ಪಾರಿಕ್ಕರ್-ಗಡ್ಕರಿ ವಿರುದ್ಧ ಆರೆಸ್ಸೆಸ್ ಮುಖಂಡನ ದಾಳಿ

ಪಣಜಿ, ಸೆ.1: ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮದ ವಿಷಯದಲ್ಲಿ ಗೋವಾದ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದುದಕ್ಕಾಗಿ ರಾಜ್ಯದ ಆರೆಸ್ಸೆಸ್ ವರಿಷ್ಠನ ಸ್ಥಾನದಿಂದ ಉಚ್ಚಾಟಿಸಲ್ಪಟ್ಟಿರುವ ಸುಭಾಶ್ ವೆಲಿಂಗ್ಕರ್ ತನ್ನ ವೌನ ಮುರಿದಿದ್ದಾರೆ. ತನ್ನ ವಿರುದ್ಧದ ಈ ಕ್ರಮಕ್ಕಾಗಿ ಅವರು ಕೇಂದ್ರ ಸಚಿವರಾದ ಮನೋಹರ್ ಪಾರಿಕ್ಕರ್ ಹಾಗೂ ನಿತಿನ್ ಗಡ್ಕರಿಯವರನ್ನು ದೂಷಿಸಿದ್ದಾರೆ.
ತನ್ನ ಹಿಂದೆ ನೂರಾರು ಆರೆಸ್ಸೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರ ಗಡಣವೇ ಇದೆಯೆಂದು ಪ್ರತಿಪಾದಿಸಿರುವ ವೆಲಿಂಗ್ಕರ್, ಕನಿಷ್ಠ ಮುಂದಿನ ವರ್ಷ ಗೋವಾ ವಿಧಾನಸಭೆಯ ಚುನಾವಣೆಯವರೆಗೆ ಕರಾವಳಿ ರಾಜ್ಯದ ಸಂಘ ಫಟಕವು ಮಾತೃ ಸಂಸ್ಥೆಯಿಂದ ಪತ್ಯೇಕವಾಗಿ ಕೆಲಸ ಮಾಡಲಿದೆ ಎಂದಿದ್ದಾರೆ.
ಉಚ್ಚಾಟನೆಯಿಂದ ತನಗೆ ಆಘಾತವಾಗಿಲ್ಲ. ತಾನದನ್ನು ನಿರೀಕ್ಷಿಸುತ್ತಿದ್ದೆನೆಂದು ಅವರು ಹೇಳಿದ್ದಾರೆ.
ಪಾರಿಕ್ಕರ್ ಹಾಗೂ ಗಡ್ಕರಿ ಕೇಂದ್ರದಲ್ಲಿ ಬಲಾಢ್ಯ ವ್ಯಕ್ತಿಗಳಾಗಿದ್ದಾರೆ. ಅವರಲ್ಲಿ ಪ್ರಬಲ ಲಾಬಿ ನಡೆಸಿದ್ದಾರೆ. ಬಹುಶಃ ಅವರಿದಕ್ಕೆ ಪ್ರಯತ್ನಿಸಿದ್ದಾರೆ. ಅವರು ಆರೆಸ್ಸೆಸ್ ಹೈಕಮಾಂಡ್ಗೆ ತಪ್ಪು ಮಾಹಿತಿ ನೀಡಿರಬೇಕೆಂದು ವೆಲಿಂಗ್ಕರ್ ಪಿಟಿಐಯೊಂದಿಗೆ ಕಿಡಿಗಾರಿದ್ದಾರೆ.





