ಐದರ ಹರೆಯದಲ್ಲೇ ಕಾಲು ಕಳೆದುಕೊಂಡಿದ್ದ ಮಾರಿಯಪ್ಪನ್

ಚೆನ್ನೈ, ಸೆ.10: ವಿಕಲಚೇತನರ ರಿಯೋ ಪ್ಯಾರಾಲಿಂಪಿಕ್ಸ್ನ ಹೈಜಂಪ್ನಲ್ಲಿ ಐತಿಹಾಸಿಕ ಸಾಧನೆಯೊಂದಿಗೆ ಚಿನ್ನ ಜಯಿಸಿದ ತಮಿಳುನಾಡಿನ ಮಾರಿಯಪ್ಪನ್ ತಂಗವೇಲು ಬಡತನದ ನಡುವೆಯೂ ಕಠಿಣ ಪರಿಶ್ರಮದ ಮೂಲಕ ಎತ್ತರಕ್ಕೆ ಬೆಳೆದ ಅಪ್ಟಟ ಗ್ರಾಮೀಣ ಪ್ರತಿಭೆ.
ಸೇಲಮ್ನಿಂದ 50 ಕಿ.ಮೀ ದೂರ ಪೆರಿಯವಡಗಂಪಟ್ಟಿ ತಂಗವೇಲು ಅವರ ಹುಟ್ಟೂರು. ಅದೊಂದು ದಿನ ಐದರ ಹರೆಯದ ತಂಗವೇಲು ಮನೆಯ ಸಮೀಪ ಆಡುತ್ತಿದ್ದಾಗ ಸರಕಾರಿ ಬಸ್ ಅವರಿಗೆ ಢಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ಮಾರಿಯಪ್ಪನ್ ತಂಗವೇಲು ಕಾಲೊಂದನ್ನು ಕಳೆದುಕೊಂಡಿದ್ದರು. ಅಂದಿನಿಂದ ಇಂದಿನ ತನಕ ನ್ಯಾಯಾಲಯದಲ್ಲಿ ಪರಿಹಾರಕ್ಕಾಗಿ ಅವರ ಕುಟುಂಬ ಹೋರಾಟ ನಡೆಸುತ್ತಿದ್ದರೂ ನ್ಯಾಯ ಸಿಕ್ಕಿಲ್ಲ.
ಮಾರಿಯಪ್ಪನ್ ತಂಗವೇಲು ಕಾಲು ಕಳೆದುಕೊಂಡಿದ್ದರೂ ಹೋರಾಟ ನಿಲ್ಲಿಸಲಿಲ್ಲ. 21ರ ಹರೆಯದ ಮಾರಿಯಪ್ಪನ್ ರಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನ ಪಡೆದು ಇತಿಹಾಸ ಬರೆದಿದ್ದಾರೆ. ಅವರು ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನ ಜಯಿಸಿದ ಭಾರತದ ಮೂರನೆ ಅಥ್ಲೀಟ್.
ದೇವೇಂದ್ರ ಜಝಾರಿಯಾ ಅವರು 2004ರ ಅಥೆನ್ಸ್ ಪ್ಯಾರಾಲಿಂಪಿಕ್ಸ್ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದುಕೊಂಡಿದ್ದರು. ಅವರು ಈ ಬಾರಿಯ ಪ್ಯಾರಾಲಿಂಪಿಕ್ಸ್ನಲ್ಲೂ ಪದಕದ ಬೇಟೆ ನಡೆಸಲಿದ್ದಾರೆ.
1972ರಲ್ಲಿ ಮುರಳೀಕಾಂತ್ ಪೆಟ್ಕರ್ ಪ್ಯಾರಾಲಿಂಪಿಕ್ಸ್ನ 50 ಮೀಟರ್ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ಚಿನ್ನಕ್ಕೆ ಮುತ್ತಿಟ್ಟಿದ್ದರು.
ಪ್ಯಾರಾಲಿಂಪಿಯನ್ ಮಾರಿಯಪ್ಪನ್ ತಂಗವೇಲು ಕಡು ಬಡತನದಲ್ಲಿ ಬೆಳೆದವರು. ಕಠಿಣ ಪರಿಶ್ರಮದ ಮೂಲಕ ಅನನ್ಯ ಸಾಧನೆ ಮಾಡಿದ್ದಾರೆ. ಚೆನ್ನೈನಿಂದ 340 ಕಿ.ಮೀ ದೂರದ ಪೆರಿವಡಗಂಪಟ್ಟಿಯಲ್ಲಿ ಬೆಳೆದ ತಂಗವೇಲು ಅವರು ಈ ಮಟ್ಟಕ್ಕೆ ಬೆಳೆಯಲು ತಾಯಿ ಸರೋಜ ಅವರು ನೀಡಿರುವ ಪ್ರೋತ್ಸಾಹ ಕಾರಣವಾಗಿದೆ.
