ಸೆ.2ರಂದು ಅಖಿಲ ಭಾರತ ಬಂದ್: ಯಾವೆಲ್ಲಾ ಸೇವೆಗಳು ಇರುತ್ತವೆ? ಏನೆಲ್ಲಾ ಇರುವುದಿಲ್ಲ?

ಮಂಗಳೂರು, ಸೆ.1:ದೇಶಾದ್ಯಂತ ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆ.2ರಂದು ಹಮ್ಮಿಕೊಂಡಿರುವ ಸಾರ್ವತ್ರಿಕರ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳಿಂದ ವ್ಯಾಪಕವಾದ ಬೆಂಬಲ ದೊರೆತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಕಂಡು ಬರುತ್ತಿದೆ.
ಹಾಲು ವಿತರಣೆ, ಮೆಡಿಕಲ್ ಶಾಪ್, ಆಸ್ಪತ್ರೆಯ ವಾಹನಗಳು, ಮದುವೆ ವಾಹನಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ ಉಳಿದಂತೆ ಖಾಸಗಿ ಬಸ್ಸುಗಳ ನೌಕರರು, ವ್ಯಾಪಾರಿಗಳು,ಕೈಗಾರಿಕಾ ಘಟಕದ ಕಾರ್ಮಿಕರು,ಬೀಡಿ ಕಾರ್ಮಿಕರು,ಬೀದಿ ಬದಿಯ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳಲ್ಲಿ ದುಡಿಯುವ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಮುಷ್ಕರಕ್ಕೆ ಕರೆ ನೀಡಿರುವ ಮುಖಂಡರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಾರ್ಮಿಕ ಸಂಘಟನೆಗಳು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಖಾಸಗಿ ಬಸ್ಸು ಸಂಚಾರವೂ ಬಹುತೇಕ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಬಸ್ಸು ಮಾಲಕರ ಸಂಘದ ಮುಖಂಡರು ತಿಳಿಸಿದ್ದಾರೆ. ಕೆಎಸ್ಸಾರ್ಟಿಸಿ ಬಸ್ಗಳು ಬೆಳಗ್ಗಿನ ಹೊತ್ತು ಸಂಚರಿಸುವ ಅನಿಶ್ಚಿತತೆಯನ್ನು ಹೊಂದಿದ್ದು ಸೆ.2ರಂದು ಸಂಜೆ 6 ಗಂಟೆಯ ಬಳಿಕ ರಾತ್ರಿ ಸಂಚಾರದ ಬಸ್ಸುಗಳು ಎಂದಿನಂತೆ ಸಂಚಾರ ನಡೆಸಲಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಬಂದ್ ನಿಂದ ದ.ಕ ಜಿಲ್ಲೆಯಲ್ಲಿ ಪರಿಣಾಮ ಉಂಟಾಗಬಹುದಾದ ಕ್ಷೇತ್ರಗಳು
- ಮಂಗಳೂರು ನಗರ, ಗ್ರಾಮಾಂತರ, ದ.ಕ.-ಉಡುಪಿ, ದ.ಕ.-ಕಾಸರಗೋಡು, ಸುಳ್ಯ-ಮಡಿಕೇರಿ ನಡುವೆ ಸಂಚರಿಸುವ ಖಾಸಗಿ ಬಸ್ ಸಂಚಾರವೂ ಬಹುತೇಕ ಸ್ಥಗಿತಗೊಳ್ಳುವ ಸೂಚನೆ ಕಂಡು ಬಂದಿದೆ.
- ಕೆಎಸ್ಸಾರ್ಟಿಸಿ ಬಸ್ಸು ಸಂಚಾರದಲ್ಲೂ ವ್ಯತ್ಯಯವಾಗುವ ಸಾಧ್ಯತೆ ಇದೆ.
- ನಗರದ ತರಕಾರಿ,ಹೂ,ಹಣ್ಣಿನ ಪ್ರಮುಖ ಮಾರುಕಟ್ಟೆ ಪ್ರದೇಶವಾದ ಸೆಂಟ್ರಲ್ ಮಾರ್ಕೆಟ್ನ ವ್ಯಾಪಾರಸ್ಥರ ಸಂಘಟನೆ ಬಂದ್ಗೆ ಬೆಂಬಲ ಸೂಚಿಸಿದೆ.
