ಕಾವೇರಿಗಾಗಿ ಇಂದು ಕರ್ನಾಟಕ ಸ್ತಬ್ಧ
ಬಸ್, ಪೆಟ್ರೋಲ್ ಬಂಕ್, ಅಂಗಡಿ, ಸರಕಾರಿ ಕಚೇರಿ, ಬ್ಯಾಂಕ್ ಎಲ್ಲವೂ ಬಂದ್

ಬೆಂಗಳೂರು, ಸೆ.8: ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಸೆ.9ರ ಕರ್ನಾಟಕ ಬಂದ್ಗೆ ಸಾವಿರಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಅಧಿಕೃತವಾಗಿ ಬೆಂಬಲ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸಾರ್ವಜನಿಕ ಜೀವನ ಸಂಪೂರ್ಣ ಸ್ತಬ್ಧಗೊಳ್ಳುವುದು ಖಚಿತವಾಗಿದೆ. ಕಾವೇರಿ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ಶುಕ್ರವಾರ ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಬಂದ್ ನಡೆಯಲಿದ್ದು, ಕನ್ನಡ ಚಲನಚಿತ್ರೋದ್ಯಮ, ಪೆಟ್ರೋಲ್ ಬಂಕ್, ಹೊಟೇಲ್, ಸಾರಿಗೆ ಸೇವೆಗಳನ್ನು ಬೆಂಗಳೂರು ಸೇರಿದಂತೆ ಎಲ್ಲೆಡೆ ಬಂದ್ ಮಾಡ ಬೇಕೆಂದು ಕನ್ನಡಪರ ಸಂಘಟನೆಗಳು ಮನವಿ ಮಾಡಿವೆ.
ಕೆಎಸ್ಸಾರ್ಟಿಸಿ, ಬಿಎಂಟಿಸಿ ನೌಕರರ ಸಂಘಗಳು, ಖಾಸಗಿ ಬಸ್ ಮಾಲಕರ ಸಂಘ, ವಾಣಿಜ್ಯ ಸಂಘಟನೆಗಳು, ಚಲನ ಚಿತ್ರೋದ್ಯಮ, ಲಾರಿ ಮಾಲಕರ ಸಂಘ, ಟ್ಯಾಕ್ಸಿ ಚಾಲಕರ ಸಂಘ, ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ, ಆಟೋ ಚಾಲಕರ ಸಂಘ, ಹೊಟೇಲ್ ಮಾಲಕರ ಸಂಘ, ಬೀದಿ ಬದಿ ವ್ಯಾಪಾರಿಗಳ ಸಂಘ ಸೇರಿ 1,100 ಸಂಘಟನೆಗಳು ಬಂದ್ನಲ್ಲಿ ಪಾಲ್ಗೊಳ್ಳುತ್ತಿರುವ ಕಾರಣ ವ್ಯಾಪಾರ-ವಹಿವಾಟು ಸ್ಥಗಿತಗೊಳ್ಳಲಿದೆ. ಅದೇ ರೀತಿ ಮಾಲ್ಗಳು ಬಂದ್ ಆಗಲಿದ್ದು, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಯಾವುದೇ ಕ್ಯಾಬ್ಗಳು ಸಂಚರಿಸುವುದಿಲ್ಲ. ಅದೇ ರೀತಿ, ಸೆ.9ರಂದು ನಡೆಯಬೇಕಿದ್ದ ಕಾಮೆಡ್ ಕೆ ಕೌನ್ಸೆಲಿಂಗನ್ನು ಸೆ.10ಕ್ಕೆ ಮುಂದೂಡಲಾಗಿದೆ ಎಂದು ಪರೀಕ್ಷಾ ಮಂಡಳಿ ಹೇಳಿದೆ.
ಸಾರಿಗೆ ನೌಕರರ ಬೆಂಬಲ: ತಮಿಳುನಾಡಿಗೆ ಕಾವೇರಿ ನದಿಯಿಂದ ನೀರು ಬಿಡಬೇಕು ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ವಿರೋಧಿಸಿ ಇಂದು ನಡೆಯಲಿರುವ ಕರ್ನಾಟಕ ಬಂದ್ಗೆ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಬಹು ಪಾಲು ಬಸ್ ಸಂಚಾರ ಇರುವುದಿಲ್ಲ.
ಅದೇ ರೀತಿ, ಬೆಂಗಳೂರಿನಿಂದ ಯಾವುದೇ ವಾಹನ ತಮಿಳುನಾಡಿಗೆ ತೆರಳುವುದಿಲ್ಲ ಮತ್ತು ಅಲ್ಲಿಂದ ಯಾವುದೇ ವಾಹನ ಬೆಂಗಳೂರಿಗೆ ಆಗಮಿಸುವುದಿಲ್ಲ. ಕೆಎಸ್ಸಾರ್ಟಿಸಿಯು ತಮಿಳುನಾಡಿಗೆ ಬಸ್ ಸೇವೆಯನ್ನು ಸ್ಥಗಿತಗೊಳಿಸಿದೆ. ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಮಾಲಕರ ಸಂಘದ 60 ಸಾವಿರ ಟ್ಯಾಕ್ಸಿ ಚಾಲಕರು ಇಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕಾರ್ಯ ನಿರ್ವಹಿಸುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಯಾವುದೇ ಕ್ಯಾಬ್ ಸಂಚರಿಸುವುದಿಲ್ಲ.
