ಒಂದು ಜೀವ ಉಳಿಸಲು ತಮ್ಮ ಜೀವ ಪಣಕ್ಕಿಟ್ಟು ಕಾಲ್ನಡಿಗೆಯಲ್ಲಿ ತಮಿಳುನಾಡು ಪ್ರವೇಶಿಸಿದ ಕರ್ನಾಟಕದ ವೈದ್ಯರು !
‘‘ಎರಡು ದೇಶಗಳ ನಡುವಿನ ಗಡಿ ದಾಟಿದ ಅನುಭವವಾಯಿತು’’

ಬೆಂಗಳೂರು, ಸೆ.17: ಬುಧವಾರ ರಾತ್ರಿ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಕಾವಲಿದ್ದ ಪೊಲೀಸ್ ಸಿಬ್ಬಂದಿಗೊಂದು ಆಶ್ಚರ್ಯ ಕಾದಿತ್ತು. ಅದಾಗಲೇ ಒಂದು ಗಂಟೆಯಾಗಿತ್ತು. ನಾಲ್ಕು ವೈದ್ಯರ ತಂಡವೊಂದು ಆ್ಯಂಬುಲೆನ್ಸ್ ಒಂದರಿಂದ ಕೆಳಗಿಳಿದು ಗಾಲಿ ಕುರ್ಚಿಯಲ್ಲಿದ್ದ ರೋಗಿಯೊಬ್ಬರೊಂದಿಗೆ ತಮ್ಮ ಜೀವವನ್ನೇ ಪಣಕ್ಕಿಟ್ಟು ಕಾಲ್ನಡಿಗೆಯಲ್ಲಿ ತಮಿಳುನಾಡಿನತ್ತ ನಡೆದಿದ್ದರು.
ಬೆಂಗಳೂರಿನಲ್ಲಿರುವ ಮಣಿಪಾಲ್ ಹಾಸ್ಪಿಟಲ್ ಇಲ್ಲಿನ ಲಿವರ್ ಟ್ರಾನ್ಸ್ ಪ್ಲಾಂಟ್ ತಂಡನಾಗ್ಪುರದ 55 ವರ್ಷದ ಡಯಾಬಿಟೀಸ್ ರೋಗಿಯೊಬ್ಬರ ಜೀವವುಳಿಸಲು ನಿರ್ಧರಿಸಿದಾಗಕಾವೇರಿ ಹಿಂಸಾಚಾರದ ಹಿನ್ನೆಲೆಯಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿತ್ತು. ಈ ರೋಗಿ ಅಂಗ ಕಸಿಗಾಗಿ ಕಳೆದ ಎರಡೂವರೆ ವರ್ಷಗಳಿಂದ ಕಾದಿದ್ದರು. ಇಲ್ಲಿ ಇನ್ನೊಂದು ಕುತೂಹಲಕಾರಿ ಅಂಶವೆಂದರೆ ಎರಡೂ ರಾಜ್ಯಗಳ ನಡುವೆ ಕಾವೇರಿ ವಿಚಾರದಲ್ಲಿ ಉದ್ವಿಗ್ನ ವಾತಾವರಣವಿದ್ದ ಹೊರತಾಗಿಯೂ ತಮಿಳುನಾಡಿನ ಕುಟುಂಬವೊಂದು ಅಂಗದಾನ ಮಾಡಲು ನಿರ್ಧರಿಸಿತ್ತು.
ಅಂಗ ಕಸಿ ಮಾಡುವ ವೈದ್ಯರ ತಂಡದ ನೇತೃತ್ವ ವಹಿಸಿದ್ದ ಕನ್ಸಲ್ಟೆಂಟ್ ಹೆಪಟಾಲಜಿಸ್ಟ್ ಹಾಗೂ ಮಣಿಪಾಲ್ ಹಾಸ್ಪಿಟಲ್ ಇಲ್ಲಿನ ಲಿವರ್ ಟ್ರಾನ್ಸ್ ಪ್ಲಾಂಟೇಶನ್ ವಿಭಾಗದ ಮುಖ್ಯಸ್ಥರೂ ಆಗಿರುವ ಡಾ.ಎ.ಒಲಿಥ್ ಸೆಲ್ವನ್ ಅವರ ಮಾತಿನಲ್ಲಿಯೇ ಈ ಗಡಿ ದಾಟುವ ಅನುಭವವನ್ನು ಕೇಳಿ. ‘‘ತಮಿಳುನಾಡಿನಿಂದ ಅಂಗ ದಾನ ಮಾಡಲುಕುಟುಂಬವೊಂದು ನಿರ್ಧರಿಸಿದಾಗ ಎರಡೂ ರಾಜ್ಯಗಳ ನಡುವಿನ ಕಾವೇರಿ ವಿಚಾರದ ಕಹಿ ಸಂಬಂಧವನ್ನು ಪರಿಗಣಿಸಿ ನಾವು ಈ ಆಫರ್ ನಿರಾಕರಿಸಬಹುದಾಗಿತ್ತು. ಆದರೆ ಹಾಗೆ ಮಾಡಿದ್ದರೆ ನಾವು ರೋಗಿಯೊಬ್ಬರ ಜೀವವನ್ನು ಉಳಿಸಲು ಸಾಧ್ಯವಾಗುತ್ತಿರಲಿಲ್ಲ. ಕರ್ನಾಟಕ-ತಮಿಳುನಾಡು ಗಡಿ ತಲುಪುತ್ತಿದ್ದಂತೆ ನಾವು ಗಾಲಿಕುರ್ಚಿಯನ್ನು ಆ್ಯಂಬುಲೆನ್ಸ್ನಿಂದ ಹೊರತಂದು ಅದರಲ್ಲಿ ರೋಗಿಯನ್ನು ಕುಳ್ಳಿರಿಸಿ ಸುಮಾರು ಒಂದು ಕಿ.ಮೀ. ದೂರ ನಡೆದು ಗಡಿ ದಾಟಿ ಮತ್ತೆ ತಮಿಳುನಾಡು ರಿಜಿಸ್ಟ್ರೇಶನ್ ಆ್ಯಂಬುಲೆನ್ಸ್ ಸಹಾಯ ಪಡೆದವು. ಆ ಅರ್ಧಗಂಟೆಗಳ ನಡಿಗೆ ಮುಗಿಯುವುದೇ ಇಲ್ಲವೇನೋ ಎಂದು ನಮಗನಿಸುತ್ತಿತ್ತು. ಎರಡು ದೇಶಗಳ ಗಡಿ ದಾಟಿದ ಅನುಭವ ನಮಗಾಗಿತ್ತು’’ ಎಂದು ಅವರು ವಿವರಿಸುತ್ತಾರೆ.
ತಂಡ ಆಸ್ಪತ್ರೆಗೆ ತಲುಪಿದಾಗ ಮುಂಜಾವು 3 ಗಂಟೆ. ಮುಂದೆ 12 ಗಂಟೆಗಳ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಯಿತು. ಅಂಗದಾನ ಪಡೆದ ರೋಗಿ ಈಗ ಗುಣಮುಖರಾಗುತ್ತಿದ್ದಾರೆ ಎಂದು ಡಾ.ಒಲಿಥ್ ಸೆಲ್ವನ್ ಹೇಳಿದ್ದಾರೆ.







