ಬದ್ರುದ್ದೀನ್ರ ವ್ಯಕ್ತಿತ್ವ ಗುರುತಿಸುವ ಕೆಲಸವಾಗಲಿ: ಪಿ.ವಿ.ಮೋಹನ್
![ಬದ್ರುದ್ದೀನ್ರ ವ್ಯಕ್ತಿತ್ವ ಗುರುತಿಸುವ ಕೆಲಸವಾಗಲಿ: ಪಿ.ವಿ.ಮೋಹನ್ ಬದ್ರುದ್ದೀನ್ರ ವ್ಯಕ್ತಿತ್ವ ಗುರುತಿಸುವ ಕೆಲಸವಾಗಲಿ: ಪಿ.ವಿ.ಮೋಹನ್](https://www.varthabharati.in/sites/default/files/images/articles/2016/08/28/bhat_280816_congress9.jpg)
ಮಂಗಳೂರು, ಆ. 28: ಕಾರ್ಯಕರ್ತರ ಪರಿಶ್ರಮದ ಫಲವಾಗಿ ಕಾಂಗ್ರೆಸ್ನಲ್ಲಿ ಉನ್ನತ ಸ್ಥಾನ ಅಲಂಕರಿಸಿದವರಿಂದಲೇ ಕಾರ್ಯಕರ್ತರಿಗೆ ಆಗುತ್ತಿರುವ ಅವಗಣನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಎಐಸಿಸಿ ಸದಸ್ಯ ಪಿ.ವಿ.ಮೋಹನ್, ಪಕ್ಷಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದ ಮುಹಮ್ಮದ್ ಬದ್ರುದ್ದೀನ್ನಂತಹ ಕಾರ್ಯಕರ್ತರು ಇಂದೂ ಪಕ್ಷದಲ್ಲಿದ್ದು, ಅವರನ್ನು ಗುರುತಿಸುವ ಕೆಲಸವಾಗಬೇಕಾಗಿದೆ ಎಂದು ಹೇಳಿದ್ದಾರೆ.
ಅವರು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬಲ್ಮಠದ ಶಾಂತಿನಿಲಯದಲ್ಲಿ ಇಂದು ಸಂಜೆ ಹಮ್ಮಿಕೊಂಡ ‘ಮುಹಮ್ಮದ್ ಬದ್ರುದ್ದೀನ್ ನೆನಪು’ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸುಮಾರು 40 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ್ದ ಮುಹಮ್ಮದ್ ಬದ್ರುದ್ದೀನ್ರವರ ಪ್ರಾಮಾಣಿಕ ಸೇವೆಗೆ ನಾವೇನು ಕೊಡುಗೆ ನೀಡಿದ್ದೇವೆ. ಬದ್ರುದ್ದೀನ್ ಎಲ್ಲರೊಂದಿಗೂ ಆತ್ಮೀಯತೆ ಬೆಳೆಸಿಕೊಂಡು, ಕೆಲಸ ಕಾರ್ಯಗಳಿಗೆ ಸ್ಪಂದಿಸುತ್ತಿದ್ದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಅವರಲ್ಲಿ ನಾಯಕತ್ವ ಗುಣವಿತ್ತು. ಅದನ್ನು ನಾವು ಗುರುತಿಸದಿರುವುದು ಬೇಸರ ತಂದಿದೆ ಎಂದರು.