ಸರೋಜ ಸೈಕಲ್ನಲ್ಲಿ ತರಕಾರಿ ಮಾರುತ್ತಾ ಮಗನ ಕ್ರೀಡಾ ಬದುಕನ್ನು ಕಟ್ಟಲು ಪ್ರೋತ್ಸಾಹ ನೀಡಿದ್ದರು. ಮಾರಿಯಪ್ಪನ್ ತಂದೆ, ಪತ್ನಿ ಮತ್ತು ಮಕ್ಕಳನ್ನು ತೊರೆದು ಹೋಗಿ 10 ವರ್ಷ ಕಳೆಯಿತು. ಮಾರಿಯಪ್ಪನ್ ಶಾಲಾ ಕಾಲೇಜು ಹಂತದಲ್ಲಿ ಹಲವು ಪದಕಗಳನ್ನು ಜಯಿಸಿದ್ದರು. ಕಳೆದ ವರ್ಷ ಬಿಬಿಎ ಪದವಿ ಪೂರೈಸಿದ್ದ ತಂಗವೇಲು ಕೆಲಸದ ಹುಡುಕಾಟದಲ್ಲಿದ್ದರು.
ಮಾರಿಯಪ್ಪನ್ ತಂಗವೇಲು ಅವರು ಕೋಚ್ ಬೆಂಗಳೂರಿನ ಸತ್ಯನಾರಾಯಣ ಅವರಿಂದ ತರಬೇತಿ ಪಡೆದು ರಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಸ್ಪರ್ಧಿಸಲು ಟಿಕೆಟ್ ಗಿಟ್ಟಿಸಿಕೊಂಡಿದ್ದರು. 14ರ ಹರೆಯದಲ್ಲಿ ಸ್ಪರ್ಧಾ ಕಣಕ್ಕಿಳಿದಿದ್ದರು. ಮೊದಲ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು. ಸತ್ಯ ನಾರಾಯಣ ಕೋಚ್ ಸಿಕ್ಕಿದ ಬಳಿಕ ಓರ್ವ ಉತ್ತಮ ಅಥ್ಲೀಟ್ ಆಗಿ ರೂಪುಗೊಂಡರು. 2013ರಲ್ಲಿ ಅವರು ನ್ಯಾಶನಲ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದರು.
2015ರಲ್ಲಿ ಸೀನಿಯರ್ ಲೆವೆಲ್ ಸ್ಪರ್ಧೆಯಲ್ಲಿ ನಂ.1ಸ್ಥಾನಕ್ಕೇರಿದ್ದರು. ಐಪಿಸಿ ಟ್ಯುನೀಶಿಯಾ ಗ್ರಾನ್ ಪ್ರಿ ಟೂರ್ನಿಯಲ್ಲಿ 1.78 ಮೀಟರ್ ಸಾಧನೆಯೊಂದಿಗೆ ಚಿನ್ನ ಪಡೆದು ಪ್ಯಾರಾಲಿಂಪಿಕ್ಸ್ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು. ‘‘ ಇಂದು ಬೆಳಗ್ಗಿನ ಜಾವ 2:52ಕ್ಕೆ ಅಣ್ಣ ಪದಕ ಜಯಿಸಿದ ವಿಚಾರ ಟಿವಿ ಮೂಲಕ ಗೊತ್ತಾಯಿತು. ನನ್ನ ಅಣ್ಣ ವೇದಿಕೆಯಲ್ಲಿ ಚಿನ್ನದ ಪದಕ ಧರಿಸಿರುವುದನ್ನು ನೋಡಿದೆ. ಆತ ಚಿನ್ನ ಗೆಲ್ಲುವ ವಿಶ್ವಾಸ ನಮಗಿತ್ತು. ಅವರು ಪದಕ ಗೆಲ್ಲುತ್ತಾರೆಂದು ಕೋಚ್ ಭರವಸೆ ನೀಡಿದ್ದರು ’’ ಎಂದು ಮಾರಿಯಪ್ಪನ್ ತಮ್ಮ ಕುಮಾರ್ ಹೇಳಿದ್ದಾರೆ.
