ಕೆಸಿಎಫ್ಗೆ ಸೌದಿ ಆರೋಗ್ಯ ಸಚಿವಾಲಯದಿಂದ ಎರಡನೆ ಬಾರಿ ಪ್ರಶಂಸಾ ಪತ್ರ

ಮಕ್ಕಾ, ಸೆ.14: ಹಜ್ ಯಾತ್ರಿಕರ ಸೇವೆಗೈದ ಕೆಸಿಎಫ್ ಕಾರ್ಯಕರ್ತರ ತಂಡಕ್ಕೆ ಸೌದಿ ಮಿನಿಸ್ಟ್ರಿ ಆಫ್ ಹೆಲ್ತ್ ಪ್ರಶಂಸಾ ಪತ್ರ ನೀಡಿದ್ದು, ಕರ್ನಾಟಕದ ಹಜ್ಜಾಜಿಗಳ ಸೇವೆಗಾಗಿ ಸೌದಿ ಸರಕಾರದಿಂದ ಎರಡನೆ ಬಾರಿ ಪ್ರಶಂಸನೀಯ ಪತ್ರ ಪಡೆದುಕೊಂಡ ಏಕೈಕ ಸಂಘಟನೆ ಎಂಬ ಖ್ಯಾತಿಗೆ ಕೆಸಿಎಫ್ ಪಾತ್ರವಾಗಿದೆ.
ಇಂದು ಮಕ್ಕಾದ ಮಿನಾ ಆಸ್ಪತ್ರೆಯಲ್ಲಿ ಕೆಸಿಎಫ್ ಕಾರ್ಯಕರ್ತರು ಸೌದಿ ಸರಕಾರಿ ಅಧಿಕಾರಿಗಳಿಂದ ಪ್ರಶಂಸನೀಯ ಪತ್ರ ಪಡೆದುಕೊಂಡರು.
ಮಕ್ಕಾ ಅಝೀಝಿಯಾದಲ್ಲಿ ಕೆಸಿಎಫ್ ಹಜ್ ವಾಲೇಂಟಿಯರ್ ಕೋರ್ನ ಸಮಾರೋಪ ಸಮಾರಂಭ ನಡೆಯಿತು. ಈ ವೇಳೆ ಆಲ್ ಇಂಡಿಯಾ ಜಂಇಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಮಾತನಾಡಿ, ದೇಶ ವಿದೇಶಗಳಿಂದ ಹಜ್ ನಿರ್ವಹಿಸಲು ಬಂದ ಹಾಜಿಗಳ ಸೇವೆ ಮಾಡಿದ ಕೆಸಿಎಫ್ ಕಾರ್ಯಕರ್ತರ ಕೆಲಸ ಶ್ಲಾಘನೀಯ. ಸುಡುಬಿಸಿಲಿನ ಬೇಗೆಯನ್ನು ಲೆಕ್ಕಿಸದ ಕೆಸಿಎಫ್ ಕಾರ್ಯಕರ್ತರು ಮಕ್ಕಾದ ಮಿನಾ, ಅರಫಾ, ಮುದ್ಸಲಿಫಾದಲ್ಲಿ ಹಾಜಿಗಳ ಸೇವೆ ನಡೆಸಿದ್ದು, ಎಲ್ಲಾ ಕಾರ್ಯಕರ್ತರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಖಲೀಲ್ ತಂಙಳ್ ಮಾತನಾಡಿ, ಕೆಸಿಎಫ್ ಸಂಘಟನೆ ರಚನೆಯಾಗಿ ನಾಲ್ಕು ವರ್ಷಗಳಾಗಿವೆ. ಆದರೆ ಅದರ ಸಾಧನೆ ನಾಲ್ಕು ಶತಮಾನಗಳನ್ನು ಮೀರಿಸುವಂತಿದೆ. ಸುಡುಬಿಸಿಲಿನಲ್ಲಿ ಹಾಜಿಗಳ ಸೇವೆಗೈದ ಕೆಸಿಎಫ್ ಕಾರ್ಯಕರ್ತರ ಸೇವೆ ಶ್ಲಾಘನೀಯ ಎಂದರು.
ಈ ವೇಳೆ ಕೇರಳ ಎಸ್ಸೆಸ್ಸೆಫ್ನ ಉಪಾಧ್ಯಕ್ಷ ಫಾರೂಕ್ ನಈಮೀ, ತುರಾಬ್ ತಂಙಳ್, ಕೆಸಿಎಫ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ, ಕೆಸಿಎಫ್ ಎಚ್.ವಿ.ಸಿ ವ್ಯವಸ್ಥಾಪಕ ಸಲೀಂ ಕನ್ಯಾಡಿ, ಉಮರ್ ಸಖಾಫಿ ಕೊಡಗು, ನಝೀರ್ ಕಾಶಿಪಟ್ಣ ಮತ್ತಿತರರು ಉಪಸ್ಥಿತರಿದ್ದರು







