ಬಡ ಮಕ್ಕಳ ಬದುಕು ರೂಪಿಸಲು ಜೀವನ ಸವೆಸುತ್ತಿರುವ ‘ಅನಾಮಧೇಯ’
ಶಿಕ್ಷಕರ ದಿನಾಚರಣೆ ವಿಶೇಷ

ನಮ್ಮ ಜಾರ್ಜ್ ರೀತಿಯೇ ಇರುವ ಮತ್ತೊಬ್ಬ ವಿಶೇಷ ಕ್ಲಾಸ್ ಟೀಚರ್ ಬಗ್ಗೆ ನಾನಿಲ್ಲಿ ಹೇಳಬೇಕು. ಅವರ ಹೆಸರನ್ನು ನಾನು ಬಳಸುವಂತಿಲ್ಲ. ನನ್ನ ಹೆಸರು ಎಲ್ಲೂ ಬರಬಾರದೆಂದು ಮೊದಲೇ ತಾಕೀತು ಮಾಡಿದ್ದಾರೆ. ಗೆಳೆಯರಾದ ಸಿರಾಜ್ ಅಹಮದ್ ಇವರ ಬಗ್ಗೆ ಒಮ್ಮೆ ಮಾಹಿತಿ ಕೊಟ್ಟರು. ನಾನವರನ್ನು ಹುಡುಕಿಕೊಂಡು ಹೋದೆ. ಅವರೋ ಸಂಕೋಚದ ಮುದ್ದೆ. ತಮ್ಮ ಸ್ವಂತ ವಿಷಯ ಹೇಳಿಕೊಳ್ಳಲು ಸುತಾರಾಂ ಒಪ್ಪಲಿಲ್ಲ. ನಾನು, ನನ್ನ ಶಿಷ್ಯ ರವಿ, ಹಟ ಹಿಡಿದು ಕೂತು ಬಿಟ್ಟೆವು. ಮಕ್ಕಳ ಓದಿಗಾಗಿ ಬದುಕನ್ನು ಸವೆಸುತ್ತಿರುವ ತಮ್ಮಂಥವರ ಬಗ್ಗೆ ತಿಳಿದು ಕೊಳ್ಳುವ ಹಂಬಲವಿದೆ ಎಂದು ತಿಳಿಸಿದೆವು. ಆಗ ಒಂದಿಷ್ಟು ಮನ ಹಗುರಾಗಿ ಮಾತಾಡಿದರು.
“ನಾನು ಕ್ಲರ್ಕ್ ಆಗಿ 36 ವರ್ಷ ಕೆಲ್ಸ ಮಾಡಿ ರಿಟೈರ್ಡ್ ಆಗಿದ್ದೀನಿ. ಈಗ ನನಗೆ 76ವರ್ಷ. ನಂಗೆ ಎರಡು ಗಂಡು ಮಕ್ಕಳು. ಎರಡನೇ ಮಗ ಒಂದು ದಿನ ಮನೆಯಲ್ಲಿದ್ದಾಗಲೇ, ನಮ್ಮ ಕಣ್ಣ ಎದುರೇ ಅಚಾನಕ್ಕಾಗಿ ಕುಸಿದು ಬಿದ್ದ. ಅವನಿಗೆ ಈ ಮೊದ್ಲು ಯಾವ ಕಾಯಿಲೆಗಳೂ ಇರಲಿಲ್ಲ. ಇಪ್ಪತ್ತೇಳು ವರ್ಷದ ಅವನು ಗಟ್ಟಿ ಮುಟ್ಟಾಗಿದ್ದ. ಡಾಕ್ಟ್ರು ನೋಡಿ ಹೃದಯಾಘಾತ ಆಗಿದೆ ಅಂದ್ರು. ಬೆಳೆದು ನಿಂತ ಮಗ ಬಾಳೆ ಕಂಬದಂತೆ ಬಿದ್ದವನು ಮತ್ತೆ ಮೇಲೆ ಏಳಲಿಲ್ಲ. ಈ ಘಟನೆ ನಮಗೆಲ್ಲಾ ಆಘಾತ ತಂದಿತು. ಅವನ ಮಣ್ಣು ಮಾಡಿ, ಆ ದುಃಖವ ಇನ್ನೂ ಸುಧಾರಿಸಿಕೊಳ್ಳುವುದರಲ್ಲಿದ್ದೆವು. ಅಷ್ಟ ರಲ್ಲೇ ನಮ್ಮ ಮೇಲೆ ಮತ್ತೊಂದು ಸಿಡಿಲು ಬಡೀತು ನೋಡಿ ಆಗ ಮಾತ್ರ ಸುಧಾರಿಸಿಕೊಳ್ಳೋಕೆ ಆಗಲಿಲ್ಲ.
