ವಿದ್ಯುತ್ ಕಳವು: ಅಪರಾಧಿಗೆ ದಂಡ
ಮಂಗಳೂರು, ಆ.30: ವಿದ್ಯುತ್ ಕಳವು ಮಾಡಿದ ಪ್ರಕರಣ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮಂಗಳೂರು 1ನೆ ಹೆಚ್ಚುವರಿ ಸೆಷನ್ಸ್ ಮತ್ತು ವಿಶೇಷ ನ್ಯಾಯಾಲಯ ಅಪರಾಧಿಗೆ 51,900 ರೂ.ದಂಡ ವಿಧಿಸಿ ತೀರ್ಪು ನೀಡಿದೆ.
ಬಂಟ್ವಾಳ ತಾಲೂಕು ಅಣ್ಣಮೂಲೆ, ನೆತ್ತರಕೆರೆ ನಿವಾಸಿ ಕೃಷ್ಣ ಭಟ್(40) ಶಿಕ್ಷೆ ಗೊಳಗಾದ ಅಪರಾಧಿ. ಮೆಸ್ಕಾಂ ಕಾಯ್ದೆ 135 ಕಲಂ ಪ್ರಕಾರ ವಿದ್ಯುತ್ ಕಳ್ಳತನಕ್ಕೆ 49,900 ರೂ. ದಂಡ, ದಂಡ ತೆರಲು ತಪ್ಪಿದರೆ 2 ವರ್ಷ ಸಜೆ, ಲೈನ್ ಬದಲಾವಣೆ ಕಾಯ್ದೆ 138 ರ ಪ್ರಕಾರ 2,000 ರೂ. ದಂಡ, ದಂಡ ತೆರಳು ತಪ್ಪಿದರೆ 1 ತಿಂಗಳು ಸಜೆ ಅನುಭವಿಸುವಂತೆ ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಕೃಷ್ಣ ಭಟ್ ಪಂಪ್ಸೆಟ್ನ ವಿದ್ಯುತ್ತನ್ನು ಅಕ್ರಮವಾಗಿ ಮನೆಗೆ ಉಪಯೋಗಿಸುತ್ತಿದ್ದನ್ನು 2009ರ ಎ.13ರಂದು ಮೆಸ್ಕಾಂ ಜಾಗೃತ ದಳ ಪತ್ತೆ ಹಚ್ಚಿತ್ತು. ಈ ಸಂದರ್ಭ ಕೃಷ್ಣ ಭಟ್ಗೆ 33,292 ರೂ.ದಂಡ ವಿಧಿಸಲಾಗಿತ್ತು. ಆದರೆ ಕೃಷ್ಣ ಭಟ್ ದಂಡ ಕಟ್ಟಿರಲಿಲ್ಲ. ಬಳಿಕ ಮೆಸ್ಕಾಂ ಜಾಗೃತ ದಳ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು.
ಮೆಸ್ಕಾಂ ಜಾಗೃತದಳದ ಉಪ ನಿರೀಕ್ಷಕ ಸಂತೋಷ್ ಶೆಟ್ಟಿ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಸಿ.ಎಂ.ಜೋಶಿ 9 ಮಂದಿ ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ರಾಜು ಪೂಜಾರಿ ಬನ್ನಾಡಿ ವಾದಿಸಿದ್ದರು.