ಎಂ ಆರ್ ಪಿ ಎಲ್ ಗೆ ವಾರ್ಷಿಕ 1,148 ಕೋಟಿ ರೂ ನಿವ್ವಳ ಲಾಭ : ಡಿ.ಕೆ.ಸರಾಫ್
28ನೆ ವಾರ್ಷಿಕ ಸರ್ವ ಸದಸ್ಯರ ಸಭೆ

ಮಂಗಳೂರು,ಸೆ.3:ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ 2016-17ನೆ ಆರ್ಥಿಕ ವರ್ಷದ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ 720 ಕೋಟಿ ರೂ ನಿವ್ವಳ ಲಾಭ ಗಳಿಸಿದೆ.ಕಳೆದ ಆರ್ಥಿಕ ವರ್ಷದಲ್ಲಿ 1148 ಕೋಟಿ ರೂ ನಿವ್ವಳ ಲಾಭಗಳಿಕೆಯಾಗಿತ್ತು ಎಂದು ಒಎನ್ಜಿಸಿ ಎಂಆರ್ ಪಿಎಲ್ನ ಅಧ್ಯಕ್ಷ ಡಿ.ಕೆ.ಸರಾಫ್ ತಿಳಿಸಿದ್ದಾರೆ.
ಅವರು ಇಂದು ಎಂಆರ್ಪಿಎಲ್ನ ಕಚೇರಿಯ ಸಭಾಂಗಣದಲ್ಲಿ 28ನೆ ವಾರ್ಷಿಕ ಸರ್ವ ಸದಸ್ಯರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮತನಾಡಿದರು.
ಎಂಆರ್ಪಿಎಲ್ 2014-15ನೆ ಸಾಲಿನಲ್ಲಿ 1712 ಕೋಟಿ ರೂ ನಷ್ಟ ಅನುಭವಿಸಿದ ಬಳಿಕ,2015-16ರಲ್ಲಿ 1148 ಕೋಟಿ ಲಾಭ ಗಳಿಕೆಯೊಂದಿಗೆ ಲಾಭದ ಹಳಿಗೆ ಮರಳಿದ್ದು .ಹಾಲಿ 2016-17ನೆ ಸಾಲಿನ ಜೂನ್ ಅಂತ್ಯದಲ್ಲಿ 11,588 ಕೋಟಿ ರೂ ಆರ್ಥಿಕ ವ್ಯವಹಾರ ನಡೆಸಿ 720 ಕೋಟಿ ರೂ ಲಾಭಗಳಿಸಲು ಸಾಧ್ಯವಾಗಿದೆ.ಸಂಸ್ಥೆಯ ಇತಿಹಾಸದಲ್ಲಿಯೇ ಕಳೆದ ವರ್ಷದಲ್ಲಿ 797 ಸಾವಿರ ಮೆಟ್ರಿಕ್ಟನ್ ಎಲ್ಪಿಜಿ ದಾಖಲೆಯ ಉತ್ಫಾದನೆ ಯಾಗಿದೆ,ಅದೇ ರೀತಿ 6491 ಮೆಟ್ರಿಕ್ ಟನ್ ಡೀಸೆಲ್, 843 ಸಾವಿರ ಮೆಟ್ರಿಕ್ಟನ್ ಕೋಕ್ ಉತ್ಫಾದನೆ ದಾಖಲೆಯಾಗಿದೆ ಎಂದು ಡಿ.ಕೆ.ಸರಾಫ್ ತಿಳಿಸಿದ್ದಾರೆ. ಮುಂದಿನ ಎಂಟು ವರ್ಷದೊಳಗೆ 1000ಚಿಲ್ಲರೆ ಮಾರಾಟ ಮಳಿಗೆ:-ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮುಂದಿನ 8ರಿಂದ 9ವರ್ಷದೊಳಗೆ 500ರಿಂದ ಗರಿಷ್ಠ 1000ದವರೆಗೆ ಎಂಆರ್ಪಿಎಲ್ನ ಪೆಟ್ರೋಲಿಯಂ ಉತ್ಪನ್ನಗಳ ಚಿಲ್ಲರೆ ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು ಎಂದು ಸರಾಫ್ ತಿಳಿಸಿದರು.