ಮಾರಿಯಪ್ಪನ್ ಚಿನ್ನ ಜಯಿಸಿದ ಬೆನ್ನಲ್ಲೇ ಕುಟುಂಬ ಸದಸ್ಯರು ಪಟಾಕಿ ಸಿಡಿಸಿ ಖುಷಿಪಟ್ಟರು. ಸುದ್ದಿ ತಿಳಿದು ಅವರ ಮನೆಗೆ ಆಗಮಿಸಿದ್ದ ಊರಿನ ಮಂದಿಗೆ ಸಿಹಿ ತಿಂಡಿ ವಿತರಿಸಿದರು. ತಿಂಗಳಿಗೆ 500 ರೂ. ಬಾಡಿಗೆಯ ಮನೆಯಲ್ಲಿ ಮಾರಿಯಪ್ಪನ್ ಕುಟುಂಬ ವಾಸವಾಗಿದೆ.
‘‘ನನ್ನ ಮಗನಿಗೆ ಪ್ರತಿಯೊಬ್ಬರು ಪ್ರೋತ್ಸಾಹ ನೀಡಿದ ಕಾರಣದಿಂದಾಗಿ ಆತ ನಿಗೆ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನ ಗೆಲ್ಲಲು ಸಾಧ್ಯವಾಗಿದೆ’’ ಎಂದು ತಾಯಿ ಸರೋಜ ಅಭಿಪ್ರಾಯಪಟ್ಟಿದ್ದಾರೆ. ದಿನಕ್ಕೆ 150 ರೂ.ಗಳಿಂದ 200ರೂ. ತನಕ ಬರುವ ಆದಾಯದಲ್ಲಿ ಸರೋಜ ಅವರು ಮಾರಿಯಪ್ಪನ್ ಸೇರಿದಂತೆ ನಾಲ್ವರು ಮಕ್ಕಳ ಬದುಕು ರೂಪಿಸುತ್ತಿದ್ದಾರೆ.
ಮಾರಿಯಪ್ಪನ್ ಸಾಧನೆಯನ್ನು ಗುರುತಿಸಿ ಸರಕಾರ ಅವರಿಗೆ ನೌಕರಿ ನೀಡಿಬಹುದೆಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಕುಮಾರ್ ಹೇಳಿದ್ದಾರೆ.
ಜಯಲಲಿತಾ 2 ಕೋಟಿ ರೂ. ಬಹುಮಾನ ಘೋಷಣೆ: ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಜಯಿಸಿದ ಮಾರಿಯಪ್ಪನ್ ತಂಗವೇಲು ಅವರಿಗೆ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು 2 ಕೋಟಿ ರೂ. ನೆರವು ಘೋಷಿಸಿದ್ದಾರೆ.
ಪೋಲಿಯೊವನ್ನು ಮೆಟ್ಟಿನಿಂತು ಕಂಚಿಗೆ ಕೊರಳೊಡ್ಡಿದ ವರುಣ್ ಸಿಂಗ್
ಹೊಸದಿಲ್ಲಿ, ಸೆ.10: ಇತ್ತೀಚೆಗೆ ಕೊನೆಗೊಂಡಿದ್ದ ರಿಯೋ ಒಲಿಂಪಿಕ್ಸ್ ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಭಾರತ ಪ್ಯಾರಾಲಿಂಪಿಕ್ಸ್ನಲ್ಲಿ ಶುಕ್ರವಾರ ಐತಿಹಾಸಿಕ ಸಾಧನೆ ಮಾಡಿದೆ. ಟಿ-42 ಹೈಜಂಪ್ ಸ್ಪರ್ಧೆಯಲ್ಲಿ ಮಾರಿಯಪ್ಪನ್ ತಂಗವೇಲು ಚಿನ್ನದ ಪದಕವನ್ನು ಜಯಿಸಿದ್ದರೆ, ಪ್ಯಾರಾ ಅಥ್ಲೀಟ್ ವರುಣ್ ಸಿಂಗ್ ಕಂಚಿನ ಪದಕವನ್ನು ಜಯಿಸಿ ಭಾರತದ ಕ್ರೀಡಾಸ್ಫೂರ್ತಿಯನ್ನು ಹೆಚ್ಚಿಸಿದರು.