ನನ್ನ ಮತ್ತೊಬ್ಬ ಮಗ ಬಿ.ಇ. ಮೆಕಾನಿಕ್ಸ್ ನಲ್ಲಿ ಗೋಲ್ಡ್ ಮೆಡಲ್ ತಗೊಂಡಿದ್ದ. ಓದು ಮುಗಿಸಿದ ಮೇಲೆ ನಮ್ಮ ಜೊತೆಗೇ ಬಂದಿದ್ದ. ಅವನಿಗೆ ಹುಡುಗಿ ಹುಡುಕೋಕೆ ಶುರು ಮಾಡಿದ್ವಿ. ಮಗ ಪ್ರಶಾಂತ ಗೆಳೆಯರ ಜೊತೆ ಶಟಲ್ ಕೋಕ್ ಆಡೋದಕ್ಕೆ ದಿನಾ ಬೆಳಗ್ಗೆ ಹೋಗುತ್ತಿದ್ದ. ಆಟ ಆಡುತ್ತಾ ಇದ್ದೋನು, ಜಾರಿ ಕೆಳಕ್ಕೆ ಬಿದ್ದನಂತೆ. ಅಷ್ಟೇ ನೋಡಿ ಅವನೂ ಮತ್ತೆ ಕಣ್ಣು ಬಿಡಲಿಲ್ಲ ಅವನಿಗಾಗಿದ್ದು, ಹಾರ್ಟ್ ಆಟ್ಯಾಕ್ ಅಂತ ಗೊತ್ತಾದಾಗ ನಮ್ಮ ಜೀವವೇ ಹೋದಂ ಗಾಯ್ತು. ಎಲ್ಲಾ ಸಿನೆಮಾದಲ್ಲಿ ನಡೆದಂಗೆ ನಡೆದು ಹೋಯ್ತು. ಕೇಳೊ ನಿಮ್ಮಂಥವರಿಗೆ ಇದೆಲ್ಲಾ ಆಶ್ಚರ್ಯ ಅನ್ನಿಸಬಹುದು. ಸುಳ್ಳು ಅಂತನ್ನಿಸ ಬಹುದು. ಒಟ್ನಲ್ಲಿ ದೇವ್ರು ನನ್ನೆರಡು ಮಕ್ಕಳ ಹೃದಯಾನು ಒಂದೇ ಏಟಿಗೆ ಬಡಿದು ನಿಲ್ಲಿಸಿಬಿಟ್ಟ.
ನಮ್ಮ ಗ್ರಹಚಾರ ಹಿಂಗಾಗಿ ಬಿಡ್ತಲ್ಲ ಅಂತ ಹಣೆಹಣೆ ಚಚ್ಕೊಂಡ್ವಿ. ಹೆತ್ತ ಎರಡೂ ಕರುಳ ಕುಡಿಗಳು ಕೈ ತಪ್ಪಿ ಹೋದ ಮೇಲೆ ಮನೆಯಲ್ಲಿ ಉಳಿದವರು ನಾನು ನನ್ನ ಹೆಂಡ್ತಿ ಇಬ್ರೇನೆ ನೋಡಿ ಸಾರ್. ನಾವಿಬ್ರು ಸೇರಿ ನಮ್ಮ ಜೀವನಾನ ಎಲ್ಲಿಂದ ಶುರು ಮಾಡಿದ್ದೆವೋ, ಅಲ್ಲಿಗೆ ಮತ್ತೆ ಜೀವನದ ಚಕ್ರ ವಾಪಸು ಬಂದು ನಿಂತ್ ಬಿಡ್ತು. ‘ಪುತ್ರ ಶೋಕಂ ನಿರಂತರಂ’ ಅಂತಾರಲ್ಲ ಆ ಮಾತು ನಿಜ ಸಾರ್. ಆ ನೋವು ಅನುಭವಿಸಿದವರಿಗೇ ತಿಳಿವಾಗೋದು. ಬೆಳೆದ ಮಕ್ಕಳ ಮಣ್ಣಿ ಗಾಕೋವಂಥ ಕಷ್ಟದ ಸಂದರ್ಭ ಯಾವ ಅಪ್ಪ ಅಮ್ಮನಿಗೂ ಬರಬಾರದು ಸಾರ್. ನೋಡಿ ಪ್ರಕೃತಿ ವಿಚಿತ್ರಾನ! ಸಾಯಬೇಕಾದ ನಾವು ಉಳ್ಕಂಡ್ವಿ. ಬಾಳಿ ಬದುಕಬೇಕಾದ ಆ ಜೀವಗಳು ನೆಲ ಸೇರಿ ಬಿಟ್ವು. ಯಾವ ಜನುಮದಲ್ಲಿ ಯಾರಿಗೆ ಅನ್ಯಾಯ ಮಾಡಿದ್ವೋ, ಆ ದೇವ್ರ ಸರಿಯಾಗಿ ಸೇಡು ತೀರಿಸ್ಕೊಂಡ್ ಬಿಟ್ಟ.