ದ್ವಿಚಕ್ರ ವಾಹನಗಳಿಗೆ ಎಂಆರ್ಪಿಎಲ್ನಿಂದ ಗ್ಯಾಸ್:-ದ್ವಿಚಕ್ರ ವಾಹನಗಳಿಗೆ ಎಂಆರ್ಪಿಎಲ್ನಿಂದ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್(ಸಿಎನ್ಜಿ) ಪರಿಚಯಿಸುವ ಪ್ರಾಯೋಗಿಕ ಯೋಜನೆ ಜಾರಿಯಾಗಿದೆ.ಮುಂದಿನಹಂತದಲ್ಲಿ ಸಂಸ್ಥೆಯ ವತಿಯಿಂ 12 ವಿವಿಧ ಯೋಜನೆಗಳು ಜಾರಿಯಾಗಲಿವೆ ಈ ಯೋಜನೆಯಲ್ಲಿ ರಿಫೈನರಿಯ ವಿಸ್ತರಣೆಯ ಯೋಜನೆಯನ್ನು ಹೊಂದಲಾಗಿದೆ ಎಂದು ಸರಾಫ್ ತಿಳಿಸಿದ್ದಾರೆ. ಸ್ಕಿಲ್ ಇಂಡಿಯಾ ಯೋಜನೆಯಡಿ 19ಲಕ್ಷ ಮಂದಿಗೆ ತರಬೇತಿ ನೀಡಿಕೆ ಗುರಿ:-ಸ್ಕಿಲ್ ಇಂಡಿಯಾ ಯೋಜನೆಯಡಿ ಹೈಡ್ರೊಕಾರ್ಬನ್ ವಲಯದ ಕೌಶಲ ಮಂಡಳಿ ಸ್ಥಾಪನೆಗೆ ನಿರ್ಧರಿಸಲಾಗಿದ್ದು ಮುಂದಿನ ಹತ್ತು ವರ್ಷದಲ್ಲಿ 19ಲಕ್ಷ ಮಂದಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ.ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 5 ಕೋಟಿ ಎಲ್ಪಿಜಿ ಅನಿಲ ಸಂಪರ್ಕವನ್ನು ಬಡತನ ಕೆಳಗಿನ ರೇಖೆಯ ಕುಂಟುಂಬಗಳಿಗೆ ವಿತರಿಸುವ ಹಾಗೂ ಪ್ರತಿ ಕುಟುಂಬಕ್ಕೆ ಸಿಲಿಂಡರ್ ಖರೀದಿ ವೆಚ್ಚವಾಗಿ 1600 ರೂ ಒದಗಿಸಲಾಗುತ್ತದೆ.ಮುಂದಿನ ಮೂರು ವರ್ಷಗಳಲ್ಲಿ ಈ ಯೋಜನೆಯಡಿ ವೆಚ್ಚ ಮಾಡಲು 8000 ಕೋಟಿ ರೂ ಹಂಚಿಕೆ ಮಾಡಲಾಗಿದೆ ಎಂದು ಸರಾಫ್ ತಿಳಿಸಿದರು.
ವಾರ್ಷಿಕ ಸಭೆಯಲ್ಲಿ ರಸ್ತೆ ಅಭಿವೃದ್ಧಿ ಪಡಿಸಲು ಶೇರುದಾರರ ಸಲಹೆ:- ಇಂದು ನಡೆದ ಎಂಆರ್ಪಿಎಲ್ನ ಶೇರುದಾರರ ಸಭೆಯಲ್ಲಿ ಸುರತ್ಕಲ್ ನಿಂದ ಎಂಆರ್ಪಿಎಲ್ ವರೆಗಿನ ಸಾರಿಗೆ ವ್ಯವಸ್ಥೆ ಸರಿಪಡಿಸಬೇಕು,ನೀರಿನ ಸಮಸ್ಯೆ ಮರುಕಳಿಸಿದಾಗ ಪರ್ಯಾಯ ವ್ಯವಸ್ಥೆಗೆ ನೀರಿನ ಮರುಬಳಕೆ ಕೊಳಚೆ ನೀರಿನ ಶುದ್ದೀಕರಣ,ಮಳೆ ನೀರಿನ ಕೊಯ್ಲು ಮಾಡಬೇಕು,ರಸ್ತೆಯ ಅಭಿವೃದ್ಧಿ ಪಡಿಸಬೇಕು ಎನ್ನುವ ಸಲಹೆ ಬಂದಿದೆ ಈ ಬಗ್ಗೆ ಸ್ಥಳೀಯಾಡಳಿತ ಸಂಸ್ಥೆಯ ಸಹಕಾರದೊಂದಿಗೆ ಕಾರ್ಯನಿರ್ವಹಿಸುವುದು,ಮನಪಾ ವ್ಯಾಪ್ತಿಯ ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರು ಬಳಕೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಸರಾಫ್ ತಿಳಿಸಿದರು.
