ಕಾರ್ಮಿಕರಿಗೆ ಅನುಕೂಲವಾಗುವಂತೆ ಸೌಲಭ್ಯ ಒದಗಿಸಲು ಕೇಂದ್ರಕ್ಕೆ ಮನವಿ: ಸಿದ್ದೇಶ್ವರ್

ದಾವಣಗೆರೆ, ಸೆ.15: ಬಡಕಾರ್ಮಿಕರಿಗೆ ಅನುಕೂಲವಾಗುವಂತೆ ಇಎಸ್ಐ ಆಸ್ಪತ್ರೆಗೆ ಹೆಚ್ಚಿನ ಸೌಲಭ್ಯ ಒದಗಿಸಲು ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ತಿಳಿಸಿದರು.
ನಗರದ ನಿಟುವಳ್ಳಿಯಲ್ಲಿ ಮುಕ್ತಾಯ ಹಂತದಲ್ಲಿರುವ ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿ ಹಾಗೂ ಆಸ್ಪತ್ರೆ ಸೌಲಭ್ಯ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿ ಕೊರತೆ ಹಾಗೂ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಅಗತ್ಯ ಯಂತ್ರೋಪಕರಣ ಇಲ್ಲದಿರುವುದು ಗಮನಕ್ಕೆ ಬಂದಿದ್ದು, ಆಸ್ಪತ್ರೆಯಲ್ಲಿ ಅಗತ್ಯವಾಗಿ ಬೇಕಿರುವ ಸೌಲಭ್ಯಗಳ ಪಟ್ಟಿ ಮಾಡಿಕೊಟ್ಟಲ್ಲಿ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳ ಜೊತೆಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.
ಆಸ್ಪತ್ರೆಯಲ್ಲಿ ಡಯಾಲಿಸಿಸ್, ವೆಂಟಿಲೇಟರ್ ವ್ಯವಸ್ಥೆ ಇಲ್ಲ. ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡುವ ಸನ್ನಿವೇಶವಿದೆ. ಸೂಪರ್ ಸ್ಪೆಷಾಲಿಟಿ ಚಿಕಿತ್ಸಾ ಸೌಲಭ್ಯ ಇಲ್ಲ. ಈಗ 19 ಜನ ವೈದ್ಯರಿದ್ದು, ತಜ್ಞ ವೈದ್ಯರು ಸೇರಿದಂತೆ ಇನ್ನೂ 6 ಮಂದಿ ವೈದ್ಯ ಸಿಬ್ಬಂದಿಬೇಕಾಗಿದೆ. ಆಸ್ಪತ್ರೆಯಲ್ಲಿನ ಸ್ವಚ್ಛತೆಯೂ ತೃಪ್ತಿ ತಂದಿಲ್ಲ. ಹಂತ-ಹಂತವಾಗಿ ಇಲ್ಲಿನ ಸಮಸ್ಯೆ ಗಳನ್ನು ಬಗೆಹರಿಸಲು ಅವರು ಸೂಚಿಸಿದರು.
ಬಹುತೇಕ ಬಡ ಕಾರ್ಮಿಕರು ಆಸ್ಪತ್ರೆಗೆ ಬರುವುದರಿಂದ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು. ವೈದ್ಯರು ಸೌಜನ್ಯದಿಂದ ರೋಗಿಗಳ ಆರೈಕೆ ಮಾಡಬೇಕು. ಆಸ್ಪತ್ರೆಗೆ ಸೌಕರ್ಯ ಬೇಕಾದಲ್ಲಿ ನನ್ನ ಗಮನಕ್ಕೆ ತರಬೇಕು. ಕಾರ್ಮಿಕ ಮುಖಂಡರು ಹಾಗೂ ಮಾಧ್ಯಮದವರೂ ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ನಿಗಾ ವಹಿಸಬೇಕು ಎಂದು ಹೇಳಿದರು.
ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಕಾರ್ಮಿಕ ಸಚಿವರಾಗಿದ್ದಾಗ ದಾವಣಗೆರೆಯ ಇಎಸ್ಐ ಆಸ್ಪತ್ರೆ ಮೇಲ್ದರ್ಜೆಗೇರಿಸಿ ಹೊಸ ಕಟ್ಟಡ ಮಂಜೂರು ಮಾಡಲಾಗಿತ್ತು. ಹೊಸದಾಗಿ 50 ಹಾಸಿಗೆಗಳ ಕಟ್ಟಡ ನಿರ್ಮಿಸುವ ಮೂಲಕ ಒಟ್ಟು 100 ಹಾಸಿಗೆಗಳ ಆಸ್ಪತ್ರೆ ಅಭಿವೃದ್ಧಿಗೆ 24 ಕೋಟಿ ರೂ. ಅನುದಾನ ನೀಡಿತ್ತು. ಅದು ಕಡಿಮೆಯಾಗಿದ್ದರಿಂದ ಕೇಂದ್ರ ಬಿಜೆಪಿ ಸರಕಾರ ಇನ್ನೂ ಹೆಚ್ಚುವರಿಯಾಗಿ 6.5 ಕೋಟಿ ರೂ. ಬಿಡುಗಡೆ ಮಾಡಿದೆ. ಇನ್ನೆರಡು ತಿಂಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದ್ದು, ಕೇಂದ್ರ ಹಾಗೂ ರಾಜ್ಯ ಕಾರ್ಮಿಕ ಸಚಿವರನ್ನು ಕರೆಸಿ ಹೊಸ ಆಸ್ಪತ್ರೆ ಉದ್ಘಾಟಿಸಲಾಗುವುದು ಎಂದು ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಮುಖಂಡರಾದ ಎಚ್.ಎನ್. ಶಿವಕುಮಾರ್, ರಮೇಶ್ ನಾಯ್ಕ, ಪ್ರಭು ಕಲ್ಬುರ್ಗಿ, ಪಿ.ಎಸ್. ಜಯಣ್ಣ, ಎ.ವೈ. ಪ್ರಕಾಶ್, ಪಾಲಿಕೆ ಸದಸ್ಯ ಡಿ.ಕೆ.ಕುಮಾರ್, ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಲ್. ಪ್ರಕಾಶ್ ಮತ್ತಿತರರಿದ್ದರು.







