ಪುತ್ತೂರು: ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳು ಮೃತ್ಯು
ಪುತ್ತೂರು, ಸೆ.1: ಪುತ್ತೂರು ನಗರದ ಹೊರವಲಯದ ಪಡೀಲು ಎಂಬಲ್ಲಿ ಕಳೆದ ಸೋಮವಾರ ರಸ್ತೆ ವಿಭಜಕಕ್ಕೆ ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.
ಪುತ್ತೂರು ತಾಲೂಕಿನ ಕೋಡಿಂಬಾಡಿ ಸಮೀಪದ ಬೆಳ್ಳಿಪಾಡಿ ಕೈಪ ನಿವಾಸಿ ಅಣ್ಣು ಭಂಡಾರಿ ಎಂಬವರ ಪುತ್ರ ರಾಜೇಶ್ ಭಂಡಾರಿ (25) ಮೃತಪಟ್ಟವರು.
ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್ ಪುತ್ತೂರು ಉಪ್ಪಿನಂಗಡಿ ರಸ್ತೆಯ ಪಡೀಲು ಎಂಬಲ್ಲಿ ನಿಯಂತ್ರಣ ತಪಿ ರಸ್ತೆ ಡಿವೈಡರ್ಗೆ ಢಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೂ ಚಿಕಿತ್ಸೆಗೆ ಸ್ಪಂದಿಸದ ಹಿನ್ನಲೆಯಲ್ಲಿ ಮತ್ತೆ ಪುತ್ತೂರಿಗೆ ಕೊಂಡೊಯ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ.
ಅಡಿಕೆ ಮತ್ತು ತೆಂಗಿನ ಕಾಯಿ ತೆಗೆಯುವ ಕಾಯಕ ನಡೆಸುತ್ತಿದ್ದ ರಾಜೇಶ್ ಭಂಡಾರಿ ಅವರು ಅವಿವಾಹಿತರಾಗಿದ್ದು, ತಂದೆ ಮತ್ತು ಹೋಟೆಲ್ ಕಾರ್ಮಿಕನಾಗಿರುವ ಸಹೋದರನನ್ನು ಅಗಲಿದ್ದಾರೆ. ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ರಾಜೇಶ್ ಭಂಡಾರಿ ಅವರು ಈ ಹಿಂದೆಯೇ ತನ್ನ ತಾಯಿಯನ್ನು ಕಳಕೊಂಡಿದ್ದರು. ವೃದ್ಧಾಪ್ಯದಲ್ಲಿರುವ ತಂದೆ ಅಣ್ಣು ಭಂಡಾರಿ ಅವರು ತಿಂಗಳ ಹಿಂದೆಯಷ್ಟೇ ಮನೆಯ ವಠಾರದಲ್ಲಿ ಕುಸಿದು ಬಿದ್ದು, ಚಿಂತಾಜಕ ಸ್ಥಿತಿಯಲ್ಲಿದ್ದಾರೆ. ಪದೇ ಪದೇ ಪ್ರಜ್ಞಾ ಹೀನತೆಗೊಳಗಾಗುತ್ತಿರುವ ಅವರು ಮಲಗಿದಲ್ಲೇ ಕಾಲ ಕಳೆಯುತ್ತಿದ್ದು, ಇದೀಗ ತನ್ನ ಇಬ್ಬರು ಮಕ್ಕಳ ಪೈಕಿ ರಾಜೇಶ್ಭಂಡಾರಿ ಮೃತಪಟ್ಟಿದ್ದಾರೆ.