ಆಗಿದ್ದಾಗೋಯ್ತು ಬಿಡೂಂತ ಕಣ್ಣೀರಾಕ್ತ, ಪರಸ್ಪರ ಸಮಾಧಾನ ಹೇಳ್ಕೋತ ಕಾಲ ನೂಕ್ತ ಇದ್ವಿ. ಮನೇಲಿ ನಾನು ಸುಮ್ಮನಿರಬಾರದು. ಮಕ್ಕಳ ಸಾವು ನೆನಪಾಗಿ ಕಾಟ ಕೊಡುತ್ತೇಂತ ಅದನ್ನೆಲ್ಲಾ ಮರೆಯೋಕೆ ನಮ್ಮ ಸುತ್ತಮುತ್ತ ಓದುವ ಮಕ್ಕಳನ್ನು ಮನೆಗೆ ಕರೆಸಿಕೊಂಡು ಉಚಿತವಾಗಿ ಟ್ಯೂಶನ್ ಹೇಳ್ಕೊಡೋಕೆ ಶುರು ಮಾಡ್ದೆ. ಬಡಮಕ್ಕಳಿಗೆ ಫೀಜು, ಬಟ್ಟೆ, ಪುಸ್ತಕ, ಕೈಚೀಲ ಸಿಗೋಥರ ವ್ಯವಸ್ಥೆ ಮಾಡ್ದೆ. ಬೇರೆ ಮಕ್ಕಳನ್ನು ಪ್ರೀತಿಸುತ್ತಾ, ನಮ್ಮ ಮಕ್ಕಳ ಸಾವನ್ನು ಹಿಂಗಾದ್ರೂ ಮರೀಬಹುದೂಂತ ಏನೇನೋ ಮಾಡ್ತಾ ಇದ್ದೆ. ನನ್ನ ಗ್ರಹಚಾರ ನೆಟ್ಟಗಿರಲಿಲ್ಲ. ನನ್ನ ಹೆಂಡ್ತಿಗೆ ಪಾರ್ಕಿನ್ಸನ್ ಅನ್ನೊ ವಿಚಿತ್ರ ಕಾಯಿಲೆ ಗಂಟ್ಹಾಕಿಕೊಳ್ತು. ನನ್ನಾಕೆ ಕಾಲು ಕಳ್ಕೊಂಡು ನೆಲ ಹಿಡಿದು ಮಗುವಿನಂತಾದಳು. ಅವಳನ್ನು ಏನಾದ್ರು ಮಾಡಿ ಉಳಿಸಿಕೊಳ್ಳಬೇ ಕೂಂತ ಮೂರು ತಿಂಗಳು ಒದ್ದಾಡಿದೆ. ಎಲ್ಲಾ ಥರದ ಔಷಧ ಮಾಡಿಸಿದೆ. ಮೂರು ತಿಂಗಳ ನಂತರ ನನ್ನ ಬಿಟ್ಟು ಹೊರಟು ಹೋದಳು. ಹಿಂಗೆ ಒಬ್ಬೊಬ್ಬರಾಗಿ ನನ್ನ ಬಿಟ್ಟು ಹೊರಟೋದ್ರು.
