ಜಿಲ್ಲೆಯ ಪರ ತೀರ್ಪು ಬರಲು ಕೋರಿ ಸೆ.14ರಂದು ಸಾಮೂಹಿಕ ಪ್ರಾರ್ಥನೆ
ಸೆ.21ರಂದು ಎತ್ತಿನಹೊಳೆ ಯೋಜನೆ ಬಗ್ಗೆ ತೀರ್ಪು

ಮಂಗಳೂರು, ಸೆ.10: ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿಯ ರಕ್ಷಣೆಗಾಗಿ ಎತ್ತಿನಹೊಳೆ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲೆಯ ಪರವಾಗಿ ದಿಲ್ಲಿಯ ರಾಷ್ಟ್ರೀಯ ಹಸಿರುಪೀಠದಿಂದ ತೀರ್ಪು ಬರುವಂತೆ ಕೋರಿ ಸೆ.14ರಂದು ಸಾಮೂಹಿಕ ಪ್ರಾರ್ಥನೆಯನ್ನು ಹಮ್ಮಿಕೊಳ್ಳಲಾಗಿದೆ. ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ವತಿಯಿಂದ ಅಂದು ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು. ಬೆಳಗ್ಗೆ 8:30ರಿಂದ ಕದ್ರಿ ದೇವಸ್ಥಾನದಲ್ಲಿ, 10 ಗಂಟೆಗೆ ಮಿಲಾಗ್ರಿಸ್ ಚರ್ಚ್, 11 ಗಂಟೆಗೆ ಮಂಗಳಾದೇವಿ ದೇವಸ್ಥಾನ, 12 ಗಂಟೆಗೆ ಉಳ್ಳಾಲ ದರ್ಗಾ ಹಾಗೂ 1 ಗಂಟೆಗೆ ಕುದ್ರೋಳಿ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಸಾಮೂಹಿಕ ಪ್ರಾರ್ಥನೆಗೆ ಅಜಿತ್ ಕುಮಾರ್ ರೈ ಮಾಲಾಡಿ, ಜೆ.ಬಿ.ಕ್ರಾಸ್ತಾ, ಮುಹಮ್ಮದ್ ಮಸೂದ್, ಗಂಗಾಧರ ಹೊಸಬೆಟ್ಟು, ಸಂಸದ ನಳಿನ್ಕುಮಾರ್ ಕಟೀಲ್, ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಪಂ, ತಾಪಂ, ಗ್ರಾಪಂ ಅಧ್ಯಕ್ಷರು, ಸ್ಥಳೀಯಾಡಳಿತಗಳ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ.
ಸೆ.21ರಂದು ಅಂತಿಮ ತೀರ್ಪು ಪ್ರಕಟವಾಗುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ ಎಂದು ಹೇಳಿದರು. ಎತ್ತಿನಹೊಳೆ ಯೋಜನೆಯನ್ನು ಕೈಬಿಡಬೇಕು ಎಂಬ ನಮ್ಮ ಹೋರಾಟಕ್ಕೆ ಮುಖ್ಯಮಂತ್ರಿ ಯಾವುದೇ ರೀತಿಯ ಬೆಲೆ ಕೊಟ್ಟಿಲ್ಲ. ಒಂದು ಕಡೆ ಮಾತುಕತೆ ನಡೆಸುವುದಾಗಿ ಹೇಳಿರುವ ಅವರು, ಮತ್ತೊಂದೆಡೆ ಯೋಜನೆ ಮಾಡಿಯೇ ಸಿದ್ಧ ಎಂಬ ಹೇಳಿಕೆ ನೀಡುವ ಮೂಲಕ ಕರಾವಳಿ ಜನರ ಭಾವನೆಗಳನ್ನು ನಿರ್ಲಕ್ಷಿಸಿದ್ದಾರೆ. ಇದರ ನಡುವೆ ದ.