ಪೆರಡಾಲ: ಕಾಣಿಕೆ ಹುಂಡಿಗಳಿಂದ ಹಣ ಕಳವು
ಕಾಸರಗೋಡು, ಆ.29: ಇಲ್ಲಿನ ಬದಿಯಡ್ಕ ಪೆರಡಾಲದ ಶ್ರೀಉದನೇಶ್ವರ ದೇವಸ್ಥಾನದ ಕಾಣಿಕೆ ಹುಂಡಿಗಳಿಂದ ಹಣ ಕಳವು ಮಾಡಿದ ಘಟನೆ ನಡೆದಿದೆ
ದೇವಳದೊಳಗೆ ನುಗ್ಗಿದ ಕಳ್ಳರು ಗರ್ಭಗುಡಿಯ ಹೊರಗಿದ್ದ ಆರು ಕಾಣಿಕೆ ಹುಂಡಿಗಳಿಂದ ಹಣ ದೋಚಿದ್ದಾರೆ. ಈ ವೇಳೆ ಗರ್ಭಗುಡಿಯ ಬಾಗಿಲಿನ ಬೀಗ ಮುರಿಯಲು ಕಳ್ಳರು ವಿಫಲ ಯತ್ನ ನಡೆಸಿದ್ದಾರೆ. ಕ್ಷೇತ್ರದ ಸುತ್ತುಗೋಪುರದ ಹಿಂಭಾ ಗದಲ್ಲಿ ಗೋಡೆ ಮೂಲಕ ಛಾವಣಿಗೆ ಹತ್ತಿದ ಕಳ್ಳರು ಹೆಂಚು ತೆಗೆದು ಒಳಗೆ ಪ್ರವೇಶಿಸಿದ್ದಾರೆ. ಅರ್ಚಕರು ಸೋಮ ವಾರ ಮುಂಜಾನೆ ಪೂಜೆಗೆ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಆ ಬಳಿಕ ಭಕ್ತರು ಪರಿಶೀಲಿಸಿದಾಗ ದೇವಸ್ಥಾನದ ಬಳಿ ಒಡೆದು ಹಾಕಿರುವ ಹುಂಡಿಗಳು ಪತ್ತೆಯಾಗಿವೆ. ದೇವಳದ ಹೊರಗಿದ್ದ ಇನ್ನೊಂದು ಕಾಣಿಕೆ ಹುಂಡಿಯನ್ನೂ ಕಳ್ಳರು ದೋಚಿದ್ದಾರೆ. ಈ ಹುಂಡಿಗಳಲ್ಲಿ 60 ಸಾವಿರ ರೂ. ಇದ್ದಿರಬಹುದೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಆಡಳಿತ ಮೊಕ್ತೇಸರ ವೆಂಕಟಕೃಷ್ಣ ಭಟ್ ಹಾಗೂ ಪಿ.ಜಿ. ಚಂದ್ರಹಾಸ ರೈ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರನ್ನು ಕರೆಸಲಾಗಿದೆ.
ಕೂಡ್ಲು ಅಂಚೆ ಕಚೇರಿ, ಆಯುರ್ವೇದ ಡಿಸ್ಪೆನ್ಸರಿಯಿಂದ ಕಳವಿಗೆ ವಿಫಲ ಯತ್ನ
ಕಾಸರಗೋಡು ನಗರ ಠಾಣಾ ವ್ಯಾಪ್ತಿಯ ಕೂಡ್ಲು ಅಂಚೆ ಕಚೇರಿ ಮತ್ತು ಆಯುರ್ವೇದ ಡಿಸ್ಪೆನ್ಸರಿಯಲ್ಲಿ ನಿನ್ನೆ ರಾತ್ರಿ ಕಳವಿಗೆ ವಿಫಲ ಯತ್ನ ನಡೆದಿದೆ. ರಾಮದಾಸ ನಗರದಲ್ಲಿರುವ ಅಂಚೆ ಕಚೇರಿಯ ಬೀಗ ಮುರಿದು ಕಳವಿಗೆ ಯತ್ನಿಸಲಾಗಿದೆ. ಅಂಚೆಪಾಲಕಿ ಕೆ. ಕಸ್ತೂರಿ ನೀಡಿರುವ ದೂರಿನಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೂಡ್ಲು ಆಯುರ್ವೇದ ಡಿಸ್ಪೆನ್ಸರಿಯ ಬಾಗಿಲು ಮುರಿದು ಕಳವಿಗೆ ವಿಫಲ ಯತ್ನ ನಡೆಸಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಈ ಬಗ್ಗೆ ವೈದ್ಯೆ ಗೀತಾ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಎರಡೂ ಕೃತ್ಯದ ಹಿಂದೆ ಒಂದೇ ತಂಡದ ಕೈವಾಡವಿದೆ ಎಂದು ಶಂಕಿಸಲಾಗಿದೆ.