- ನಗರದ ಸ್ಟೇಟ್ ಬ್ಯಾಂಕ್ ಬಳಿಯ ಮೀನು ಮಾರುಕಟ್ಟೆ, ಒಣ ಮೀನು ಮಾರುಕಟ್ಟೆಯ ಬಹುತೇಕ ವರ್ತಕರು ಬಂದ್ ಸಂದರ್ಭದಲ್ಲಿ ವ್ಯಾಪಾರ ಸ್ಥಗಿತಗೊಳಿಸುವ ಬಗ್ಗೆ ಸೂಚನೆ ನೀಡಿದ್ದಾರೆ.
- ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಮೂಲಕ ಸೆ.2ರಂದು ನಡೆಯಲಿರುವ ಪರೀಕ್ಷೆಗಳನ್ನು ಮುಂದೂಡಲಾಗಿದೆ.
- ಕೆಲವು ಖಾಸಗಿ ವಾಣಿಜ್ಯ ಸಂಸ್ಥೆಗಳು ಕಾರ್ಮಿಕರು ಗೈರು ಹಾಜರಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರಜೆ ಘೋಷಿಸಿದೆ.
- ಬಂದ್ನಲ್ಲಿ ಹಲವು ಕಾರ್ಮಿಕ ಸಂಘಟನೆಗಳು ಪಾಲ್ಗೊಳುವ ಕಾರಣದಿಂದ ಬಹತೇಕ ಅಂಗಡಿ,ಹೊಟೇಲ್ ,ಇತರ ವ್ಯಾಪಾರಸ್ಥರ ಮಳಿಗೆಗಳು ಮುಚ್ಚಬೇಕಾಗುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.
- ಕೆಲವು ಶಾಲೆ ,ಕಾಲೇಜುಗಳು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಶಾಲೆಗೆ ಹಾಜರಾಗಲು ವಾಹನ ಸೌಕರ್ಯದ ಸಮಸ್ಯೆ ಇರುವ ಕಡೆ ರಜೆ ನೀಡುವ ಬಗ್ಗೆ ಸೂಚನೆ ನೀಡಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲೆಯ ಶಾಲೆಗಳಿಗೆ ಅಧಿಕೃತವಾಗಿ ರಜೆ ಘೋಷಿಸದೆ ಇದ್ದರೂ ಬಸ್ಸು ಸಂಚಾರ ಸ್ಥಗಿತಗೊಂಡರೆ ಶಾಲೆಗಳು ಕಾರ್ಯಾಚರಣೆ ಮಾಡುವ ಸಾಧ್ಯತೆ ಕಡಿಮೆ.
- ಕೆಲವು ರಿಕ್ಷಾ,ಟ್ಯಾಕ್ಸಿ ಹಾಗೂ ಇತರ ಖಾಸಗಿ ವಾಹನಗಳ ಸಂಘಟನೆಗಳು ಬಂದ್ನಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದೆ.
ಬಂದ್ ಸಂದರ್ಭದಲ್ಲಿ ಇರಬಹುದಾದ ಸೌಲಭ್ಯಗಳು
- ರಾಜ್ಯ ಹಾಗೂ ಕೇಂದ್ರ ಸರಕಾರದ ಎಲ್ಲಾ ಸರಕಾರಿ ಕಚೇರಿಗಳು ತೆರೆದಿರುತ್ತವೆ. (ಸಾರಿಗೆ ಸೌಲಭ್ಯ ಇಲ್ಲದಿದ್ದಲ್ಲಿ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಕಂಡುಬರುವ ಸಾಧ್ಯತೆ)
- ಅಂಚೆ ಕಚೇರಿ, ರೈಲ್ವೆ, ವಿಮಾನ ನಿಲ್ದಾಣಗಳ ಸೇವೆ ಎಂದಿನಂತೆ ಮುಂದುವರಿಯಲಿದೆ. ಹಾಗೂ ಸಂಜೆ 6 ಗಂಟೆಯ ನಂತರ ಕೆಎಸ್ಸಾರ್ಟಿಸಿ ಬಸ್ ಸಂಚಾರ ಎಂದಿನಂತೆ ಮುಂದುವರಿಯಲಿದೆ.