ಚಿಕ್ಕಂದಿನಲ್ಲಿಯೇ ಪೊಲೀಯೊ ಪೀಡಿತರಾಗಿದ್ದ ವರುಣ್ಗೆ ಕಂಚಿನ ಪದಕ ಗೆದ್ದುಕೊಂಡಿದ್ದು ಮಹತ್ವದ ಸಾಧನೆಯಾಗಿದೆ. ಗ್ರೇಟರ್ನೊಯ್ಡದಲ್ಲಿ ಜನಿಸಿ ಬಾಲ್ಯವನ್ನು ಕಳೆದಿದ್ದ ಅವರು ಶಾಲಾ ದಿನಗಳಲ್ಲೇ ಅಥ್ಲೀಟ್ನಲ್ಲಿ ಮಿಂಚುಹರಿಸಿದ್ದರು.
ಬಾಲ್ಯದಲ್ಲಿ ಹೈಜಂಪ್ನಲ್ಲಿ ಉತ್ತಮ ಸಾಧನೆ ತೋರಿದ್ದ ವರುಣ್ ಕಳೆದ ಎರಡು ವರ್ಷಗಳಲ್ಲಿ ಪ್ರಮುಖ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಐಪಿಸಿ ಅಥ್ಲೆಟಿಕ್ಸ್ ಏಷ್ಯಾ-ಒಶಿಯಾನಿಯ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದ ವರುಣ್ ಹೊಸ ಏಷ್ಯಾ ದಾಖಲೆ ನಿರ್ಮಿಸಿದ್ದರು. ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡಿದ್ದ ವರುಣ್ ಸಿಂಗ್ ರಿಯೋ ಪ್ಯಾರಾಲಿಂಪಿಕ್ ಗೇಮ್ಸ್ಗೆ ತೆರಳುವಾಗಲೇ ಭಾರತದ ಪದಕದ ಭರವಸೆಯಾಗಿ ಮೂಡಿಬಂದಿದ್ದರು. ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿ ಕಂಚಿನ ಪದಕವನ್ನು ಜಯಿಸಿರುವ ಅವರು ನಿರಾಸೆ ಮೂಡಿಸಲಿಲ್ಲ
. ತಂಗವೇಲು-ವರುಣ್ಗೆ ಅಭಿನಂದನೆಗಳ ಸುರಿಮಳೆ
ಪ್ಯಾರಾಲಿಂಪಿಕ್ ಗೇಮ್ಸ್ನಲ್ಲಿ ಟಿ-42 ಲಾಂಗ್ಜಂಪ್ನಲ್ಲಿ ಚಿನ್ನದ ಪದಕ ವಿಜೇತ ಮಾರಿಯಪ್ಪನ್ ತಂಗವೇಲು ಹಾಗೂ ಕಂಚಿನ ಪದಕ ವಿಜೇತ ವರುಣ್ ಸಿಂಗ್ ಭಾಟಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯಿಂದ ತೊಡಗಿ ಭಾರತದ ಪರ ಒಲಿಂಪಿಕ್ಸ್ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾರ ತನಕ ಎಲ್ಲ ಕಡೆಗಳಿಂದಲೂ ಅಭಿನಂದನೆಗಳ ಸುರಿಮಳೆಯಾಗಿದೆ.
ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನ ಜಯಿಸಿದ ಮಾರಿಯಪ್ಪನ್ ತಂಗವೇಲು ಹಾಗೂ ಕಂಚು ಜಯಿಸಿದ ವರುಣ್ ಸಿಂಗ್ಗೆ ಅಭಿನಂದನೆಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಒಲಿಂಪಿಕ್ಸ್ನ ಚಿನ್ನದ ಪದಕದ ಕ್ಲಬ್ಗೆ ತಂಗವೇಲು ಅವರನ್ನು ಸ್ವಾಗತಿಸಿದ ಬಿಂದ್ರಾ ಪದಕ ವಿಜೇತ ಇಬ್ಬರೂ ಪ್ಯಾರಾಥ್ಲೀಟ್ಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ರಿಯೋದಲ್ಲಿ ಪುರುಷರ ಹೈಜಂಪ್ನಲ್ಲಿ ಚಿನ್ನ ಜಯಿಸಿದ ಮಾರಿಯಪ್ಪನ್ ತಂಗವೇಲು ಹಾಗೂ ಕಂಚಿನ ಪದಕ ಜಯಿಸಿದ ವರುಣ್ ಸಿಂಗ್ಗೆ ಅಭಿನಂದನೆಗಳು ಎಂದು ಕೇಂದ್ರ ಕ್ರೀಡಾಸಚಿವ ವಿಜಯ್ ಗೋಯೆಲ್ ಹೇಳಿದ್ದಾರೆ.
