ಓರ್ವನ ಬಂಧನ, ಇಬ್ಬರಿಗಾಗಿ ಶೋಧ: ಕಮಿಷನರ್
ಶ್ರೀನಿವಾಸ್ ಕಾಲೇಜು ದೂರು ಪ್ರಕರಣ
.jpg)
ಮಂಗಳೂರು, ಸೆ.10: ವಳಚ್ಚಿಲ್ ಕಾಲೇಜಿನಲ್ಲಿ ರ್ಯಾಗಿಂಗ್ ನಡೆದಿರುವ ಕುರಿತಂತೆ ದೂರು ನೀಡಿರುವ ಹಿನ್ನೆಲೆಯಲ್ಲಿ 3 ಮಂದಿ ಮೇಲೆ ದೂರು ದಾಖಲಾಗಿದೆ. ಒಬ್ಬನನ್ನು ಕೇರಳದ ಅಲಪ್ಪುಝದಿಂದ ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಚಂದ್ರಶೇಖರ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲೇಜು ಪ್ರಿನ್ಸಿಪಾಲ್ ನೀಡಿದ ದೂರಿನ ಮೇಲೆ ತನಿಖೆ ನಡೆಯುತ್ತಿದೆ. ಆದರೆ ಶನಿವಾರ ಪ್ರಿನ್ಸಿಪಾಲ್ ದೂರಿನಲ್ಲಿ ತಿಳಿಸಿದ್ದ ನಾಲ್ಕು ಮಂದಿ ವಿದ್ಯಾರ್ಥಿನಿಯರೇ ಬಂದು ನಮ್ಮ ಮೇಲೆ ಯಾವುದೇ ರ್ಯಾಗಿಂಗ್ ಆಗಿಲ್ಲ ಹೇಳಿಕೆ ನೀಡಿ ಮನವಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಅವರ ಹೇಳಿಕೆಯನ್ನು ದಾಖಲಿಸಿ, ಅದನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಅವರು ಹೇಳಿದರು.
ಪ್ರಿನ್ಸಿಪಾಲ್ ನೀಡಿದ ದೂರಿನ ಮೇಲೆ ರ್ಯಾಗಿಂಗ್, ಮಹಿಳಾ ನಿಂದನೆ, ಕಿರುಕುಳ, ಹಲ್ಲೆ ಕೇಸು ಹಾಕಲಾಗಿದೆ ಎಂದು ಹೇಳಿದ್ದಾರೆ.
25ಮಂದಿ ಮೇಲೆ ಕೇಸು ದಾಖಲೆ: ಯಾವುದೇ ಅನುಮತಿಯಿಲ್ಲದೆ ಶನಿವಾರ ಸಿಎಫ್ಐ ಸಂಘಟನೆಯವರು ಗ್ರಾಮಾಂತರ ಠಾಣೆ ಎದುರು ಪ್ರತಿಭಟನೆ ನಡೆಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ 25ಮಂದಿ ಮೇಲೆ ಕೇಸು ಪ್ರಕರಣ ದಾಖಲಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳನ್ನು ಚದುರಿಸಲು ಲಾಠಿಚಾರ್ಜ್: ಪೊಲೀಸರು ಸೇರಿ 5 ಮಂದಿಗೆ ಗಾಯ
ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕಾಲೇಜು ಪ್ರಾಂಶುಪಾಲರು ಹಾಗೂ 3ಮಂದಿ ಪ್ರಾಧ್ಯಾಪಕರ ವಿರುದ್ಧ ದೂರು ನೀಡಲು ನಿರ್ಧರಿಸಿ, ಶನಿವಾರ ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಲು ಆಗಮಿಸಿದಾಗ ಸಿಎಫ್ಐ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದರಿಂದ ಮೂವರು ಪೊಲೀಸರು ಸೇರಿದಂತೆ 5ಮಂದಿಗೆ ಗಾಯವಾಗಿದೆ.
ಮಂಗಳೂರು ಗ್ರಾಮಾಂತರ ಠಾಣೆ ಎಸ್ಐ ಸುಧಾಕರ್, ಎಚ್ಸಿ ಚಂದ್ರಶೇಖರ್, ಕಾನ್ಸ್ಟೇಬಲ್ ವಿನ್ಸೆಂಟ್, ಸಿಎಫ್ಐ ಕಾರ್ಯಕರ್ತರಾದ ಇಝಾಝ್, ಮುಝಮಿಲ್ ಗಾಯಗೊಂಡವರು. ಗಾಯಾಳುಗಳು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದುಕೊಂಡಿದ್ದಾರೆ.







