ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆ: ಪಾಲನಾ ವರದಿ ನೀಡದ ಸರ್ವೇ ಅಧಿಕಾರಿ ಕ್ಷಮೆಯಾಚನೆ
ಪಡಿತರ ಕೂಪನ್ ವ್ಯವಸ್ಥೆಗೆ ವ್ಯಾಪಕ ವಿರೋಧ
![ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆ: ಪಾಲನಾ ವರದಿ ನೀಡದ ಸರ್ವೇ ಅಧಿಕಾರಿ ಕ್ಷಮೆಯಾಚನೆ ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆ: ಪಾಲನಾ ವರದಿ ನೀಡದ ಸರ್ವೇ ಅಧಿಕಾರಿ ಕ್ಷಮೆಯಾಚನೆ](https://www.varthabharati.in/sites/default/files/images/articles/2016/08/31/thaluku-panchayath.jpg)
ಸುಳ್ಯ, ಆ.31: ಸುಳ್ಯ ತಾಲೂಕು ಪಂಚಾಯತ್ನ ಸಾಮಾನ್ಯ ಸಭೆಯು ತಾಲೂಕು ಪಂಚಾಯತ್ನ ಪಯಸ್ವಿನಿ ಸಭಾಂಗಣದಲ್ಲಿ ನಡೆಯಿತು.
ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶುಭದಾ ರೈ, ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಕಾರ್ಯನಿರ್ವಹಣಾಧಿಕಾರಿ ಮಧುಕುಮಾರ್, ತಹಶೀಲ್ದಾರ್ ಅನಂತ ಶಂಕರ ವೇದಿಕೆಯಲ್ಲಿದ್ದರು.
ಬೆಳ್ಳಾರೆ ಅಂಬೇಡ್ಕರ್ ಭವನ ಶಿಥಿಲವಾಗಿದ್ದು, ಕೆಡವಲು ಅನುಮತಿ ನೀಡುವಂತೆ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಇಲಾಖೆಗೆ ಬರೆಯಲಾಗಿತ್ತು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತಿಳಿಸಿದರು. ಕಟ್ಟಡ ಉತ್ತಮವಾಗಿದ್ದು, ಛಾವಣಿ ಮಾತ್ರ ಶಿಥಿಲವಾಗಿದೆ, ಹಾಗಾಗಿ ಕೆಡವಲು ಅನುಮಿತಿ ನೀಡಿಲ್ಲ ಎಂದು ಇಂಜಿನಿಯರ್ ಉತ್ತರಿಸಿದರು.
ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ರಸ್ತೆಗಳನ್ನು ಪಹಣಿಯಲ್ಲಿ ದಾಖಲು ಮಾಡಲು ಯಾಕೆ ಆಗುತ್ತಿಲ್ಲ ಎಂದು ರಾಧಾಕೃಷ್ಣ ಬೊಳ್ಳೂರು ಪ್ರಶ್ನಿಸಿದರು. ಕಾಲಮಿತಿಯಲ್ಲಿ ಅದನ್ನು ದಾಖಲು ಮಾಡಲು ಸಾಧ್ಯವಿಲ್ಲ ಎಂದು ತಹಶೀಲ್ದಾರ್ ಉತ್ತರಿಸಿದರು. ಈ ಕುರಿತು ನಿರ್ಣಯ ಮಾಡಿ ಡಿಸಿಗೆ ಬರೆಯುವ ಎಂದು ಬೊಳ್ಳೂರು ಹೇಳಿದರು. ಗ್ರಾಮೀಣ ರಸ್ತೆಗಳು ಅತಿಕ್ರಮಣಗೊಂಡು ಈಗ ಬೈಕ್ ಮಾತ್ರ ಹೋಗುವ ಸ್ಥಿತಿಗೆ ಬಂದಿವೆ ಎಂದು ಸದಸ್ಯ ಉದಯ ಕೊಪ್ಪಡ್ಕ ಹೇಳಿದರು. ಗ್ರಾಮಕರಣಿಕರಿಂದ ಐ ಸ್ಕೆಚ್ ಮಾಡಿಸಿ ಎಂದು ಅಬ್ದುಲ್ ಗಫೂರ್ ಹೇಳಿದರು. ಎಲ್ಲಾ ಸದಸ್ಯರು ತಮ್ಮ ವ್ಯಾಪ್ತಿಯ ರಸ್ತೆಗಳನ್ನು ಪಿಡಿಒ, ವಿಎಗಳ ಸಹಕಾರದಿಂದ ಗುರುತಿಸಿ ಐ ಸ್ಕೆಚ್ ಮಾಡಿಸಬಹುದು ಎಂದು ಬೊಳ್ಳೂರು ಸಲಹೆ ಮಾಡಿದರು.