‘‘ಇಂದು ಇತಿಹಾಸವೊಂದು ನಿರ್ಮಾಣವಾಗಿದೆ. ಯುವ ಅಥ್ಲೀಟ್ಗಳಿಗೆ ಈ ಇಬ್ಬರು ಪ್ರೇರಣಾಶಕ್ತಿಯಾಗಿದ್ದಾರೆ ’’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
‘‘ತಂಗವೇಲು ಹಾಗೂ ಸಿಂಗ್ ಇತರ ಅಥ್ಲೀಟ್ಗಳಿಗೆ ಸ್ಫೂರ್ತಿಯಾಗಿದ್ದಾರೆ. ಭಾರತೀಯ ಕ್ರೀಡೆಯಲ್ಲಿ ಪ್ರೇರಣೆಗೆ ಕಡಿಮೆಯಿಲ್ಲ. ಪದಕ ವಿಜೇತ ಮಾರಿಯಪ್ಪನ್ ತಂಗವೇಲು ಹಾಗೂ ವರುಣ್ ಭಟ್ಟಿಗೆ ಅಭಿನಂದನೆಗಳು’’ ಎಂದು ರಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ವಿಜೇತೆ ಕುಸ್ತಿ ತಾರೆ ಸಾಕ್ಷಿ ಮಲಿಕ್ ಹೇಳಿದ್ದಾರೆ.
‘‘ತಂಗವೇಲು ಹಾಗೂ ಸಿಂಗ್ಗಿಂತಲೂ ಹೆಚ್ಚಿನ ಪ್ರೇರಣೆಯನ್ನು ನಾನು ನೋಡಿಲ್ಲ. ಈ ಇಬ್ಬರಿಗೂ ಅಭಿನಂದನೆಗಳು. ಕಮಾನ್ ಇಂಡಿಯಾ’’ ಎಂದು ಬಾಲಿವುಡ್ನ ಹಿರಿಯ ನಟ ಅಮಿತಾಭ್ ಬಚ್ಚನ್ ಟ್ವೀಟ್ ಮಾಡಿದ್ದಾರೆ.
ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್, ಹಾಕಿಯ ಮಾಜಿ ನಾಯಕ ವಿರೇನ್ ರಸ್ಕಿನ್ಹಾ,ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ವಿಜೇತ ಬಾಕ್ಸರ್ ಮೇರಿ ಕೋಮ್ ಇಬ್ಬರೂ ಅಥ್ಲೀಟ್ಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ವಿಶ್ವ ದಾಖಲೆ ನಿರ್ಮಿಸಿದ ಸಾಂಗ್
ರಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಪುರುಷರ 100 ಮೀ. ಬಟರ್ಫ್ಲೈ ಎಸ್8 ಸ್ಪರ್ಧೆಯಲ್ಲಿ ವಿಶ್ವ ದಾಖಲೆಯೊಂದನ್ನು ಮುರಿದ ಚೀನಾದ ಸಾಂಗ್ ಮಯೊಡಂಗ್ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.ಶುಕ್ರವಾರ ಇಲ್ಲಿ ನಡೆದ ಸ್ಪರ್ಧೆಯಲ್ಲಿ 59.19 ಸೆಕೆಂಡ್ನಲ್ಲಿ ಗುರಿ ತಲುಪಿದ ಸಾಂಗ್ 2010ರಲ್ಲಿ ಆಸ್ಟ್ರೇಲಿಯದ ಪೀಟರ್ ಲೀಕ್(1:00.45) ನಿರ್ಮಿಸಿದ್ದ ವಿಶ್ವ ದಾಖಲೆಯನ್ನು ಅಳಿಸಿಹಾಕಿದರು. 100 ಮೀ. ಈಜುಸ್ಪರ್ಧೆಯ ಮೂರೂ ಪದಕಗಳು ಚೀನಾದ ಅಥ್ಲೀಟ್ಗಳ ಪಾಲಾದವು. ಕ್ಯೂ ಹೈಜಿಯಾವೊ ಒಂದು ನಿಮಿಷ, 0.08 ಸೆಕೆಂಡ್ನಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಬಾಚಿಕೊಂಡರೆ, ಯಾಂಗ್ ಗ್ವಾಂಗ್ಲಾಂಗ್(1:01.18 ಸೆ.) ಕಂಚಿನ ಪದಕವನ್ನು ಜಯಿಸಿದರು.ಸಾಂಗ್ಗೆ ಎಂಟನೆ ವರ್ಷದಲ್ಲಿ ವಿದ್ಯುತ್ ಶಾಕ್ನಿಂದ ಬಲಗೈ ಅಂಗವಿಕಲವಾಗಿತ್ತು.