ಆಕೆ ಫೋಟಾನ ದಿನಾ ಪೂಜೆ ಮಾಡ್ತೀನಿ. ಜೀವನದಲ್ಲಿ ಬರೋದೆಲ್ಲಾ ಒಪ್ಕೊಬೇಕು ಅನ್ನೋ ಕಹಿ ಸತ್ಯಾನ ಅರ್ಥಮಾಡ್ಕೊಂಡಿದ್ದೀನಿ. ಇನ್ಮುಂದೆ ಜೀವ ಇರೋ ತನಕ ನಾಲ್ಕು ಮಕ್ಕಳಿಗೆ ಕೈಲಾದ ಉಪಕಾರ ಮಾಡಬೇಕು. ಆಗಿ ಹೋಗಿದ್ದೆಲ್ಲಾ ನೆನೆಸಿಕೊಂಡು ಕೊರಗೋದಕ್ಕಿಂತ, ಮುಂದಿನ ಜೀವನ ಎದುರಿಸೋ ಛಲ ಬೆಳಸಿಕೊಳ್ಳಬೇಕು ಅಂತ ಬದುಕ್ತಾ ಇದ್ದೀನಿ ಸಾರ್. ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಓದುವ ಬಡ ಮಕ್ಕಳ ಗುರ್ತಿಸಿ ಸ್ಕಾಲರ್ಶಿಪ್ ಕೊಡ್ತಾ ಇದ್ದೀನಿ. ನಮ್ಮ ಬಡಾವಣೆ ಜನರಿಗೆ ಉಚಿತ ಲೈಬ್ರರಿ ಮಾಡಿದ್ದೀನಿ. ಎಕ್ಸಾಮಿಗೆ ತಯಾರಾಗೋ ಮಕ್ಕಳು ಇಲ್ಲಿ ಬಂದು ಉಚಿತವಾಗಿ ಓದಬಹುದು. ಅವರಿ ಗಾಗಿ ನೋಟ್ಸ್, ಜನರಲ್ ನಾಲೆಡ್ಜ್ ಪಾಯಿಂಟ್ಸ್ ಎಲ್ಲಾ ತಯಾರಿ ಮಾಡಿ ಕೊಡ್ತೀನಿ. ಮನೆ ಮನೆಗೂ ನಾನೇ ಪುಸ್ತಕ ಹೊತ್ಕೊಂಡೋಗಿ ಮಕ್ಕಳಿಗೆ, ದೊಡ್ಡೋರಿಗೆ, ಕೊಟ್ಟು ಬರ್ತೀನಿ. ಓದಕ್ಕಾಗೊಲ್ಲ ಅನ್ನೋರಿಗೆ ಆ ಪುಸತಿದಲ್ಲಿರೋ ಒಳ್ಳೆ ಅಂಶಗಳನ್ನು ನಾನೇ ಹೆಕ್ಕಿ ಕಥೆ ಥರ ಹೇಳಿತೀನಿ. ಈಗ ಜನ ನಮ್ಮತ್ರ ಟೈಮಿಲ್ಲ ಸ್ವಾಮಿ ಅಂತಾರೆ. ಆದ್ರೂ ನಾನು ಬಿಡಲ್ಲ. ಇತ್ತೀಚಿಗೆ ಕನ್ನಡ ಪುಸ್ತಕ ಓದೋರೆ ಕಮ್ಮಿಯಾಗಿರೋದು ಬ್ಯಾಸರದ ಸಂಗತಿ ಸಾರ್.
ನಾವೆಲ್ಲಾ ಓದೋ ಕಾಲದಲ್ಲಿ ಪಠ್ಯ ಪುಸ್ತಕಗಳೇ ಸರಿಯಾಗಿ ಸಿಕ್ತಿರಲಿಲ್ಲ. ಎಷ್ಟೋ ಸಲ ಇನ್ನೊಬ್ಬರ ಹತ್ರ ಪುಸ್ತಕ ಇಸ್ಕೊಂಡು ಬರೆದಿಟ್ಟುಕೊಂಡು ಓದಿದ್ದೀನಿ. ಆದ್ರೆ ಈಗಿನ ಮಕ್ಕಳು ಇಷ್ಟು ಸುಲಭದಲ್ಲಿ ಪುಸ್ತಕ ಸಿಕ್ರೂ ಓದಲ್ಲ ಅಂತಾವಲ್ಲ ನೋಡಿ.
ಬೆಳಗ್ಗೆ ಎದ್ದು ಬೀದಿಯ ಎಲ್ಲಾ ಮಕ್ಕಳ ಕೈಹಿಡಿದು ಶಾಲೆಗೆ ಹೋಗಿ ಬಿಟ್ಟು ಬರ್ತೀನಿ. ನಾನು ಅಜ್ಜ ಆಗಿದ್ರೆ, ಮೊಮ್ಮಕ್ಕಳು ಇರ್ತಾ ಇರಲಿಲ್ವ. ಅವೇ ಇವೂಂತ ಮನಸ್ಸಿಲ್ಲಿ ಅಂದ್ಕೋತಿನಿ. ಪ್ರೀತಿಸೋಕೆ ರಕ್ತ ಸಂಬಂಧಿಗಳೇ ಆಗಿರಬೇಕು ಅಂತ ನಿಯಮ ಏನು ಇಲ್ವಲ್ಲ ಸಾರ್.







