ಬಾರೋ ಕಂದ ಇಲ್ಲಿ. . . ಎಂದೇ ಕರೆದು ಕಲಿಸಿದ ನನ್ನ ಮೇಷ್ಟ್ರು ಮಾರುತಿ
ಶಿಕ್ಷಕರ ದಿನಾಚರಣೆ ವಿಶೇಷ

ಅದು ಆರನೆ ತರಗತಿಯಲ್ಲಿನ ಕೊನೆಯ ಎರಡನೆ ಬೆಂಚು. ನಮ್ ಮೇಷ್ಟ್ರು ಮಾರುತಿ ಅವರು ಬೇಕೆಂತಲೇ ಎತ್ತರ ಇರುವ ಹುಡುಗರನ್ನು ಕೊನೆಯ ಬೆಂಚಿಗೆ ಕೂರಲು ಹೇಳುತ್ತಿದ್ದರು. ಅವರ ಅಣತಿಯಂತೆ ನಾವು ಆ ಜಾಗವನ್ನು ಉತ್ಸಾಹದಿಂದ ಭರ್ತಿ ಮಾಡಿದ್ದೆವು. ಆ ಬೆಂಚಿನಲ್ಲಿ ನಮ್ಮ ನಿಕ್ನೇಮ್ ರಾರಾಜಿಸಿದ್ದವು. ಇದು ನಮ್ಮ ಅನುಕೂಲಕರ, ಗದ್ದಲ ಹಾಕಲು ಪ್ರಶಸ್ತವಾದ ಸ್ಥಳವಾಗಿತ್ತು. ಇದಕ್ಕೂ ಮೊದಲು ನಾವು ಮುಂದೆ ಕುಳಿತಾಗ ಹಿಂದಿನ ಗೆಳೆಯರಿಗೆ ಬೋರ್ಡಿನಲ್ಲಿ ಬರೆದಿರುವ ಬರಹಗಳೇನೂ ಕಾಣಿಸುತ್ತಿರಲಿಲ್ಲ. ಇದೇ ಕಾರಣಕ್ಕೆ ನಮ್ಮನ್ನು ಹಿಂದಿನ ಬೆಂಚಿಗೆ ಬೀಳ್ಕೊಟ್ಟು ಗೌರವದಿಂದ ವರ್ಗಾಯಿಸಿದ್ದರು. ಗುರುಗಳು ಬೋರ್ಡಿನತ್ತ ಮುಖ ಮಾಡಿ ಲೆಕ್ಕಗಳನ್ನು ಬರೆಯುತ್ತಿದ್ದರೆ ಇತ್ತ ಹಿಂದಿನಿಂದ ಕೀಟಲೆಗಳನ್ನು ಮಾಡುತ್ತಿದ್ದೆವು.
ಪ್ರತಿದಿನ ಒಂದೊಂದು ಪುಟ ಕನ್ನಡ, ಇಂಗ್ಲಿಷ್, ಹಿಂದಿಯ ಶುದ್ಧ ಬರಹ ಬರೆದು ತನ್ನಿ ಎಂದು ಹೇಳುತ್ತಿದ್ದರು. ಬರೆಯಲು ಬೇಜಾರು ಎನಿಸಿದಾಗ ಮೊದಲೇ ನಾಲ್ಕೈದು ದಿನಗಳ ಹೋಮ್ವರ್ಕ್ನ್ನು ಬರೆದು ಇಡುತ್ತಿದ್ದೆವು. ಇನ್ನೂ ಕೆಲವರು ತೋರಿಸಿದ ಶುದ್ಧ ಬರಹವನ್ನೇ ವಾಪಸ್ ತೋರಿಸುತ್ತಿದ್ದರು. ಅದು ಹೇಗೆಂದರೆ ಅವರು ಪಾಸ್ ಹಾಕಿದ ರೆಡ್ ಇಂಕ್ ಪೆನ್ನಿನ ಗೆರೆಯನ್ನು ಅಳಿಸಿ ಹಾಕಿ ತೋರಿಸುತ್ತಿದ್ದೆವು. ಆದರೆ ಈ ಮಹಾನ್ ಘನಂಧಾರಿ ಕಾರ್ಯ ಬಹಳ ದಿನ ಉಳಿಯಲಿಲ್ಲ. ಎಲ್ಲರೂ ಅದೇ ಕೆಲಸವನ್ನು ಮಾಡತೊಡಗಿದೆವು. ಒಂದು ದಿನ ಮೇಷ್ಟ್ರಿಗೆ ಗೊತ್ತಾದಾಗ ಮತ್ತೆ ಒದೆ ತಿಂದೆವು. ಹೊಸ ಮೇಷ್ಟ್ರು ಬಂದು ತಿಂಗಳೂ ಸರಿದಿರಲಿಲ್ಲ. ನಮ್ಮ ಇಬ್ಬಂದಿತನವನ್ನು ಕಂಡು ಕಾಣದ ಗುರುವರ್ಯರ ಹೊಡೆತಕ್ಕೆ ತಲ್ಲಣಿಸಿದ್ದರು ಎಲ್ಲ ಮಿತ್ರರು.
