ಮಂಗಳೂರು ವಿವಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ!
ವಿದ್ಯಾರ್ಥಿನಿಯರ ಸುರಕ್ಷತೆಗಿಲ್ಲ ಆದ್ಯತೆ!
ಮಂಗಳೂರು, ಸೆ.1: ಮಂಗಳೂರು ವಿಶ್ವವಿದ್ಯಾನಿಲಯದ ಬಯೋಟೆಕ್ನಾಲಜಿ ವಿಭಾಗದ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ಅಳವಡಿಸಿರುವ ಪ್ರಕರಣವು ಇಡೀ ವಿಶ್ವವಿದ್ಯಾನಿಲಯದಲ್ಲಿ ಕಲಿಯುತ್ತಿರುವ ಸಾವಿರಾರು ಮಹಿಳಾ ವಿದ್ಯಾರ್ಥಿಗಳ ಸುರಕ್ಷತೆಯ ಕುರಿತಂತೆ ತೀವ್ರ ಆತಂಕವನ್ನು ಸೃಷ್ಟಿಸಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ವಿಜ್ಞಾನ ಮತ್ತು ಜೈವಿಕ ವಿಜ್ಞಾನ ವಿಭಾಗ ಕಟ್ಟಡದ ಮಹಿಳಾ ಶೌಚಾಲಯದಲ್ಲಿ ಆಗಸ್ಟ್ ತಿಂಗಳ ಪ್ರಥಮ ಅಥವಾ ದ್ವಿತೀಯ ವಾರದಲ್ಲಿ ಇರಿಸಿಲಾಗಿರಬಹುದೆಂದು ಶಂಕಿತಲಾಗಿರುವ ಈ ಮೊಬೈಲ್ ಕ್ಯಾಮರಾದಲ್ಲಿನ ರೆಕಾರ್ಡಿಂಗ್, ವೈಫೈ ಮೂಲಕ ಹರಿದಾಡಿರುವ ಬಗ್ಗೆ ಅನುಮಾನಗಳಿವೆ.
ಅನ್ವಯಿಕ ವಿಜ್ಞಾನ ಮತ್ತು ಜೈವಿಕ ವಿಜ್ಞಾನದ ಕೆಲ ವಿದ್ಯಾರ್ಥಿನಿಯರನ್ನು ಇಂದು "ವಾರ್ತಾಭಾರತಿ'ಯ ಪ್ರತಿನಿಧಿ ಮಾತನಾಡಿಸಿದಾಗ, ವಿದ್ಯಾರ್ಥಿನಿಯರಿಗೆ ಪ್ರಕರಣದ ಗಂಭೀರತೆಯ ಅರಿವಾಗಿರುವುದು ಮಾತ್ರವಲ್ಲದೆ, ತಮ್ಮ ಸುರಕ್ಷತೆಯ ಬಗ್ಗೆ ಆತಂಕವೂ ವ್ಯಕ್ತವಾಗಿರುವುದು ಕಂಡು ಬಂತು. ‘‘ಕೆಲ ದಿನಗಳ ಹಿಂದೆ ಈ ಮೊಬೈಲ್ ಕ್ಯಾಮರಾ ಪತ್ತೆಯಾಗಿರುವುದು ನಮಗೆ ತಿಳಿದಿದೆ. ನಮ್ಮ ಸುರಕ್ಷತೆಯ ಬಗ್ಗೆ ನಾವು ಆತಂಕಿತರಾಗಿದ್ದೆವು. ನಮ್ಮ ಕಟ್ಟಡದಲ್ಲಿ ಶೀಘ್ರವೇ ಸಿಸಿ ಕ್ಯಾಮರಾ ಅಳವಡಿಸುವ ಭರವಸೆಯನ್ನು ನೀಡಿದ್ದಾರೆ. ಆತಂಕ ಈಗಲೂ ಇದೆ’’ ಎಂದು ಜೈವಿಕ ವಿಜ್ಞಾನ ವಿಭಾಗದ ಕೆಲ ವಿದ್ಯಾರ್ಥಿನಿಯರು ಅಭಿಪ್ರಾಯಿಸಿದ್ದಾರೆ.