- ಬಂದ್ ಬೆಂಬಲಿಸದೆ ಇರುವ ಕೆಲವು ಸಂಘಟನೆಗಳ ಅಂಗಡಿ, ಮುಂಗಟ್ಟುಗಳು ತೆರೆದಿರುವ ಸಾಧ್ಯತೆ ಇದೆ.
- ಹಾಲು,ದಿನಪತ್ರಿಕೆ,ಆ್ಯಂಬುಲೆನ್ಸ್ ಸೇವೆ,ಮದುವೆ ವಾಹನಗಳಿಗೆ,ಮೆಡಿಕಲ್ ಶಾಪ್ಗಳು,ಆಸ್ಪತ್ರೆ ಸೇರಿದಂತೆ ತುರ್ತ ಸೇವೆಗಳಿಗೆ ಬಂದ್ನಿಂದ ವಿನಾಯಿತಿ ಹೊಂದಿದೆ.
ಬಂದ್ ಬಗ್ಗೆ ಅಧಿಕಾರಿಗಳ, ಖಾಸಗಿ ಸಂಘಟನೆಗಳ ಮುಖಂಡರ ಹೇಳಿಕೆಗಳು
ಬಂದ್ಗೆ ಸಂಬಂಧಿಸಿದಂತೆ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಬಗ್ಗೆ ಯಾವುದೇ ತೀರ್ಮಾನ ಕೈ ಗೊಂಡಿಲ್ಲ
-ದ.ಕ ಜಿಲ್ಲಾಧಿಕಾರಿ.
ಕೆಎಸ್ಸಾರ್ಟಿಸಿ ಬಂದ್ನಲ್ಲಿ ಪಾಲ್ಗೊಳ್ಳುವುದಿಲ್ಲ. ಪರಿಸ್ಥಿತಿಯನ್ನು ಗಮನಿಸಿಕೊಂಡು ಬಸ್ಗಳನ್ನು ಓಡಿಸಲಾಗುವುದು. ಸಂಜೆ 6ಗಂಟೆಯ ನಂತರ ರಾತ್ರಿ ಬಸ್ಸುಗಳು ಎಂದಿನಂತೆ ಸಂಚರಿಸಲಿವೆ.
- ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣ ಅಧಿಕಾರಿ.
ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘದ ಚಾಲಕ, ನಿರ್ವಾಹಕರು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿರುವ ಕಾರಣದಿಂದ ಬಹುತೇಕ ಖಾಸಗಿ ಬಸ್ಸುಗಳ ಸಮಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ
- ಅಝೀಝ್ ಪರ್ತಿಪ್ಪಾಡಿ ದ.ಕ ಬಸ್ಸು ಮಾಲಕರ ಸಂಘದ ಅಧ್ಯಕ್ಷ.
ಕೇಂದ್ರ ಮಾರುಕಟ್ಟೆಯ ವ್ಯಾಪಾರಿಗಳ ಸಭೆ ಕರೆದು ಸೆ.2ರ ಬಂದ್ನಲ್ಲಿ ಪಾಲ್ಗೊಳ್ಳುವ ಕಾರಣ ಕೇಂದ್ರ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳ್ಳಲಿದೆ.
- ಹಮೀದ್ ಕಂದಕ್ ಕೇಂದ್ರ ಮಾರುಕಟ್ಟೆ ವ್ಯಾಪಾರಿಗಳ ಸಂಘಟನೆಗಳ ಅಧ್ಯಕ್ಷ.
ಜಿಲ್ಲೆಯ ಶಾಲಾ ಕಾಲೇಜಿಗಳಿಗೆ ರಜೆ ಘೋಷಣೆ ಮಾಡಿಲ್ಲ.
- ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು.







