ಪತಿಯಿಂದ ಬರ್ಬರ ಥಳಿತ: ನೊಂದ ಪತ್ನಿಯ ಅತ್ಮಹತ್ಯೆ
ಗೀಸರ್ ಚಾಲೂ ಇರಿಸಿದ್ದೇ ‘ಅಪರಾಧ’
ಹೈದರಾಬಾದ್, ಸೆ.13: ಕುಟುಂಬ ಸದಸ್ಯರ ಮುಂದೆ ತಮಗೆ ಅಮಾನವೀಯ ಹಿಂಸೆ ನೀಡಿದ ಗಂಡನ ವರ್ತನೆಯನ್ನು ಸಹಿಸದೆ ಇಬ್ಬರು ಮಕ್ಕಳ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರವಿವಾರ ಮುಂಜಾನೆ ನಡೆದಿದೆ.
ಘಟನೆಯು ಸೋಮವಾರ ಬೆಳಕಿಗೆ ಬಂದಿದ್ದು, ಸೈದಾಬಾದ್ ಪ್ರದೇಶದ ಪುಸಲಬಸ್ತಿ ಕಾಲನಿಯನ್ನು ಆಘಾತಗೊಳಿಸಿದೆ.
ಕೆಲವು ಹೆಚ್ಚುವರಿ ನಿಮಿಷಗಳ ಕಾಲ ಗೀಸರನ್ನು ಚಾಲೂ ಸ್ಥಿತಿಯಲ್ಲಿಟ್ಟುದಕ್ಕಾಗಿ ಪತಿ ಮೋಹನ್ ಎಂಬಾತ ತನ್ನನ್ನು ಸ್ನಾನದ ಕೋಣೆಯಿಂದ ನಗ್ನ ಸ್ಥಿತಿಯಲ್ಲಿ ಹೊರಗೆಳೆದು ಬೆಳೆದ ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರೆದುರೇ ಥಳಿಸಿದನೆಂದು 31ರ ಹರೆಯದ ಶಿಕ್ಷಣ ಸ್ನಾತಕೋತ್ತರ ಪದವಿಧರೆ ಸುಶ್ರತಾ ಎಂಬಾಕೆ ಆರೋಪಿಸಿದ್ದಳು.
ತನ್ನ ಮಾವನು ಅದಕ್ಕೆ ಬೆಂಬಲ ನೀಡಿದ್ದು, ಯಾರೊಬ್ಬರು ತನ್ನ ರಕ್ಷಣೆಗೆ ಬರಲಿಲ್ಲವೆಂದು ಆರೋಪಿಸಿ ಆಕೆ ತನ್ನ ಸಹೋದರನಿಗೆ ಸಂದೇಶ ಕಳುಹಿಸಿದ್ದಳು. ಸಂದೇಶ ತಲುಪುತ್ತಲೇ ನಲ್ಗೊಂಡ ಜಿಲ್ಲೆಯ ಸೂರ್ಯ ಪೇಟದಿಂದ ಸುಶ್ರುತಾಳ ತವರು ಮನೆಯವರು ಕರೆ ಮಾಡಿದಾಗ ಅದನ್ನಾಕೆ ಸ್ವೀಕರಿಸಿರಲಿಲ್ಲ. ಬಳಿಕ, ಆಕೆ ಮಲಗುವ ಕೋಣೆಯ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂಬ ವರ್ತಮಾನ ಅವರಿಗೆ ತಲುಪಿತ್ತು.
ಆತ್ಮಹತ್ಯಾ ಪತ್ರ ಪತ್ತೆಯಾಗಿಲ್ಲವಾದರೂ, ಸುಶ್ರುತಾಳ ಹೆತ್ತವರ ದೂರಿನಂತೆ ಪೊಲೀಸರು ಮೋಹನನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.







