ಸ್ವರ್ಣದಂತಹ ವ್ಯಕ್ತಿತ್ವದ ಸ್ವರ್ಣಲತಾ ಟೀಚರ್
ಶಿಕ್ಷಕರ ದಿನಾಚರಣೆ ವಿಶೇಷ
ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಬೇಕಾದರೆ ಶಿಕ್ಷಕರೆನಿಸಿಕೊಂಡವರ ಪಾತ್ರ ಬಲುದೊಡ್ಡದು .ಪ್ರತಿ ವಿಧ್ಯಾರ್ಥಿಯ ಉತ್ತಮ ಬೆಳವಣಿಗೆಯ ಹಿಂದೆ ಒಬ್ಬರು ಗುರು ಇದ್ದೇ ಇರುತ್ತಾರೆ .ನನ್ನಲ್ಲೂ ಹಾಗೇನೆ ,ಸಮಾಜದ ಆಗು-ಹೋಗುಗಳ ಬಗ್ಗೆ ಕಲಿಯಲು ಪ್ರೈಮರಿಯಲ್ಲಿ ಇಟ್ಟ ಮೊದಲ ಹೆಜ್ಜೆಯಿಂದ ಹಿಡಿದು , ಭವಿಷ್ಯದತ್ತ ದೃಷ್ಟಿ ನೆಟ್ಟು ಕಲಿಯುತ್ತಿರುವ ಈ ಕಾಲೇಜು ದಿನಗಳವರೆಗೂ ಹಲವಾರು ಉತ್ತಮ ಶಿಕ್ಷಕ/ಕಿಯರನ್ನು ಕಂಡಿದ್ದೇನೆ . ವಿಶೇಷವಾಗಿ ನಾನೀಗ ಹೇಳಹೊರಟಿದ್ದು ಪ್ರಸಕ್ತ ನನಗೆ ಬೋಧಿಸುತ್ತಿರುವ 'ಸ್ವರ್ಣಲತಾ' ಟೀಚರ್ ಬಗ್ಗೆ . ಹೆಸರೇ ಸೂಚಿಸುವಂತೆ ಅವರ ಗುಣ , ವ್ಯಕ್ತಿತ್ವವೂ ಅಪ್ಪಟ 'ಸ್ವರ್ಣ' .
ಪುಸ್ತಕದಿಂದ ಬೋಧಿಸಿ ಪುಸ್ತಕಕ್ಕೆ ಸೀಮಿತವಾಗುವವರ ನಡುವೆಯೂ , ಹೃದಯದಿಂದಲೇ ಬೋಧನೆಗೈದು ಹೃದಯದೊಳಗೊಂದು ಸ್ಥಾನ ಗಿಟ್ಟಿಸಿಕೊಂಡವರು ನನ್ನ ಅಚ್ವು ಮೆಚ್ಚಿನ ಸ್ವರ್ಣಾ ಮ್ಯಾಮ್ .ನನ್ನನ್ನು ನನ್ನನ್ನಾಗಿ ಬೆಳೆಸುವಲ್ಲಿ ಮಹತ್ತರವಾದ ಕಾಳಜಿ ಮತ್ತು ಪಾತ್ರ ವಹಿಸುತ್ತಿದ್ದಾರೆ .ಮಾರ್ಗದರ್ಶನ ,ಪ್ರೀತಿ, ಸಲಹೆ ,ಹಾರೈಕೆ ,ಶಿಸ್ತು ,ಬೋಧನೆಯ ಜೊತೆಗೆ ಅತ್ಯುತ್ತಮ ಶಿಕ್ಷಕಿಗೆ ಏನೆಲ್ಲಾ ಇರಬೇಕೋ ಅದನ್ನೆಲ್ಲಾ ಮೈಗೂಡಿಸಿಕೊಂಡು ಮುಂದುವರಿಯುತ್ತಿದ್ದಾರೆ . ನಾ ಬರೆದ ಒಂದೆರಡು ಬರಹಗಳು ಎಲ್ಲೋ ಮೂಲೆಗೆ ಸೇರುವ ಸಮಯಕ್ಕೆ , ನನ್ನನ್ನು ಗುರುತಿಸಿ, ತಿದ್ದಿ, ಸಲಹೆ ನೀಡಿ ಬುಟ್ಟಿ ಸೇರಬೇಕಾದದ್ದನ್ನು ತೆಗೆದು ಪಟ್ಟಿ ಮಾಡಿ ಪತ್ರಿಕೆಯಲ್ಲಿ ಪ್ರಕಟಗೊಳ್ಳುವಂತೆ ಮಾಡಿದರು . ತರಗತಿಯೊಳಗೆ ಪಠ್ಯ ಬೋಧಕಿಯಾಗಿ ,ಹೊರಗೆ ಬಂದರೆ ಉತ್ತಮ ಸ್ನೇಹಿತೆಯ ಹಾಗೆ ,ಮನಸ್ಸಿನ ನೆಮ್ಮದಿ ಕಳೆದುಕೊಂಡಾಗ ಅಮ್ಮನ ಹಾಗೆ ಸಂತೈಸಿ ,ಏನೋ ಕಳೆದುಕೊಂಡೆ ಅನ್ನುವಾಗ ಎಂಟ್ರಿ ಕೊಡುವ ಅಕ್ಕನ ಹಾಗೆ ಪ್ರೀತಿ ,ಮಮತೆ ,ವಾತ್ಸಲ್ಯ ,ಸ್ನೇಹವನ್ನೆಲ್ಲಾ ಬೇಕಾದಷ್ಟು ಕೊಟ್ಟು ನನ್ನೊಳಗೊಂದು ಹೊಸ ಚೈತನ್ಯವನ್ನು ತುಂಬುತ್ತಿದ್ದಾರೆ .ಟೀಚರ್ ಅಂದರೆ ಪಾಠ ,ಕಾಟ ,ಪನಿಷ್ಮೆಂಟು , ಮಾರ್ಕು, ಎಕ್ಸಾಮ್ ಎಂಬುವುದು ಮಾತ್ರ ಅಂದುಕೊಂಡಿದ್ದ ನನ್ನೊಳಗೆ ಪ್ರೀತಿ ,ಮಮತೆ ,ಸ್ನೇಹ ,ಮನರಂಜನೆ ,ಆವೇಶವೂ ಕೂಡಾ ಈ 'ಟೀಚರ್' ಅನ್ನುವ ಮಾಯಾ ಪ್ರಪಂಚದೊಳಗೆ ಅಡಗಿದೆ ಅನ್ನುವುದನ್ನು ತೋರಿಸಿಕೊಟ್ಟರು . ವಿದ್ಯಾರ್ಥಿ ದೆಸೆಯಿಂದ ನಮ್ಮ ಉತ್ತಮ ಭವಿಷ್ಯದ ಬಗ್ಗೆ ನಿರೀಕ್ಷೆ ಇಟ್ಟುಕೊಂಡ ತಮಗೆ ದೇವರು ಉತ್ತಮ ಭವಿಷ್ಯವನ್ನು ಕರುಣಿಸಲಿ ಅನ್ನುವುದೇ ಈ ಸಣ್ಣವನ ಸಣ್ಣದೊಂದು ಹಾರೈಕೆ .
ಅಕ್ಷರ ಕಲಿತ ಬಾಲ್ಯದಿಂದ ಶುರುವಾಗಿ ,ಮೌಲ್ಯಯುತ ಬದುಕನ್ನು ದಿಟ್ಟಿಸುತ್ತಿರುವ ಈ ಕಾಲೇಜ್ ದಿನಗಳವರೆಗೆ ನನಗೆ ಬೋಧಿಸಿದ ,ನನ್ನ ಬದುಕನ್ನು ರೂಪಿಸಿದ ,ನನ್ನೊಳಗಿನ ಕತ್ತಲೆಗೆ ದೀವಟಿಗೆಯಾಗಿ ಬಂದು ಬೆಳಕು ಚೆಲ್ಲಿದ ನನ್ನೆಲ್ಲಾ ಆತ್ಮೀಯ ಶಿಕ್ಷಕ ವೃಂದದವರಿಗೆ ‘ಶಿಕ್ಷಕರ ದಿನಾಚರಣೆ’ ಯ ಹಾರ್ದಿಕ ಶುಭಾಶಯಗಳು .