‘ಶಿಕ್ಷಣದೊಂದಿಗೆ ಕ್ರೀಡೆಗೂ ಪ್ರೋತ್ಸಾಹ ಅಗತ್ಯ’
ಜಿಲ್ಲಾ ಮಟ್ಟದ ಬಾಲ್ಬ್ಯಾಡ್ಮಿಂಟನ್, ಕರಾಟೆ ಸ್ಪರ್ಧೆ
![‘ಶಿಕ್ಷಣದೊಂದಿಗೆ ಕ್ರೀಡೆಗೂ ಪ್ರೋತ್ಸಾಹ ಅಗತ್ಯ’ ‘ಶಿಕ್ಷಣದೊಂದಿಗೆ ಕ್ರೀಡೆಗೂ ಪ್ರೋತ್ಸಾಹ ಅಗತ್ಯ’](https://www.varthabharati.in/sites/default/files/images/articles/2016/09/2/SUD_2575.jpg)
ಮೂಡುಬಿದಿರೆ, ಸೆ.1: ಕ್ರೀಡೆ ಮತ್ತು ಶಿಕ್ಷಣ ಇಂದು ಉತ್ತಮ ಪ್ರಾಮುಖ್ಯತೆ ಹೊಂದಿದ್ದು, ಶಿಕ್ಷಣದ ಜೊತೆಗೆ ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ ಅಗತ್ಯ ಎಂದು ಉದ್ಯಮಿ ನಾರಾಯಣ ಪಿ.ಎಂ ಹೇಳಿದರು. ಇಲ್ಲಿನ ಶ್ರೀಮಹಾವೀರ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾಮಟ್ಟದ ಪುರುಷರ ಮತ್ತು ಮಹಿಳೆಯರ ವಿಭಾಗದ ಬಾಲ್ ಬ್ಯಾಡ್ಮಿಂಟನ್ ಮತ್ತು ಕರಾಟೆ 2016-17 ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ, ಮಾಜಿ ಸಚಿವ, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೌಷ್ಟಿಕಾಂಶದ ಕೊರತೆಯಿಂದಾಗಿ ಕ್ರೀಡಾಪಟುಗಳ ಸಾಧನೆಗೆ ಹಿನ್ನಡೆಯಾಗುತ್ತಿದೆ. ಕ್ರೀಡಾಪಟುಗಳಿಗೆ ಆರ್ಥಿಕಸಹಕಾರದೊಂದಿಗೆ ಇತರ ಸೌಲಭ್ಯಗಳನ್ನು ಸರಕಾರ ಒದಗಿಸಿದಾಗ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.ಅಲ್ಲದೆ ಈ ಬಾರಿ ಉಜಿರೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಕ್ರೀಡಾ ಇಲಾಖೆಯಿಂದ ಸಹಾಯಧನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಆರ್.ತಿಮ್ಮಯ್ಯ, ಶೋರಿನ್-ರಿಯೂ ಕರಾಟೆ ಅಸೋಸಿಯೇಶನ್ನ ಮುಖ್ಯ ಅಧೀಕ್ಷಕ ಮುಹಮ್ಮದ್ ನದೀಮ್, ಜಿಲ್ಲಾ ಪಪೂ ಶಿಕ್ಷಣ ಇಲಾಖೆಯ ಕ್ರೀಡಾ ಸಂಯೋಜಕ ಶಶಿಧರ್ ಮಾಣಿ, ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ದೀಕ್ಷಿತ್, ದೈ.ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಆಲ್ವೀನ್ ಮಿರಾಂದ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನಿಸ್ಟರ್, ಕ್ರೀಡಾ ಕಾರ್ಯದರ್ಶಿ ಅಖಿಲೇಶ್ ಉಪಸ್ಥಿರಿದ್ದರು. ಪ.ಪೂ ಕಾಲೇಜಿನ ಪ್ರಾಂಶುಪಾಲ ರಮೇಶ್ ಭಟ್ಟ ಸ್ವಾಗತಿಸಿದರು. ದೈ.ಶಿ. ಉಪನ್ಯಾಸಕ ರಾಜ್ ಪ್ರಸಾದ್ ವಂದಿಸಿದರು. ವಿದ್ಯಾರ್ಥಿನಿ ಗೌತಮಿ ಕಾರ್ಯಕ್ರಮ ನಿರೂಪಿಸಿದರು.