ಯುವಜನತೆ ಕೃಷಿಯತ್ತ ಆಕರ್ಷಿತರಾಗಬೇಕು: ಸದಾಶಿವ ಪೂಂಜಾ
![ಯುವಜನತೆ ಕೃಷಿಯತ್ತ ಆಕರ್ಷಿತರಾಗಬೇಕು: ಸದಾಶಿವ ಪೂಂಜಾ ಯುವಜನತೆ ಕೃಷಿಯತ್ತ ಆಕರ್ಷಿತರಾಗಬೇಕು: ಸದಾಶಿವ ಪೂಂಜಾ](https://www.varthabharati.in/sites/default/files/images/articles/2016/08/28/28mdp1.jpg)
ಕೊಣಾಜೆ, ಆ.28: ಇಂದು ರೋಗ ಹೆಚ್ಚಾಗಿದ್ದು ಕೃಷಿ ಪದ್ದತಿ ನಾಶವಾಗಿರುವುದೇ ಮೂಲ ಕಾರಣ. ಈ ನಿಟ್ಟಿನಲ್ಲಿ ಯುವಜನತೆ ಮತ್ತೆ ಕೃಷಿಯತ್ತ ಆಸಕ್ತರಾಗಿ ದೇಶದ ಭವಿಷ್ಯ ನಿರ್ಮಿಸಬೇಕು, ಹಿರಿಯರು ವಿದ್ಯಾವಂತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಪ್ರಗತಿಪರ ಕೃಷಿಕ ಹರೇಕಳ ಪಡ್ಡಾಯಿಬೆಟ್ಟು ಸದಾಶಿವ ಪೂಂಜಾ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೊಣಾಜೆ ವಲಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ರವಿವಾರ ನಡೆದ ತೋಟಗಾರಿಕಾ ಮಿಶ್ರ ಬೆಳೆ ಮತ್ತು ಭತ್ತ ಬೇಸಾಯ ಬೆಳೆಗಳ ‘ಕೃಷಿ ವಿಚಾರ ಸಂಕಿರಣದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನತೆ ಕೇವಲ ವೈದ್ಯ ಅಥವಾ ಇಂಜಿನಿಯರ್ಗಳಾಗಿ ಹಣ ಸಂಪಾದನೆ ಮಾರ್ಗ ಕಂಡುಕೊಳ್ಳುವ ಬದಲು ಕೃಷಿಯಲ್ಲಿ ವೈದ್ಯ ಅಥವಾ ಇಂಜಿನಿಯರ್ಗಳಾಗಲು ಮನಸ್ಸು ಮಾಡಬೇಕು ಎಂದು ಹೇಳಿದರು.
ತಾಲೂಕು ಶ್ರೀ.ಕ್ಷೇ.ಧ.ಗ್ರಾ.ಯೋಜನಾಧಿಕಾರಿ ಉಮರಬ್ಬ ಮಾತನಾಡಿ, ಹಿಂದಿನ ಕಾಲದಲ್ಲಿ ಕೃಷಿಯಿಂದ ಆವೃತ್ತವಾದ ಗದ್ದೆಗಳು ಇಂದು ಸೈಟ್ಗಳಾಗಿ ಇಲ್ಲವೇ ಬಂಜರು ಭೂಮಿಯಾಗಿ ಮಾರ್ಪಟ್ಟಿದೆ. ಕೃಷಿ ಬಗ್ಗೆ ನಡೆಯುವ ಕಾರ್ಯಕ್ರಮಗಳಿಗಿಂತಲೂ ಇನ್ನಿತರ ಕಾರ್ಯಕ್ರಮದತ್ತ ಜನ ಆಸಕ್ತರಾಗುತ್ತಿದ್ದಾರೆ. ಅಳಿಯುತ್ತಿರುವ ಕೃಷಿ ಮತ್ತೆ ಜೀವಂತಗೊಳಿಸುವ ಹಾಗೂ ಅನುಭವಿಗಳಿಂದ ಪರಸ್ಪರ ಮಾಹಿತಿ ವಿನಿಮಯಗೊಳಿಸುವ ನಿಟ್ಟಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮ ನಡೆಸುತ್ತಿದೆ ಎಂದರು.
1974ರವರೆಗೆ ಭೂಮಿಯೊಡಯನಿಗೆ ಗೇಣಿ ನೀಡಿಯೂ ಭತ್ತ ಬೆಳೆ ಯಥೇಚ್ಛವಾಗಿ ನಡೆಯುತ್ತಿತ್ತು. ಆದರೆ ಉಳುವವನೇ ಭೂಮಿಯೊಡೆಯ ಎನ್ನುವ ಕಾನೂನು ಜಾರಿಯಾದ ಬಳಿಕ ಕಾರ್ಮಿಕರು ಭೂಮಿ ಸ್ವಂತ ಮಾಡಿಕೊಂಡು ಭತ್ತ ಕೃಷಿಯಿಂದ ವಿಮುಖರಾಗಿ ಮಿಶ್ರ ಬೆಳೆಗೆ ಪ್ರಾಧಾನ್ಯತೆ ನೀಡಿದ ಪರಿಣಾಮ ಇಂದು ಭತ್ತದ ಕೃಷಿ ವಿನಾಶದ ಅಂಚಿನಲ್ಲಿದೆ ಎಂದು ದ.ಕ ಮತ್ತು ಉಡುಪಿ ಜಿಲ್ಲಾ ಹಾಪ್ಕಾಮ್ಸ್ ನಿರ್ದೇಶಕ ಪ್ರಶಾಂತ ಗಟ್ಟಿ ಬೋಳಿಯಾರ್ ಅಭಿಪ್ರಾಯಪಟ್ಟರು.
ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷ ಸೀತಾರಾಮ ಶೆಟ್ಟಿ, ಕೊಣಾಜೆ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಸುದರ್ಶನ್ ರಾವ್, ಮಾದರಿ ಕೃಷಿಕ ಕೆ.ಆರ್.ಗಟ್ಟಿ ಅತಿಥಿಗಳಾಗಿದ್ದರು. ಕೊಣಾಜೆ ವಲಯ ಪ್ರಗತಿಬಂಧು ಸ್ವಸಹಾಯ ಸಂಘದ ಅಧ್ಯಕ್ಷ ಪ್ರವೀಣ್ ಐ.ಬಗಂಬಿಲ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಬೇಸಾಯ ಶಾಸ್ತ್ರ ವಿಷಯ ತಜ್ಞ ಹರೀಶ್ ಶೆಣೈ, ತೋಟಗಾರಿಕಾ ವಿಜ್ಞಾನಿ ಪಾಟೀಲ್ ರವೀಂದ್ರ ಸಂಗನ್ ಗೌಡ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಲಕ್ಷ್ಮೀ ಮಂಜಾಳ ಪ್ರಮೀಳಾ ದೆಬ್ಬೇಲಿ ಅನುಭವ ಹಂಚಿಕೊಂಡರು. ಯೋಜನೆಯ ವಲಯ ಮೇಲ್ವಿಚಾರಕಿ ರೇಖಾ ಸ್ವಾಗತಿಸಿದರು. ಕೃಷಿ ಅಧಿಕಾರಿ ದಿನೇಶ್ ಕಾರ್ಯಕ್ರಮ ನಿರೂಪಿಸಿದರು.