ಎಂಆರ್ಪಿಎಲ್ ಬಳಿ ಹೆಚ್ಚುವರಿ ಖಾಲಿ ಸ್ಥಳ ಇಲ್ಲ:-ಎಂಆರ್ ಪಿಎಲ್ ಬಳಿ 1012ಎಕ್ರೆ ಭೂಮಿ ಇದ್ದು ಈ ಪೈಕಿ 33ಶೇ ಹಸಿರೀಕರಣ ಹಾಗೂ 105 ಎಕ್ರೆ ಪುನರ್ವಸತಿಗೆ ಬಳಕೆಯಾಗಿದೆ ಉಳಿದಂತೆ ಸ್ಥಾವರಗಳ ಸುರಕ್ಷತೆಗಾಗಿ ಮೀಸಲಾದ ಜಾಗಇದೆ ಹೊರತು ಖಾಲಿ ಸ್ಥಳ ಇಲ್ಲ ಎಂದು ಎಂಆರ್ಪಿಎಲ್ನ ಆಡಳಿತ ನಿರ್ದೇಶಕ ಎಚ್.ಕುಮಾರ್ ತಿಳಿಸಿದ್ದಾರೆ.
2040ರಲ್ಲಿ ವಿಶ್ವದಲ್ಲಿ ಅಧಿಕ ತೈಲ ಇಂಧನ ಬಳಸುವ ದೇಶ:-ಮುಂದಿನ 2040ರಲ್ಲಿ ವಿಶ್ವದಲ್ಲಿ ಅಧಿಕ ತೈಲ ಇಂಧನ ಬಳಸುವ ದೇಶಗಳ ಪೈಕಿ ಭಾರತ ಅಗ್ರಸ್ಥಾನಕ್ಕೇರಲಿದೆ.ಭಾರತದ ಬೇಡಿಕೆ 10ದಶಲಕ್ಷ ಬ್ಯಾರಲ್ಗೆ ಏರಿಕೆಯಾಗಲಿದೆ.ಈಗಿನ ಬೇಡಿಕೆಯ ಎರಡೂವರೆ ಪಟ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ .2019ರ ವೇಳೆಗೆ ಬಿ.ಎಸ್.6 ದರ್ಜೆಯ ಪೆ ಟ್ರೋಲ್,ಡಿಸೆಲ್ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಸರಾಫ್ ತಿಳಿಸಿದ್ದಾರೆ.
ನೀರಿನ ಸಮಸ್ಯೆ :ಕಳೆದ ಬೇಸಗೆಯಲ್ಲಿ ಮನಪಾ ವ್ಯಾಪ್ತಿಯಲ್ಲಿ ಉಂಟಾದ ನೀರಿನ ಕೊರತೆಯ ಸಂದರ್ಭದಲ್ಲಿ 30ದಿನಗಳ ಕಾಲ ಉತ್ಫಾದನಾ ಚಟುವಟಿಕೆ ಸ್ಥಗಿತಗೊಂಡಿತ್ತು ಈ ಸಂದರ್ಭದಲ್ಲಿ ನಿರ್ವಹಣಾ ಕೆಲಸವನ್ನು ಕೈ ಗೊಳ್ಳಲಾಯಿತು ಎಂದು ಸರಾಫ್ ತಿಳಿಸಿದರು.
ಸುದ್ದಿಗೊಷ್ಠಿಯಲ್ಲಿ ಒಎನ್ಜಿಸಿ ಎಂಆರ್ಪಿಎಲ್ ಆಡಳಿತ ನಿರ್ದೇಶಕ ಎಚ್.ಕುಮಾರ್, ಹಣಕಾಸು ವಿಭಾಗದ ನಿರ್ದೇಶಕ ಎ.ಕೆ.ಸಾಹು,ರಿಫೈನರಿ ನಿರ್ದೇಶಕ ಎಂ.ವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು.