ನನಗಿನ್ನೂ ನೆನಪಿದೆ. ಅವತ್ತು ಎರಡನೆ ಶನಿವಾರ. ಬ್ಯಾಂಕ್ ರಜೆ ಇತ್ತು. ಶಾಲೆ ಇನ್ನೇನು ಬಿಡುತ್ತಿದ್ದಾಗ ಬಂದೇನವಾಜ್, ಬಾರೋ ಕಂದ ಇಲ್ಲಿಎಂದು ಕರೆದು, ನಾಳೆ ನಿಮ್ಮ ತೋಟದ ಸನಿ ಹದಲ್ಲೇ ಇರುವ ಯಕ್ಕಿ ಗಿಡದ(ಒಂದು ಜಾತಿಯ ಸಸಿ) ಎಂಟ್ಹತ್ತು ಬರ್ಲು(ಬೆತ್ತ)ಗಳನ್ನು ಮುರಿದುಕೊಂಡು ಸೋಮವಾರ ಶಾಲೆಗೆ ಬರುವಾಗ ತಗೊಂಡು ಬಾ ಅಂದರು. ಅದರ ನಿಜ ಮರ್ಮವನ್ನು ಅರಿಯದ ನಾನು, ಅವರು ಹೇಳಿದ್ದಕ್ಕಿಂತ ಎರಡು ಹೆಚ್ಚಿಗೇನೇ ಮುರಿದುಕೊಂಡು ಹೋಗಿದ್ದೆ. ನನ್ನಿಂದ ಬರ್ಲುಗಳನ್ನು ಎಗೆದುಕೊಂಡ ಮೇಷ್ಟ್ರು, ಒಬ್ಬೊಬ್ಬರನ್ನೇ ಎಬ್ಬಿಸುತ್ತ, ಯಾರ್ಯಾರು ಹೋಮ್ವರ್ಕ್ ಮಾಡಿಕೊಂಡು ಬಾ ರದವರು ಎದ್ದೇಳಿಅಂದರು. ಆಗ ಬರಸಿಡಿಲು ಎರಗಿದಂತೆ ಬಂದಿತ್ತು ನನ್ನ ಎಲ್ಲ ಗೆಳೆಯರಿಗೆ ಆಪತ್ತು. ಇರುವ 24 ಹುಡುಗರು, 11 ಹುಡುಗಿಯರು ಸೇರಿದಂತೆ ಯಾರೂ ಹೋಮ್ವರ್ಕ್ ಮಾಡಿರಲಿಲ್ಲ. ಎಲ್ಲರೂ ಗೆರೆಗಳನ್ನು ಅಳಿಸಿ ಹಾಕುವ ಯೋಜನೆಯನ್ನೇ ಅನುಷ್ಠಾನಗೊಳಿಸುತ್ತ ಹೋಗುತ್ತಿದ್ದರು. ಆಗ ಅವರ ಮನಸ್ಸು ಅಶಾಂತಿಯ ಕಡಲಂತಾಗಿತ್ತು. ಮಾರಿ ಹಬ್ಬ ಆಗ ಶುರುವಾಯಿತು ನೋಡಿ. ಹಸಿ ಯಕ್ಕಿ ಬರ್ಲಿ(ಒಂದು ಜಾತಿಯ ಸಸಿಯ ಬೆತ್ತ)ನ ಹೊಡೆತಕ್ಕೆ ಮೈ, ಕೈ ಮೇಲೆ ಬಾಸುಂಡೆಗಳನ್ನು ಫ್ರೀಯಾಗಿ ಕೊಡತೊಡಗಿದರು. ಎಲ್ಲರೂ ಕೈಯನ್ನು ಊದಿಕೊಳ್ಳುವುದು, ಮೈ ಸವರಿಕೊಳ್ಳುವುದು, ಹೀಗೆ ನಡೆದಿತ್ತು. ಹುಡುಗುತನದ ಉಡಾಫೆ ಜೀವನ ನಮ್ಮದಾಗಿತ್ತು.
