ಉಪ್ಪಿನಂಗಡಿ: ತೀವ್ರ ಅಸ್ವಸ್ಥಗೊಂಡಿದ್ದ ಯುವಕನನ್ನು ಉಪಚರಿಸಿ ಮಾನವೀಯತೆ ಮೆರೆದ ಜಹುರುದ್ದೀನ್
![ಉಪ್ಪಿನಂಗಡಿ: ತೀವ್ರ ಅಸ್ವಸ್ಥಗೊಂಡಿದ್ದ ಯುವಕನನ್ನು ಉಪಚರಿಸಿ ಮಾನವೀಯತೆ ಮೆರೆದ ಜಹುರುದ್ದೀನ್ ಉಪ್ಪಿನಂಗಡಿ: ತೀವ್ರ ಅಸ್ವಸ್ಥಗೊಂಡಿದ್ದ ಯುವಕನನ್ನು ಉಪಚರಿಸಿ ಮಾನವೀಯತೆ ಮೆರೆದ ಜಹುರುದ್ದೀನ್](https://www.varthabharati.in/sites/default/files/images/articles/2016/09/1/care-for-elderly-parents.jpg)
ಉಪ್ಪಿನಂಗಡಿ, ಸೆ.1: ಮತಿಭ್ರಮಣೆಗೊಂಡು ಮೈಮೇಲಿನ ಪರಿವೆಯಿಲ್ಲದೆ, ಮೈಯಲ್ಲಿ ಬಟ್ಟೆಯಿಲ್ಲದೆ ಸಂಪೂರ್ಣ ನಗ್ನನಾಗಿದ್ದ ಯುವಕನಿಗೆ ಇಲ್ಲಿನ ಬೀದಿಬದಿ ವ್ಯಾಪಾರಿಯೊಬ್ಬರು ಬಟ್ಟೆ ತೊಡಿಸಿ, ಕಾಫಿ ಕುಡಿಸಿ ಮಾನವೀಯತೆ ಮೆರೆದಿದ್ದಾರೆ.
ಜಹುರುದ್ದೀನ್ ಅಲಿಯಾಸ್ ಜಾಯಿ ಎಂಬವರೇ ಈ ವ್ಯಾಪಾರಿ. ಜನನಿಬಿಡ ಪ್ರದೇಶವಾದ ಉಪ್ಪಿನಂಗಡಿಯ ಬಸ್ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ ಮಾನಸಿಕ ಅಸ್ವಸ್ಥನಾದ ಹಿಂದಿ ಭಾಷಿಗ ಯುವಕನೋರ್ವ ನಗ್ನವಾಗಿ ಅಲೆದಾಡುತ್ತಿದ್ದ. ಈತನ ಈ ಸ್ಥಿತಿಯಿಂದಾಗಿ ಶಾಲಾ ಕಾಲೇಜಿಗೆಂದು ಹೊರಟಿದ್ದ ವಿದ್ಯಾರ್ಥಿನಿಯರು, ಮಹಿಳೆಯರು ಮುಜುಗರಕ್ಕೆ ಒಳಗಾಗಿದ್ದರು.
ತಕ್ಷಣ ಹಣ್ಣು ವ್ಯಾಪಾರಿ ಜಾಯಿ ಮೊದಲು ಗೋಣಿ ಚೀಲವನ್ನು ಯುವಕನಿಗೆ ತೊಡಿಸಿ, ಮಾನ ಮುಚ್ಚಿದರು. ಯುವಕ ಯಾವುದೇ ಪ್ರತಿರೋಧ ತೋರದಿದ್ದಾಗ ಶುಚಿಗೊಳಿಸಿ, ಜವುಳಿ ಮಳಿಗೆಯಿಂದ ಬಟ್ಟೆಬರೆ ತೊಡಿಸಿ, ಕಾಫಿ, ತಿಂಡಿ ತಿನ್ನಿಸಿದರು. ಹೊಟ್ಟೆ ತುಂಬ ತಿಂಡಿ ತಿಂದ ಬಳಿಕ ಯುವಕ ತನ್ನ ಪಾಡಿಗೆ ತಾನೆಂಬಂತೆ ಮುನ್ನಡೆದ. ಜಹುರುದ್ದೀನ್ರ ಈ ಸೇವೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಯಿತು.