ಮುಖ್ಯ ಆರೋಪಿ ಸಿಪಿಐಎಂ ಬಂಧನ
ಅಸ್ಲಂ ಕೊಲೆ ಪ್ರಕರಣ
ಕೋಝಿಕ್ಕೋಡ್, ಆ.28: ನಾದಾಪುರದಲ್ಲಿ ನಡೆದಿದ್ದ ಯೂತ್ಲೀಗ್ ಕಾರ್ಯಕರ್ತ ಅಸ್ಲಂ ಎಂಬವರ ಕೊಲೆ ಪ್ರಕರಣದ ಮುಖ್ಯ ಆರೋಪಿ ಸಿಪಿಐಎಂ ಕಾರ್ಯ ಕರ್ತ ರಮೀಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿ ಯಾಗಿದೆ. ಆರೋಪಿಯನ್ನು ವೆಳ್ಳೂರಿನ ನಿವಾಸಿ ಎಂದು ಗುರುತಿಸಲಾಗಿದೆ. ಕೊಲೆ ಸಂಚಿನಲ್ಲಿ ಮುಖ್ಯ ಪಾತ್ರ ರಮೀಶ್ನದ್ದಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈತ ಅಸ್ಲಂ ಸಂಚರಿಸುತ್ತಿದ್ದ ಬೈಕ್ನ ಮುಂದಿನಿಂದ ಹೋಗಿ ಕೊಲೆಗಡುಕರಿಗೆ ಅಸ್ಲಂನನ್ನು ತೋರಿಸಿಕೊಟ್ಟಿದ್ದ. ಡಿವೈಎಫ್ಐ ಕಾರ್ಯಕರ್ತ ಶಿಬಿನ್ ಕೊಲೆ ಪ್ರಕರಣದಲ್ಲಿ ಅಸ್ಲಂನನ್ನು ಕೋರ್ಟ್ ಖುಲಾಸೆಗೊಳಿಸಿತ್ತು. ರಮೀಶ್, ಶಿಬಿನ್ ಕೊಲೆಯಾಗಿದ್ದ ಘರ್ಷಣೆ ವೇಳೆ ಗಾಯಗೊಂಡಿದ್ದ ಸಂತೋಷ್ ಎಂಬಾತನ ಸಹೋದರ ಆಗಿದ್ದಾನೆ. ಆಗಸ್ಟ್ ಹನ್ನೆರಡರಂದು ಚಾಲಪ್ರಂ ಎಂಬಲ್ಲಿನ ನಿವಾಸಿಯಾದ ಅಸ್ಲಂ ಕೊಲೆಯಾಗಿದ್ದ. ಗೆಳೆಯನೊಂದಿಗೆ ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ಕಾರಿನಲ್ಲಿ ಬಂದಿದ್ದ ಅಕ್ರಮಿಗಳ ತಂಡ ತಲವಾರು ಹಲ್ಲೆ ನಡೆಸಿತ್ತು. ಕೂಡಲೇ ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದ್ದರೂ ಅಸ್ಲಂ ಅಲ್ಲಿ ಮೃತಪಟ್ಟರು ಎಂದು ವರದಿ ತಿಳಿಸಿದೆ.