ಕೆಲವು ದಿನಗಳ ನಂತರ ಶಾಲೆಯಲ್ಲಿ ಯಾವುದೋ ಕಾರ್ಯಕ್ರಮವಿದ್ದಂತಿತ್ತು. ಕಟ್ಟಿಗೆಯ ಕುರ್ಚಿಯ ಮೇಲೆ ಅವರು ಕುಳಿತುಕೊಳ್ಳುವ ಹೊತ್ತಿನಲ್ಲೇ ನನ್ ದೋಸ್ತ್ ಹನುಮಂತ, ಮುಳ್ಳಿನ ಸಣ್ಣ ಕೊಂಪೆಯನ್ನು ಇಟ್ಟಿದ್ದ. ಸಿಟ್ಟಾದ ಮಾಸ್ತರರು ಕೋಲನ್ನು ಹಿಡಿದು ಮುಂದೆ ನೀ ಹೋದಾಗ ಹಿಂದೆ ನಾ ಬರುವೆಎಂದು ಹಾಡುತ್ತಾ ಮಾಸ್ತರರು ಬೆನ್ನತ್ತಿದ್ದರು. ಭರಮಪ್ಪನ ಗುಡಿಯವರೆಗೆ ಅವನೇನೂ ಇವರ ಕೈಗೆ ಸಿಗಲಿಲ್ಲ. ಅವರ ಹಿಂದೆ ನಾವು ಹೀಗೆ ಸಾಲು ಸರದಿ ಮುಂದುವರೆದಿತ್ತು. ಮತ್ತೊಮ್ಮೆ ಅವರ ಬ್ಯಾಗಿನಲ್ಲಿ ಕರಿ ಚೇಳನ್ನು ಬಿಟ್ಟು ಬೆಕ್ಕಸ ಬೆರಗಾಗಿ ನೋಡುತ್ತಿದ್ದೆವು. ಮನಸ್ಸಿನಲ್ಲಿ ಗೊಂದಲಗಳ ಮೆರವಣಿಗೆ ಹೊರಟಿತ್ತು. ಮಧ್ಯಾಹ್ನದ ಊಟದ ಸಮಯದಲ್ಲಿ ಬ್ಯಾಗಿನಲ್ಲಿಯ ಬುತ್ತಿಯನ್ನು ಎತ್ತಿಕೊಳ್ಳುವಾಗ ಕರಿ ಚೇಳು ತನ್ನ ಕೆಲಸವನ್ನು ಬಹು ಕಟ್ಟುನಿಟ್ಟಾಗಿ ನೆರವೇರಿಸಿತ್ತು. ಆಗ ನನ್ನ ಮನಸ್ಸು ಒಂಟಿ ಮೀನು ದೋಣಿಯೊಂದು ಅಲೆಗಳ ಮೇಲೆ ಹೋಯ್ದಾಡುತ್ತಿರುವ ಹಾಗಿತ್ತು. ಅಂದು ಮಾತ್ರ ನಾನೇ ಯಕ್ಕಿ ಬರ್ಲಿನ ಹೊಡೆತ ತಿಂದಿದ್ದ ನೆನಪುಗಳು ಕಡಲ ಕಿನಾರೆಗೆ ಅಪ್ಪಳಿಸುತ್ತಾ ಇನ್ನೂ ಭೋರ್ಗರೆಯುವಂತಿವೆ. ನಾನೇ ಚೇಳನ್ನು ಬಿಟ್ಟಿದ್ದು ಅಂತ, ಗುರುಗಳಿಗೆ ನಮ್ಮಲ್ಯಾರೋ ಪಾಠ ಒಪ್ಪಿಸಿದ್ದರು. ಮತ್ತೊಮ್ಮೆ ಅವರ ಎಂ.80 ಬೈಕಿನ ಹಿಂದಿನ ಚಕ್ರದ ಹವಾ(ಗಾಳಿ) ಬಿಟ್ಟಿದ್ದಂತೂ ನಮ್ಮೆಲ್ಲರಿಗೆ ನಗೆಯ ಹಬ್ಬವನ್ನೇ ತರಿಸಿತ್ತು. ಪಾಪ ಮೇಷ್ಟ್ರು.
ಸ್ನಾತಕೋತ್ತರ ಪದವಿ ಪರೀಕ್ಷೆ ಮುಗಿಸಿಕೊಂಡು ಹಳ್ಳಿಗೆ ತೆರಳಿದಾಗ ಆ ನನ್ನ ನೆಚ್ಚಿನ ಮೇಷ್ಟ್ರು ಎದುರಾದರು. ಉನ್ನತ ಶಿಕ್ಷಣಕ್ಕೆ ಬರಲು ಆ ಮಾರುತಿ ಮಾಸ್ತರರೇ ಕಾರಣೀಕರ್ತರು. ಅವರಿಗೆ ನಾವು ಕಷ್ಟ ನೀಡಿದರೂ ನಮಗೆ ಲೇಸನ್ನೇ ಬಯಸಿದ ಗುರುಗಳ ಮನಸ್ಸು ತುಂಬ ವಿಶಾಲವಾದುದು. ಧಾರವಾಡದಲ್ಲಿ ಎಂ.ಎ. ಕಲಿತು, ಈಗ ಮಂಗಳೂರಿನಲ್ಲಿ ಜಾಬ್ ಮಾಡುತ್ತಿದ್ದೇನೆ ಎಂದಾಗ ಅವರು ತುಂಬ ಖುಷಿ ಪಟ್ಟರು. ಅವರೀಗ ನಿವೃತ್ತರಾಗಿ ಮನೆಯಲ್ಲಿರುವರು. ಸಂಜೆಯ ಅವರ ಮೌನ, ಆ ತಣ್ಣಗಿನ ಗಾಳಿಯನ್ನು ಮತ್ತಷ್ಟು ತಂಪಾಗಿಸಿತ್ತು. ಶಿಕ್ಷಕರ ದಿನದಂದು ಅವರ ನಾನ್ಸ್ಟಾಪ್ ಮಾತುಗಳ ನೆನಪು ಧಾವಿಸಿ ಬರುತ್ತಿದೆ. Love you sir, long leave with healthy atmosphere, I ever remain greatful to you sir.







