21 ಮಂದಿ ಸಂಸದೀಯ ಕಾರ್ಯದರ್ಶಿಗಳ ನೇಮಕ ಕೇಜ್ರಿವಾಲ್ ಸರಕಾರದ ಆದೇಶ ದಿಲ್ಲಿ ಹೈಕೋರ್ಟ್ನಿಂದ ರದ್ದು

ಹೊಸದಿಲ್ಲಿ, ಸೆ.8: ಸಂಸದೀಯ ಕಾರ್ಯದರ್ಶಿಗಳಾಗಿ 21 ಮಂದಿ ಎಎಪಿ ಶಾಸಕರನ್ನು ನೇಮಿಸಿದ್ದ ಅರವಿಂದ ಕೇಜ್ರಿವಾಲ್ ಸರಕಾರದ ಆದೇಶವನ್ನು ದಿಲ್ಲಿ ಹೈಕೋರ್ಟ್ ಗುರುವಾರ ರದ್ದುಪಡಿಸಿದೆ.
2015ರ ಮಾರ್ಚ್ 13ರ ಈ ಆದೇಶವನ್ನು ಲೆಫ್ಟಿನೆಂಟ್ ಗರ್ವನರ್ರ ಅನುಮತಿ ಹಾಗೂ ಅಭಿಪ್ರಾಯವನ್ನು ಪಡೆಯದೆ ನೀಡಲಾಗಿತ್ತೆಂದು ದಿಲ್ಲಿ ಸರಕಾರದ ಪರ ವಕೀಲರು ‘ಒಪ್ಪಿಕೊಂಡ’ ಬಳಿಕ ನ್ಯಾಯಮೂರ್ತಿಗಳಾದ ಜಿ.ರೋಹಿಣಿ ಹಾಗೂ ಸಂಗೀತಾ ಧಿಂಗ್ರಾ ಸೆಹಗಲ್ರನ್ನೊಳಗೊಂಡ ಪೀಠವೊಂದು ಈ ತೀರ್ಪು ನೀಡಿದೆ.
ಲೆಫ್ಟಿನೆಂಟ್ ಗವರ್ನರ್ರ ಅನುಮತಿಯಿಲ್ಲದೆ ಎಎಪಿ ಸರಕಾರ ಹೊರಡಿಸಿದ್ದ ಹಲವು ಅಧಿಸೂಚನೆಗಳನ್ನು ರದ್ದುಪಡಿಸಿದ್ದ ಹೈಕೋರ್ಟ್ನ ಆ.4ರ ತೀರ್ಪನ್ನು ದಿಲ್ಲಿ ಸರಕಾರದ ಪರ ವಕೀಲ ಸುಧೀರ್ ನಂದ್ರಾಜೋಗ್ ಉಲ್ಲೇಖಿಸಿದರು.
ಆ.4ರ ತೀರ್ಪು ದಿಲ್ಲಿ ಸರಕಾರದ ವಿರುದ್ಧವಿದೆಯೆಂಬುದನ್ನು ಇಂದು ತಾನು ಒಪ್ಪಿಕೊಂಡಿದ್ದೇನೆಂದು ಅವರು ಹೇಳಿದರು.
ದಿಲ್ಲಿ ಸರಕಾರದ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಪೀಠ, ದಿಲ್ಲಿ ಸರಕಾರದ ಆದೇಶವನ್ನು ರದ್ದುಪಡಿಸಲಾಗಿದೆಯೆಂದು ತೀರ್ಪು ನೀಡಿತು.