ಕ., ಉಡುಪಿ ಸೇರಿದಂತೆ 12 ಜಿಲ್ಲೆಗಳಿಗೆ ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸಿ ಒದಗಿಸುವ ಮಾತುಗಳೂ ಕೇಳಿ ಬರುತ್ತಿವೆ. ನಮ್ಮ ಪ್ರಕೃತಿದತ್ತ ನೀರನ್ನು ಬೇರೆಡೆಗೆ ಹಾಯಿಸಿ ನಮಗೆ ಉಪ್ಪು ನೀರನ್ನು ಸಂಸ್ಕರಿಸಿ ನೀಡುವುದು ಅರ್ಥವಿಲ್ಲದ ಮಾತು ಎಂದು ವಿಜಯಕುಮಾರ್ ಶೆಟ್ಟಿ ಬೇಸರ ವ್ಯಕ್ತಪಡಿಸಿದರು. ಸಮುದ್ರದ ಉಪ್ಪನ್ನು ಸಂಸ್ಕರಿಸಿ ನೀರಿನ ಅತಿಯಾದ ಅಗತ್ಯವಿರುವ ಚಿಕ್ಕಬಳ್ಳಾಪುರ, ಕೋಲಾರಕ್ಕೆ ನೀಡಲಿ. ಅದಕ್ಕೆ ನಮ್ಮ ಅಡ್ಡಿ ಇಲ್ಲ. ನಮ್ಮ ಪ್ರಕೃತಿದತ್ತ ನೀರು ನಮಗೆ ಇರಲಿ ಎಂದು ಅವರು ಹೇಳಿದರು. ಸಮಿತಿಯ ಸದಸ್ಯ ದಿನಕರ ಶೆಟ್ಟಿ ಮಾತನಾಡಿ, ಕಾವೇರಿ ವಿಚಾರದಲ್ಲಿ ರಾಜ್ಯ ಬಂದ್ಗೆ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಿರುವ ಜಿಲ್ಲಾಧಿಕಾರಿ ಕ್ರಮ ಖಂಡನೀಯ. ಎತ್ತಿನಹೊಳೆಯ ವಿಚಾರದಲ್ಲಿ ಕರಾವಳಿಯ ಜನಪ್ರತಿನಿಧಿಗಳ, ಹೋರಾಟಗಾರರ ಸಭೆಯನ್ನು ಕರೆಯಲು ಸರ್ಕಾರಕ್ಕೆ ಇನ್ನೂ ಸಮಯ ಸಿಕ್ಕಿಲ್ಲ. ಕಾವೇರಿ ಹೋರಾಟಕ್ಕೆ ನಮ್ಮ ಸಹಾನುಭೂತಿ ಇದೆ. ಆದರೆ ಸರ್ಕಾರ ಕರಾವಳಿ ಜನತೆಯ ಬವಣೆಯನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಎತ್ತಿನಹೊಳೆ ಯೋಜನೆಯನ್ನು ಜಾರಿಗೊಳಿಸಿದರೆ ಕರಾವಳಿಗೆ ಉಂಟಾಗುವ ತೊಂದರೆಯ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆ ನಡೆಸುವುದಾಗಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಭರವಸೆ ನೀಡಿದ್ದರು. ಆದರೆ ಈಗ ಭರವಸೆ ಹುಸಿಯಾಗಿದೆ. ಈ ಬಗ್ಗೆ ಆಸ್ಕರ್ ಫೆರ್ನಾಂಡಿಸ್ ಸ್ಪಷ್ಟೀಕರಣ ನೀಡಬೇಕು ಎಂದು ಹರಿಕೃಷ್ಣ ಬಂಟ್ವಾಳ ಪ್ರಶ್ನಿಸಿದರು.
ಡಾ.ಅಣ್ಣಯ್ಯ ಕುಲಾಲ್ ಮಾತನಾಡಿ, ನೇತ್ರಾವತಿ ವಿಚಾರದಲ್ಲಿ ಹೋರಾಟ ನಡೆಸಿದಾಗ, ರಾಜ್ಯದಲ್ಲಿರುವ ಕನ್ನಡಪರ ಸಂಘಟನೆಗಳು ಸ್ಪಂದಿಸಿಲ್ಲ. ಹಾಗಾಗಿ ನಾವು ಕೂಡ ಕಾವೇರಿ ವಿಚಾರದಲ್ಲಿ ಹೋರಾಟಕ್ಕೆ ಕೈಜೋಡಿಸಿಲ್ಲ ಎಂದರು. ಎನ್ಜಿಟಿ ಅರ್ಜಿದಾರ ಪುರುಷೋತ್ತಮ ಚಿತ್ರಾಪುರ ಮಾತನಾಡಿ, ಎನ್ಜಿಟಿಯಲ್ಲಿ ಎತ್ತಿನಹೊಳೆ ವಿಚಾರಣೆಗೆ ವಕೀಲರಿಗೆ ನೀಡಲು ಸಾಕಷ್ಟು ಮೊತ್ತ ಖರ್ಚಾಗುತ್ತಿದೆ. ಇನ್ನು ಈ ಬಗ್ಗೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲು ಯೋಚಿಸುತ್ತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಯೋಗೀಶ್ ಕುಮಾರ್ ಜೆಪ್ಪು, ಶಶಿರಾಜ್ ಕೊಳಂಬೆ, ರಹೀಂ ಉಚ್ಚಿಲ, ತುಷಾರ್ ಕದ್ರಿ, ಪ್ರಶಾಂತ್, ಶಶಿರಾಜ್ ಕಾವೂರು ಮೊದಲಾದವರು ಉಪಸ್ಥಿತರಿದ್ದರು.