ತನ್ನ ಆತ್ಮೀಯ ಸ್ನೇಹಿತ ಬದ್ರುದ್ದೀನ್ನಂತಹ ಪ್ರಾಮಾಣಿಕ ಕಾರ್ಯಕರ್ತರು ಇಂದು ಕೂಡ ರಾಜ್ಯ, ಜಿಲ್ಲೆಗಳಲ್ಲಿದ್ದು, ಅಂತಹವರನ್ನು ಗುರುತಿಸುವ ಕೆಲಸ ವಾಗಬೇಕು. ಕಾರ್ಯಕರ್ತರ ಪ್ರಾಮಾಣಿಕ ಸೇವೆಯಿಂದ ಉನ್ನತ ಹುದ್ದೆಗೆ ಏರಿರುವ ಇಂದಿನ ರಾಜಕಾರಣಿಗಳು ಕಾರ್ಯಕರ್ತರನ್ನೇ ಮರೆಯುತ್ತಿರುವುದು ಸರಿಯಲ್ಲ. ಕಾರ್ಯಕರ್ತರನ್ನು ಕೇವಲ ತಮಗೆ ಬೇಕಾದಂತೆ ಬಳಕೆ ಮಾಡಿ ಅನಂತರ ಅವರನ್ನು ಮರೆತುಬಿಡುವ ರಾಜಕಾರಣಿಗಳು ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಮೋಹನ್ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಮುಹಮ್ಮದ್ ಬದ್ರುದ್ದೀನ್ ವಿದ್ಯಾರ್ಥಿ ಕಾಂಗ್ರೆಸ್ ಸಂಘಟನೆಯಿಂದ ಮೇಲೆ ಬಂದವರು. ಅದರಿಂದಲೇ ಅವರಿಗೆ ಗೌರವ ಬಂದಿದೆ. ಬದ್ರುದ್ದೀನ್ ಅವರು ಕಾಂಗ್ರೆಸ್ ಪಕ್ಷ ತನಗೆ ನೀಡಿದ್ದ ಅವಕಾಶವನ್ನು ಬಳಸಿಕೊಂಡು ಪ್ರಾಮಾಣಿಕ ಸೇವೆ ಸಲ್ಲಿಸಿದವರು. ಪಕ್ಷದ ಕ್ರಿಯಾಶೀಲ ಮತ್ತು ನಿಷ್ಠಾವಂತ ಕಾರ್ಯಕರ್ತ. ಇವರ ಸೇವೆ ಪಕ್ಷಕ್ಕೆ ಇನ್ನೂ ಅಗತ್ಯವಿತ್ತು ಎಂದರು.
ನುಡಿನಮನ ಸಲ್ಲಿಸಿದ ಕಳ್ಳಿಗೆ ತಾರನಾಥ ಶೆಟ್ಟಿ, ಅವರು ಮುಹಮ್ಮದ್ ಬದ್ರುದ್ದೀನ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು.
ಹೊಸದಿಲ್ಲಿ ನೆಹರೂ ಯುವ ಕೇಂದ್ರದ ನಿರ್ದೇಶಕ ಸಲೀಂ ಅಹ್ಮದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಸಕ ಜೆ.ಆರ್.ಲೋಬೊ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಚಿವ ಖಾದರ್, ಶಾಸಕ ಮೊಯ್ದಿನ್ ಬಾವ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮುಡಾದ ಮಾಜಿ ಅಧ್ಯಕ್ಷ ಸುರೇಶ್ ಬಳ್ಳಾಲ್, ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಕಾಂಗ್ರೆಸ್ ಮುಖಂಡರಾದ ವಿಶ್ವಾಸ್ ಕುಮಾರ್ ದಾಸ್, ತೇಜಸ್ವಿರಾಜ್, ಶಶಿಧರ್ ಹೆಗ್ಡೆ, ಮುಹಮ್ಮದ್ ಮೋನು, ಅಬೂಬಕರ್ ಬಜಾಲ್, ಶಂಶುದ್ದೀನ್ ಕುದ್ರೋಳಿ, ಬಾಲಕೃಷ್ಣ ಶೆಟ್ಟಿ, ಶಶಿಕಲಾ ಕದ್ರಿ, ಈಶ್ವರ್ ಉಳ್ಳಾಲ್, ಸೇವಾದಳದ ಅಧ್ಯಕ್ಷ ಅಶ್ರಫ್, ಬದ್ರುದ್ದೀನ್ ಅವರ ಪತ್ನಿ, ಪುತ್ರಿ, ಹಾಗೂ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 10 ಮಂದಿ ಕಾರ್ಯಕರ್ತರಿಗೆ ‘ಮುಹಮ್ಮದ್ ಬದ್ರುದ್ದೀನ್ ಸೇವಕ್ ಸಾಧನಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಮೂವರಿಗೆ ‘ಮುಹಮ್ಮದ್ ಬದ್ರುದ್ದೀನ್ ಮರಣೋತ್ತರ ಪ್ರಮುಖ್ ಗೌರವ ಪುರಸ್ಕಾರ’ ನೀಡಲಾಯಿತು. ಹಾಗೂ 10 ಮಂದಿಗೆ ಬದ್ರುದ್ದೀನ್ ಆರೋಗ್ಯ ನೆರವು ವಿತರಿಸಲಾಯಿತು.