ವಿವಿಗಳು ವಾಕ್ ಸ್ವಾತಂತ್ರದ ಭದ್ರನೆಲೆಗಳಾಗಬೇಕು: ರಾಷ್ಟ್ರಪತಿ
ನಲಂದಾ,ಆ.27: ವಿಶ್ವ ವಿದ್ಯಾನಿಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಭದ್ರನೆಲೆಗಳಾಗಬೇಕು ಮತ್ತು ಚರ್ಚೆಗಳನ್ನು ಉತ್ತೇಜಿಸಬೇಕು ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಶನಿವಾರ ಇಲ್ಲಿ ಹೇಳಿದರು.
ನಲಂದಾ ವಿವಿಯ ಪ್ರಪ್ರಥಮ ಘಟಿಕೋತ್ಸವವನ್ನುದ್ದೇಶಿಸಿ ಮಾತನಾಡಿದ ಅವರು, ಈ ವಿಶ್ವವಿದ್ಯಾನಿಲಯವು ಅದು 13ನೆ ಶತಮಾನದಲ್ಲಿ ನಾಶಗೊಳ್ಳುವ ಮೊದಲು 1,200 ವರ್ಷಗಳ ಕಾಲ ಹುಲುಸಾಗಿದ್ದ ಒಂದು ಪರಿಕಲ್ಪನೆ,ಒಂದು ಸಂಸ್ಕೃತಿಯನ್ನು ಪ್ರತಿಫಲಿಸುತ್ತಿದೆ ಎಂದರು.ಈ ಎಲ್ಲ ವರ್ಷಗಳ ಕಾಲವೂ ಭಾರತವು ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಕ ಸ್ನೇಹ,ಸಹಕಾರ ಮತ್ತು ಚರ್ಚೆಯ ಸಂದೇಶವನ್ನು ರವಾನಿಸುತ್ತಲೇ ಬಂದಿದೆ ಎಂದ ಅವರು, ವಿವಿಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಚರ್ಚೆಗಳು,ಮುಕ್ತ ವಿಚಾರ ವಿನಿಮಯಗಳಿಗೆ ಅತ್ಯುತ್ತಮ ವೇದಿಕೆಗಳಾಗಿವೆ ಮತ್ತು ಇಂತಹ ವಾತಾವರಣವನ್ನು ಉತ್ತೇಜಿಸಬೇಕು ಎಂದು ಹೇಳಿದರು.
ಎಲ್ಲ ಸಂಕುಚಿತ ಮನೋಭಾವ ಮತ್ತು ನಿರ್ಬಂಧಕಾರಿ ಚಿಂತನೆಗಳನ್ನು ತೊರೆದು ಜೀವನದಲ್ಲಿ ಪ್ರಗತಿ ಸಾಧಿಸುವಂತೆ ನೂತನ ಪದವೀಧರರಿಗೆ ಅವರು ಕರೆ ನೀಡಿದರು.





