ವಿಲಾಸಿ ಕಾರಲ್ಲಿ ಬಂದವನನ್ನು ಆರ್ ಬಿ ಐ ಗವರ್ನರ್ ಎಂದು ಸ್ವಾಗತಿಸಿದ ನೀತಿ ಆಯೋಗದ ಅಧಿಕಾರಿಗಳು !
ನವದೆಹಲಿ,ಸೆ. 9 : ರಾಜಧಾನಿಯ ವಿಐಪಿ ಸಂಸ್ಕೃತಿಯ ಬಗ್ಗೆ ಹೆಚ್ಚೇನೂ ವಿವರಿಸಬೇಕಿಲ್ಲ. ಈ ನಗರದಲ್ಲಿ ಒಬ್ಬ ಶಿಕ್ಷಿತನಲ್ಲದಿದ್ದರೂ ಶಿಕ್ಷಿತನಂತೆ ಪೋಸು ಕೊಟ್ಟರಷ್ಟೇ ಸಾಕೆಂಬಂತಹ ಭಾವನೆಯಿದೆ. ಅದೇ ರೀತಿ ಶ್ರೀಮಂತ ವ್ಯಕ್ತಿಯೊಬ್ಬನನ್ನು ಆತ ಧರಿಸುವ ಶೋಕಿಯ ಬಟ್ಟೆಗಳಿಂದಲೇ ಗುರುತಿಸುವ ನಗರವಿದು.
ಒಂದೆರಡು ದಿನಗಳ ಹಿಂದೆ ದೆಹಲಿಯಲ್ಲಿರುವ ನೀತಿ ಆಯೋಗದ ಉಪಾಧ್ಯಕ್ಷರನ್ನು ಭೇಟಿಯಾಗಲು ಹಾಗೂತಮ್ಮ ಪ್ರಪ್ರಥಮ ಅಧಿಕೃತ ಸಭೆ ನಡೆಸಲು ಆಗಮಿಸಿದ್ದ ಆರ್ ಬಿ ಐ ಹೊಸ ಗವರ್ನರ್ ಉರ್ಜಿತ್ ಪಟೇಲ್ ಅವರಿಗೂ ದೆಹಲಿಯ ಈ ವಿಐಪಿ ಸಂಸ್ಕೃತಿಯ ಅನುಭವವಾಯಿತು.
ಪಟೇಲ್ ಅವರನ್ನು ಸ್ವಾಗತಿಸಲು ಅಧಿಕಾರಿಗಳೆಲ್ಲರೂ ಮುಖ್ಯ ದ್ವಾರದಲ್ಲಿ ಕಾದಿದ್ದರೂ ಪಟೇಲ್ ಅವರು ಅಲ್ಲಿಗೆ ಬಂದಿದ್ದು ಅವರ್ಯಾರ ಗಮನಕ್ಕೂ ಬಂದಿರಲಿಲ್ಲ. ಅಂದ ಹಾಗೆ ಅಲ್ಲಿಗೆ ಅದೇ ಸಮಯ ಠಾಕುಠೀಕಾಗಿ ವಿಲಾಸಿ ಕಾರಲ್ಲಿ ಆಗಮಿಸಿದ ವ್ಯಕ್ತಿಯೊಬ್ಬರನ್ನು ಎಲ್ಲರೂ ಆರ್ ಬಿ ಐ ಗವರ್ನರ್ ಎಂದೇ ತಪ್ಪಾಗಿ ತಿಳಿದು ಕೊಂಡು ಬಿಟ್ಟಿದ್ದರು.
ವರದಿಯೊಂದರ ಪ್ರಕಾರ ಸಭೆಗೆ ಒಬ್ಬರೇ ಆಗಮಿಸಿದ್ದ ಉರ್ಜಿತ್ ಪಟೇಲ್ ತಮ್ಮ ಫೈಲುಗಳನ್ನು ತಾವೇ ಹಿಡಿದುಕೊಂಡಿದ್ದರು. ಭದ್ರತಾ ಕಾರ್ಯ ನಿರ್ವಹಿಸುತ್ತಿದ್ದ ಸಿಐಎಸ್ಎಫ್ ಜವಾನನೊಬ್ಬ ಅವರ ಗುರುತು ಹಿಡಿಯದೆ ಅವರಗುರುತು ಚೀಟಿಯನ್ನು ಕೇಳಿದಾಗ ಅವರು ಯಾವುದೇ ತಕರಾರಿಲ್ಲದೆ ಅದನ್ನು ತೋರಿಸಿದಾಗ ಆತ ಅವರನ್ನು ಒಳ ಹೋಗಲು ಬಿಟ್ಟ.
ಆದರೆಉರ್ಜಿತ್ ಪಟೇಲ್ ಎಂದು ತಿಳಿದು ಅಧಿಕಾರಿಗಳಿಂದ ಸ್ವಾಗತಿಸಲ್ಪಟ್ಟ ಬೇರೊಬ್ಬ ವ್ಯಕ್ತಿಯ ಕಥೆ ಏನಾಯಿತೆಂದು ಯಾರಿಗೂ ತಿಳಿದಿಲ್ಲ.