ಜೆಡಿಎಸ್, ಕಾಂಗ್ರೆಸ್ ಪಕ್ಷದಿಂದ ರಾಜ್ಯಕ್ಕೆ ಅನ್ಯಾಯ: ಯೋಗಾರಮೇಶ್
.jpg)
ಹಾಸನ, ಸೆ.7: ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಿಂದ ರಾಜ್ಯಕ್ಕೆ ಅನ್ಯಾಯವಾಗಿದ್ದು, ರೈತರಿಗೆ ಮೋಸ ಮಾಡಿದವರಲ್ಲಿ ಅಧಿಕಾರಿಗಳ ಪಾಲು ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾರಮೇಶ್ ಗಂಭೀರವಾಗಿ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಹಾಸನ ಜಿಲ್ಲೆಯ ಜೀವನದಿ ಹೇಮಾವತಿ ನೀರನ್ನು ಅನೇಕ ಮುಖ್ಯ ಭಾಗಗಳಿಗೆ ಹರಿಸಲಾಗುತ್ತಿದೆ. ಉಚ್ಛನ್ಯಾಯಾಲಯದಲ್ಲಿ ಸಮರ್ಥವಾಗಿ ಕರ್ನಾಟಕ ರಾಜ್ಯ ಮಂಡಿಸುವಲ್ಲಿ ವಿಫಲವಾಗಿದೆ. ರಾಜ್ಯದಿಂದ ತಮಿಳುನಾಡಿಗೆ ನೀರು ಹರಿಸುವ ಮೂಲಕ ಜನತೆಗೆ ಮರಣಶಾಸನಕ್ಕೆ ಮುನ್ನುಡಿ ಬರೆಯಲು ಹೊರಟಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಸರಕಾರ ಜಾಗೃತಿ ವಹಿಸಿದ್ದರೇ ಈ ಭಾಗದ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬಹುದಿತ್ತು ಎಂದು ಸಲಹೆ ನೀಡಿದ ಅವರು ಎಲ್ಲೂ ಕುಳಿತು ಬೆಂಗಳೂರಿನಲ್ಲಿ ಸಭೆ ಮಾಡಿದರೇ ಇಲ್ಲಿನ ವಸ್ತು ಸ್ಥಿತಿ ಅರ್ಥವಾಗುತ್ತದೆಯೇ ಎಂದು ಪ್ರಶ್ನೆ ಮಾಡಿದರು. ಎರಡು ರಾಜಕೀಯ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಿಂದ ರಾಜ್ಯಕ್ಕೆ ಅನ್ಯಾಯವಾಗಿದ್ದು, ನಾವು ಧಿಕ್ಕಾರ ಹೇಳುತ್ತೇವೆ ಎಂದರು.
ಈಗಾಗಲೇ ಅಧಿಕಾರಿಗಳು ಏಕಾಏಕಿ ನೀರನ್ನು ಹರಿಸಿದ್ದಾರೆ. ಇವನ್ನೆಲ್ಲಾ ಗಮನಿಸಿದರೇ ಅಧಿಕಾರಿಗಳಿಂದಲೂ ರೈತರಿಗೆ ಮೋಸ ಮಾಡಿದ ಪಾಲು ಇದೆ ಎಂದು ಖಂಡಿಸಿದರು. 15 ಸಾವಿರ ಕ್ಯೂಸೆಕ್ ನೀರು ಪ್ರತಿನಿತ್ಯ ಹರಿಸಿದರೇ ನದಿ ಬರಿದಾಗುತ್ತದೆ. ಮುಂದೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವುದು. ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಹೋರಾಟದಲ್ಲಿ ಯಾರು ರಾಜಕೀಯ ಮಾಡದೆ ಮುಂದಾಗಲು ಕರೆ ನೀಡಿದರು.
ನಗರಸಭೆಯ ಅಧ್ಯಕ್ಷರು ನಗರದ ಸಮಸ್ಯೆ ಆಲಿಸದೆ ವಿದೇಶ ಪ್ರವಾಸ ಹೊರಟಿದ್ದಾರೆ. ಈ ಬಗ್ಗೆ ಹೋರಾಟ ಮಾಡುವುದಾಗಿ ಹೇಳಿದರು.
ಜಿಲ್ಲಾ ಮಂತ್ರಿ ಎ.ಮಂಜುಗೆ ವಸೂಲಿಖಾತೆಗೆ ಇನ್ನೊಂದು ಭಡ್ತಿ ಲಭಿಸಿದೆ. ಇನ್ನು ಮುಂದೆ ಭ್ರಷ್ಟಚಾರಕ್ಕೆ ಇತಿಮಿತಿಯೇ ಇಲ್ಲ ಎಂದು ವ್ಯಂಗ್ಯವಾಡಿದರು.
ತಹಶೀಲ್ದಾರ್ ಕಚೇರಿ, ಕಂದಾಯ ಇಲಾಖೆ, ಸಬ್ ರಿಜಿಸ್ಟ್ರಾರ್ ಇಲಾಖೆ ಸೇರಿದಂತೆ ಹಲವಾರು ಇಲಾಖೆಯಲ್ಲಿ ಲಂಚ ಕೊಡದೆ ಯಾವ ಕೆಲಸ ಆಗುವುದಿಲ್ಲ. ಇಲ್ಲಿಗೆ ಬಡವ ಬಂದರೇ ಆತ ಸಾಲ ಮಾಡಿ ಇವರಿಗೆ ಲಂಚ ಕೊಡಬೇಕು ಅಂತಹ ಪರಿಸ್ಥಿತಿಗೆ ಸರಕಾರಿ ಇಲಾಖೆಗಳು ತಂದೊಡ್ಡಿದೆ ಎಂದು ಆತಂಕವ್ಯಕ್ತಪಡಿಸಿದ ಅವರು ಈ ಬಗ್ಗೆ ಜಿಲ್ಲಾಮಂತ್ರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಹುಲ್ಲಳ್ಳಿ ಸುರೇಶ್, ಪ್ರೀತಂ ಜೆ. ಗೌಡ, ಕಟ್ಟಾಯ ಅಶೋಕ್, ಶೋಭನ್ ಬಾಬು, ಭಾಸ್ಕರ್ ಇದ್ದರು.