ಈ ನಡುವೆ, ಶೌಚಾಲಯದ ಮೇಲ್ಛಾವಣಿಯಲ್ಲಿ ಹಲಗೆಗೆ ರಂಧ್ರ ಕೊರೆದು ಅತ್ಯಂತ ಗೌಪ್ಯವಾಗಿ ಮೊಬೈಲ್ ಕ್ಯಾಮರಾವಿರಿಸಿ, ರೆಕಾರ್ಡಿಂಗ್ ಮಾಡಿದ್ದಲ್ಲದೆ, ಪವರ್ ಬ್ಯಾಂಕ್ ಕೂಡಾ ಅಳವಡಿಸಲಾಗಿತ್ತು ಎಂಬುದನ್ನು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಲೋಕೇಶ್ ಒಪ್ಪಿಕೊಂಡಿದ್ದಾರೆ.
‘ವಾರ್ತಾಭಾರತಿ’ಯೊಂದಿಗೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘‘ನಾಲ್ಕು ದಿನಗಳ ಹಿಂದೆ ನಮಗೆ ಈ ಬಗ್ಗೆ ದೂರು ಬಂದಿದ್ದು, ತಕ್ಷಣ ಕ್ರಮ ಕೈಗೊಳ್ಳಲಾಗಿದೆ. ವಿಶ್ವವಿದ್ಯಾನಿಲಯದ ಮಹಿಳಾ ದೌರ್ಜನ್ಯ ತಡೆ ಸಮಿತಿಯ ಮುಖ್ಯಸ್ಥೆ ಪ್ರೊ. ಮುಶ್ತಿರ್ ಬೇಗಂ ನೇತೃತ್ವದಲ್ಲಿ ಈ ಬಗ್ಗೆ ತನಿಖೆ ನಡೆಯುತ್ತಿದೆ. ವಿದ್ಯಾರ್ಥಿನಿಯೊಬ್ಬಳು ಶೌಚಾಲಯದಲ್ಲಿ ಇದನ್ನು ಪತ್ತೆ ಹಚ್ಚಿದ್ದು, ತಕ್ಷಣ ಸಮಿತಿಗೆ ಮಾಹಿತಿ ನೀಡಿದ್ದಳು. ತಕ್ಷಣ ಮೊಬೈಲ್ ಕ್ಯಾಮರಾ ವಶಪಡಿಸಿಕೊಂಡು ಸಮಿತಿ ಅದನ್ನು ಪರಿಶೀಲಿಸಿದೆ. ಮೊಬೈಲ್ನಲ್ಲಿ ಸಿಮ್ ಕಾರ್ಡ್ ಇರಲಿಲ್ಲ. ಅದರಲ್ಲಿ ಅಂತಹ ಯಾವುದೇ ಕಟೆಂಟ್ ಇರಲಿಲ್ಲ ಎಂಬುದಾಗಿ ತಿಳಿದು ಬಂದಿದೆ. ವಿವಿ ಆಡಳಿತವು ವಿದ್ಯಾರ್ಥಿನಿಯರ ಸುರಕ್ಷತೆಗೆ ಬದ್ಧವಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಒಂದೆರಡು ದಿನಗಳಲ್ಲಿ ಸಮಿತಿ ವರದಿಯನ್ನು ನೀಡಲಿದೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’’ ಎಂದು ಹೇಳಿದರು.
ಪೊಲೀಸರಿಗೆ ಇನ್ನೂ ದೂರು ನೀಡಿಲ್ಲ!