ಸಾಮಾಜಿಕ ಅರಣ್ಯ ಸರಕಾರಿ ಜಮೀನೋ, ಅರಣ್ಯ ಜಮೀನೋ ಎಂಬ ವಿಷಯದ ಕುರಿತು ವ್ಯಾಪಕ ಚರ್ಚೆ ನಡೆಯಿತು. ಸರಕಾರಿ ಜಮೀನಾಗಿದ್ದರೂ ಅದನ್ನು ಕಂದಾಯ ಅಧಿಕಾರಿಗಳೊಂದಿಗೆ ಸೇರಿ ಅರಣ್ಯ ಎಂದು ನಮೂದಿಸುವ ಕಾರ್ಯ ನಡೆಯುತ್ತಿದೆ ಎಂದು ಸದಸ್ಯರು ಆರೋಪಿಸಿದರು. ಆರ್ಟಿಸಿಯಲ್ಲಿ ಸಾಮಾಜಿಕ ಅರಣ್ಯ ಎಂದು ಇದ್ದರೆ 94ಸಿಯಲ್ಲಿ ಹಕ್ಕುಪತ್ರ ನೀಡುತ್ತಿಲ್ಲ ಎಂದು ಅಬ್ದುಲ್ ಗಫೂರ್ ದೂರಿದರು.
ರಸ್ತೆ ಬದಿ ಇರುವ ಮರ ತೆರವು ಮಾಡದೇ ಇರುವ ಕುರಿತು ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು. ಬೆಳ್ಳಾರೆಯಲ್ಲಿ ಅಪಾಯಕಾರಿ ಮರ ತೆರವು ಮಾಡುವುದಾಗಿ ಅರಣ್ಯ ಅಧಿಕಾರಿ ತಿಳಿಸಿದ್ದರೂ ಇನ್ನೂ ಮರ ಹಾಗೆಯೇ ಇದೆ ಎಂದು ಇಒ ಹೇಳಿದರು. ಮೀಸಲು ಅರಣ್ಯದಲ್ಲಿ ಇರುವ ಮರ ತೆರವು ಮಾಡಲು ಹಿರಿಯ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ ಎಂದು ಅರಣ್ಯ ಅಧಿಕಾರಿ ಉತ್ತರಿಸಿದರು. ಗ್ರಾಮ ಪಂಚಾಯತ್ ಕಾಯ್ದೆಯಡಿ ಅಪಾಯಕಾರಿ ಮರ ತೆರವು ಮಾಡಲು ಪಂಚಾಯತ್ಗೆ ಅವಕಾಶವಿದೆೆಂದು ಬೊಳ್ಳೂರು ಹೇಳಿದರು. ಈ ಸಂದರ್ಭ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು.
ತಾಲೂಕಿನ 6 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಯಾರಿಗೂ ಇರುವರೆಗೆ ಪರಿಹಾರ ಸಿಕ್ಕಿಲ್ಲ ಎಂದು ಅಶೋಕ್ ನೆಕ್ರಾಜೆ ದೂರಿದರು. ಬೆಳೆಹಾನಿ ಅಥವ ಸಾಲ ಓವರ್ಡ್ಯೂ ಆಗಿ ಬ್ಯಾಂಕ್ನಿಂದ ನೋಟಿಸ್ ಆಗಿದ್ದು, ಸಾಲ ತೀರಿಸಲು ರೈತ ವಿಫಲವಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದರೆ ಮಾತ್ರ ಪರಿಹಾರಕ್ಕೆ ಅವಕಾಶವಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಾಲಿಚಂದ್ರ ಉತ್ತರಿಸಿದರು. ಬ್ಯಾಂಕಿನಲ್ಲಿ ಸಾಲ ಓವರ್ಡ್ಯೂ ಆಗಿದ್ದು, ನೋಟಿಸ್ ಕೂಡಾ ಜಾರಿಯಾಗಿತ್ತು. ಈ ಕುರಿತು ದಾಖಲೆ ನೀಡಿದ್ದರೂ ಪರಿಹಾರ ನೀಡಿಲ್ಲ ಎಂದು ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು. ಪುನರ್ಪರಿಶೀಲನೆ ಮಾಡಿ ಸರಕಾರಕ್ಕೆ ವರದಿ ನೀಡುವಂತೆ ನಿರ್ಣಯ ಕೈಗೊಳ್ಳಲಾಯಿತು.
