವಾಗಿ ಪಾವೂರು ಗ್ರಾಮದಲ್ಲಿ ಶಂಕು ಸ್ಥಾಪನೆ ಸಂತಸ ತಂದಿದೆ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಫಿರೋಝ್, ಉಪಾಧ್ಯಕ್ಷೆ ಲೀಲಾವತಿ, ಸದಸ್ಯರಾದ ಐ.ಬಿ.ಸಾದಿಕ್, ಮಜೀದ್ ಸಾತ್ಕೋ, ವಿವೇಕ್ ರೈ, ಮುಹಮ್ಮದ್ ಇನೋಳಿ, ರುಪೀನಾ ಲೂವೀಸ್ ಮೊದಲಾದವರು ಉಪಸ್ಥಿತರಿದ್ದರು.