ವಿಶ್ವವಿದ್ಯಾನಿಲಯದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯರ ಸುರಕ್ಷತೆಯ ಹಿನ್ನೆಲೆಯಲ್ಲಿ ಇದೊಂದು ಗಂಭೀರ ಪ್ರಕರಣವಾಗಿದೆ. ಪ್ರಕರಣ ಬೆಳಕಿಗೆ ಬಂದು ಕೆಲ ದಿನಗಳಾಗಿದ್ದು, ಪ್ರಕರಣ ಸೈಬರ್ ಕ್ರೈಂಗೆ ಸಂಬಂಧಪಟ್ಟಿದ್ದಾಗಿದ್ದರೂ ಇನ್ನೂ ಪೊಲೀಸ್ ಇಲಾಖೆಗೆ ದೂರು ನೀಡಲಾಗಿಲ್ಲ. ಈ ಬಗ್ಗೆ ಕುಲಸಚಿವರನ್ನು ಪ್ರಶ್ನಿಸಿದಾಗ, ‘‘ನಮ್ಮ ವಿಶ್ವವಿದ್ಯಾನಿಲಯದ ಮಹಿಳಾ ಸುರಕ್ಷತಾ ಸಮಿತಿಯ ಮೂಲಕ ತನಿಖೆ ನಡೆದು, ಅದರ ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ದುಷ್ಕೃತ್ಯ ಎಸಗಿರುವವರನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ. ಸಮಿತಿಯಲ್ಲಿ ಕಂಪ್ಯೂಟರ್ ತಜ್ಞರಾದ ಪ್ರೊ. ಶೇಖರ್ ಹಾಗೂ ಡಾ. ಶಶಿರೇಖಾ ಅವರೂ ಸಮಿತಿಯಲ್ಲಿದ್ದು, ಅವರ ವರದಿಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಸಮಿತಿ ತನಿಖೆಯಿಂದ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದಿದ್ದಲ್ಲಿ ಪೊಲೀಸ್ ಇಲಾಖೆಗೆ ದೂರು ನೀಡಲಾಗುವುದು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ವಿಳಂಬ ಮಾಡಲಾಗುತ್ತಿಲ್ಲ’’ ಎಂದು ಪ್ರೊ. ಲೋಕೇಶ್ ಹೇಳಿದರು.
ವಿವಿಯಲ್ಲಿಲ್ಲ ಸಿಸಿ ಕ್ಯಾಮರಾ ಭದ್ರತೆ!
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹಲವು ವಿಭಾಗಗಳಲ್ಲಿ ನೂರಾರು ವಿದ್ಯಾರ್ಥಿನಿಯರು ಸ್ನಾತಕೋತ್ತರ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಎಕರೆಗಟ್ಟಲೆ ಹರಡಿಕೊಂಡಿರುವ ವಿಸ್ತಾರವಾದ ಕ್ಯಾಂಪಸ್ನಲ್ಲಿ ವಿವಿಧ ವಿಭಾಗಗಳು ಪ್ರತ್ಯೇಕ ಕಟ್ಟಡಗಳಲ್ಲಿ ಕಾರ್ಯಾಚರಿಸುತ್ತಿವೆ. ವಿದ್ಯಾರ್ಥಿನಿಯರು ಸಾಕಷ್ಟು ಸಂಖ್ಯೆಯಲ್ಲಿ ಇರುವ ಇಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಅತೀ ಅಗತ್ಯವಾಗಿದೆ. ಆದರೆ, ಇನ್ನೂ ಸಿಸಿ ಕ್ಯಾಮರಾ ಮಾತ್ರ ಅಳವಡಿಕೆಯಾಗಿಲ್ಲ.
‘‘ಶೀಘ್ರದಲ್ಲೇ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಎಲ್ಲಾ ವಿಭಾಗ ಹಾಗೂ ಕಾರಿಡಾರ್ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಕಳೆದ ಎರಡು ತಿಂಗಳಿನಿಂದೀಚೆಗೆ ಪ್ರಕ್ರಿಯೆಗಳು ನಡೆಯುತ್ತಿವೆ. ಮಾತ್ರವಲ್ಲದೆ, ವಿದ್ಯಾರ್ಥಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ ಎಂದು ಪ್ರೊ. ಲೋಕೇಶ್ ಹೇಳಿದರು. ‘‘ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಎಲ್ಲಾ ವಿಭಾಗಗಳಲ್ಲೂ ತಪಾಸಣೆ, ಪರಿಶೀಲನೆ ನಡೆಸಲಾಗಿದೆ. ಭದ್ರತೆಗೆ ಇನ್ನಷ್ಟು ಹೆಚ್ಚಿನ ಆದ್ಯತೆಗೆ ನೀಡಿ ಕ್ರಮ ಕೈಗೊಳ್ಳಲಾಗುತ್ತಿದೆ’’ ಎಂದು ಅವರು ಹೇಳಿದ್ದಾರೆ.
ತನಿಖೆಗೆ ವಿಶೇಷ ತಂಡ ರಚನೆ
ಎಸಿಪಿ ಶ್ರುತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಪ್ರಕರಣದ ತನಿಖೆ ನಡೆಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ತಿಳಿಸಿದ್ದಾರೆ.