ಪಂಜ ನಾಡ ಕಚೇರಿ ಛಾವಣಿ ಶಿಥಿಲವಾಗಿದ್ದು, ಬೀಳುವ ಸ್ಥಿತಿಯಲ್ಲಿದೆ. ದಾಖಲೆಗಳು ಒದ್ದೆಯಾಗುತ್ತಿವೆ. ತಕ್ಷಣ ಪರ್ಯಾಯ ವ್ಯವಸ್ಥೆ ಮಾಡುವಂತೆ ತಾಲೂಕು ಪಂಚಾಯತ್ ಸದಸ್ಯ ಅಬ್ದುಲ್ ಗಫೂರ್ ಆಗ್ರಹಿಸಿದ್ದಾರೆ. ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಹೇಳಿದರು. ನೂತನ ಕಟ್ಟಡಕ್ಕೆ ಅಂದಾಜು ಪಟ್ಟಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿ ಉತ್ತರಿಸಿದರು.
ಆಶ್ರಯ ವಸತಿ ನಿವೇಶನಗಳಲ್ಲಿ ಮಂಜೂರಾದವರು ಮನೆ ನಿರ್ಮಿಸದೇ ಇತರರು ನಿರ್ಮಿಸಿದ್ದು, ಅಲ್ಲಿ 94ಸಿ ಅರ್ಜಿ ಹಾಕಿದ್ದರೆ ಶುಲ್ಕ ರಹಿತವಾಗಿ ಹಕ್ಕುಪತ್ರ ನೀಡಬೇಕು ಎಂದು ಗಫೂರ್ ಆಗ್ರಹಿಸಿದರು. ಪಡ್ಪಿನಂಗಡಿ, ನಾಗತೀರ್ಥ, ಪಲ್ಲೋಡಿ ಕಾಲನಿಗಳಲ್ಲಿ ಈ ಸಮಸ್ಯೆ ಇದೆ ಎಂದು ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಕಾರ್ಯಪ್ಪಗೌಡ ಹೇಳಿದರು. ಐವರ್ನಾಡಿನಲ್ಲೂ ಇಂತಹ ಪ್ರಕರಣಗಳಿವೆ ಎಂದು ಅಲ್ಲಿನ ಅಧ್ಯಕ್ಷೆ ರಾಜೀವಿ ಹೇಳಿದರು.
ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೀಸಲಿಟ್ಟ ಜಮೀನು ಅತಿಕ್ರಮಣವಾಗಿದ್ದು, ಗಡಿಗುರುತು ಮಾಡಿಕೊಡುವಂತೆ ತಿಳಿಸಿದ್ದರೂ ಇನ್ನೂ ಆಗಿಲ್ಲ ಎಂದು ಅಶೋಕ್ ನೆಕ್ರಾಜೆ ಹೇಳಿದರು. ಮುಪ್ಪೇರ್ಯ ಉಪ ಆರೋಗ್ಯ ಕೇಂದ್ರದ ಜಮೀನು ಅತಿಕ್ರಮಣ ಆಗಿದೆ ಎಂದು ಜಾಹ್ನವಿ ಹೇಳಿದರು. ಪಾಲನಾ ವರದಿ ನೀಡದೇ ಇರುವ ಸರ್ವೆ ಇಲಾಖೆಯ ಅಧಿಕಾರಿಯನ್ನು ಇಒ ತರಾಟೆಗೆ ತೆಗೆದುಕೊಂಡರು. ತನ್ನದು ತಪ್ಪಾಗಿದೆ ಎಂದು ಅಧಿಕಾರಿ ಉತ್ತರಿಸಿದರು. 13 ಗ್ರಾಮಗಳಲ್ಲಿ ಪೋಡಿ ಮುಕ್ತ ಗ್ರಾಮ ಸರ್ವೇ ಪೂರ್ಣಗೊಂಡಿದೆ. 698 ಪ್ಲಾಟಿಂಗ್ ಕಡತಗಳು ಬಾಕಿ ಉಳಿದಿವೆ ಎಂದು ಅಧಿಕಾರಿ ಉತ್ತರಿಸಿದರು.
ಪಡಿತರ ಕೂಪನ್ ವ್ಯವಸ್ಥೆಗೆ ಸದಸ್ಯರು ಪಕ್ಷಭೇದ ಮರೆತು ತೀವ್ರ ವಿರೋಧ ವ್ಯಕ್ತಪಡಿಸಿದರು. ಪಂಜ ಹಾಗೂ ಅಜ್ಜಾವರ ಗ್ರಾಮದಲ್ಲಿ ಮಾತ್ರ ಕಡ್ಡಾಯ ಮಾಡಿದ್ದು, ಉಳಿದೆಡೆ ಎಪಿಎಲ್ನವರಿಗೆ ಮಾತ್ರ ಕೂಪನ್ ಜಾರಿ ಮಾಡಲಾಗಿದೆ ಎಂದು ಕಾರ್ಯಪ್ಪ ದೂರಿದರು.