ಬಿಗಿ ಬಂದೋಬಸ್ತ್: ಕರ್ನಾಟಕ ಬಂದ್ನ ಕಾರಣ ರಾಜಧಾನಿ ಹಾಗೂ ಮೈಸೂರು ಭಾಗದಲ್ಲಿ ಶಸ್ತ್ರ ಸಜ್ಜಿತ ಪೊಲೀಸರನ್ನು ನಿಯೋಜಿಸಿ ಅಭೂತಪೂರ್ವ ಬಂದೋಬಸ್ತ್ ಮಾಡಲಾಗಿದೆ.
ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಹಳೆ ಮೈಸೂರು ಭಾಗದಲ್ಲಿ ಬಂದ್ನ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಶಸ್ತ್ರ ಸಜ್ಜಿತ ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರ ಸೇರಿ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಅರೆ ಸೇನಾ ಪಡೆಯ ಯೋಧರನ್ನು ನಿಯೋಜಿಸಿ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಲಾಗಿದೆ.
ರಾಜ್ಯ ಮೀಸಲು ಪಡೆ, ಸಶಸ್ತ್ರ ಮೀಸಲು ಪಡೆ, ಕೈಗಾರಿಕಾ ಭದ್ರತಾ ಪಡೆ, ಗೃಹರಕ್ಷಕ ದಳದ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಪರಿಸ್ಥಿತಿಯ ಮೇಲೆ ನಿಗಾ ಇರಿಸ ಲಾಗಿದೆ. ಕಾವೇರಿ ಜಲಾನಯನ ಪ್ರದೇಶಗಳ ಭದ್ರತೆಗಾಗಿ ತಲಾ 120 ಮಂದಿ ಯೋಧರಿರುವ ಅರೆ ಸೇನಾ ಪಡೆಯ 4 ತುಕಡಿಗಳು,ರಾಜ್ಯ ಮೀಸಲು ಪಡೆಯ 180 ತುಕಡಿಗಳು ಜಿಲ್ಲಾ ಸಶಸ್ತ್ರ ದಳದ ತುಕಡಿಗಳು, 20 ಸಾವಿರ ಗೃಹ ರಕ್ಷಕರು ಸೇರಿ 65 ಸಾವಿರ ಮಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಇಲಾಖೆ ಹೇಳಿದೆ.
ತಮಿಳು ಚಾನೆಲ್ ಬಂದ್
ಕಾವೇರಿಗಾಗಿ ಕನ್ನಡಪರ ಸಂಘಟನೆಗಳು ಇಂದು ಕರ್ನಾಟಕ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೂ ಒಟ್ಟು 53 ತಮಿಳು ಚಾನೆಲ್ಗಳ ಪ್ರಸಾರ ಸ್ಥಗಿತಗೊಳಿಸಲು ಕರ್ನಾಟಕ ರಾಜ್ಯ ಕೇಬಲ್ ಆಪರೇಟರ್ಸ್ ಅಸೋಸಿಯೇಷನ್ ಮುಂದಾಗಿದೆ.
ಬೃಹತ್ ರ್ಯಾಲಿ
ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆಯ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಇಂದು ನಗರದ ಪುರಭವನದ ಎದುರು ಕನ್ನಡಪರ ಸಂಘಟನೆಗಳ ಒಂದು ಲಕ್ಷ ಸದಸ್ಯರು ಬೆಳಗ್ಗೆ 10 ಗಂಟೆಗೆ ಮೈಸೂರು ಬ್ಯಾಂಕ್ ವೃತ್ತ, ಗಾಂಧಿ ನಗರ ಹಾಗೂ ಫ್ರೀಡಂ ಪಾರ್ಕ್ಗಳಲ್ಲಿ ಬೃಹತ್ ರ್ಯಾಲಿ ನಡೆಸಲಿದ್ದಾರೆ.
ಬೃಹತ್ ರ್ಯಾಲಿ
ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆಯ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಇಂದು ನಗರದ ಪುರಭವನದ ಎದುರು ಕನ್ನಡಪರ ಸಂಘಟನೆಗಳ ಒಂದು ಲಕ್ಷ ಸದಸ್ಯರು ಬೆಳಗ್ಗೆ 10 ಗಂಟೆಗೆ ಮೈಸೂರು ಬ್ಯಾಂಕ್ ವೃತ್ತ, ಗಾಂಧಿ ನಗರ ಹಾಗೂ ಫ್ರೀಡಂ ಪಾರ್ಕ್ಗಳಲ್ಲಿ ಬೃಹತ್ ರ್ಯಾಲಿ ನಡೆಸಲಿದ್ದಾರೆ.







