ಕಾಸರಗೋಡು: 15 ಕೆ.ಜಿ. ಶ್ರೀಗಂಧ ಸಹಿತ ಸ್ಕೂಟರ್ ವಶ

ಕಾಸರಗೋಡು, ಸೆ.16: ಅಕ್ರಮವಾಗಿ ಸಾಗಿಸುತ್ತಿದ್ದ 15 ಕೆ.ಜಿ. ಶ್ರೀಗಂಧದ ಕೊರಡುಗಳ ಸಹಿತ ಸ್ಕೂಟರೊಂದನ್ನು ಅಬಕಾರಿದಳದ ಪೊಲೀಸರು ವಶಪಡಿಸಿಕೊಂಡ ಘಟನೆ ಅಡ್ಕಸ್ಥಳ ಸಮೀಪದ ಕುದ್ಕೋಳಿ ಎಂಬಲ್ಲಿ ಸಂಭವಿಸಿದೆ.
ಇಂದು ಬೆಳಗ್ಗಿನ ವೇಳೆ ಅಬಕಾರಿ ಅಧಿಕಾರಿಗಳು ವಾಹನ ತಪಾಸಣೆ ವೇಳೆ ಸ್ಕೂಟರ್ ನಲ್ಲಿ ಶ್ರೀಗಂಧದ ಕೊರಡುಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ. ವಿಟ್ಲ ಕಡೆಯಿಂದ ಸ್ಕೂಟರ್ ನಲ್ಲಿ ಆಗಮಿಸುತ್ತಿದ್ದ ವ್ಯಕ್ತಿಯೋರ್ವ ಪೊಲೀಸರನ್ನು ಕಂಡು ಸ್ಕೂಟರ್ ನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದ. ಅನುಮಾನದ ಹಿನ್ನೆಲೆಯಲ್ಲಿ ಸ್ಕೂಟರ್ ನ್ನು ತಪಾಸಣೆ ನಡೆಸಿದಾಗ ಗೋಣಿಚೀಲವೊಂದರಲ್ಲಿ ತುಂಬಿ ಸಾಗಿಸಲಾಗುತ್ತಿದ್ದ 15 ಕೆ.ಜಿ ಶ್ರೀಗಂಧ ಪತ್ತೆಯಾಗಿದೆ.
ಸ್ಕೂಟರ್ ನಲ್ಲಿ ಲಭಿಸಿದ ದಾಖಲೆಗಳ ಪ್ರಕಾರ ಸ್ಕೂಟರ್ ಅಬ್ದುಲ್ ಹಮೀದ್ ಎಂಬವರಿಗೆ ಸೇರಿದ್ದು ಎನ್ನಲಾಗಿದೆ. ಸ್ಕೂಟರ್ ಮತ್ತು ಶ್ರೀಗಂಧವನ್ನು ವಶಪಡಿಸಿಕೊಂಡ ಪೊಲೀಸರು ಪ್ರಕರಣವನ್ನು ಜಿಲ್ಲಾ ಅಬಕಾರಿ ದಳಕ್ಕೆ ವರ್ಗಾಯಿಸಿದ್ದಾರೆ.
Next Story





