ಆರೋಗ್ಯ ಇಲಾಖೆಯ ಅಭಿವೃದ್ಧಿಗೆ 100 ಕೋಟಿ ರೂ. ಮಂಜೂರು: ಸಚಿವ ದೇಶಪಾಂಡೆ
ಮೇಲ್ದರ್ಜೆಗೇರಿಸಿದ ತಾಲೂಕು ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆ

ಮುಂಡಗೋಡ, ಸೆ.18: ವೈದ್ಯರಲ್ಲಿ ಮತ್ತು ಶಿಕ್ಷಕರಲ್ಲಿ ಸೇವೆ ಮಾಡುವ ಮನೋಭಾವನೆ ಇರಬೇಕು. ವೈದ್ಯ, ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು. ಈ ಸೇವೆ ಮಾಡಲು ಅವಕಾಶ ಕೊಟ್ಟಿದ್ದು ಆ ದೇವರು ಕೊಟ್ಟ ವರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. 100 ಹಾಸಿಗೆ ಮೇಲ್ದರ್ಜೆಗೇರಿಸಿದ ತಾಲೂಕು ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಜನ್ಮದಲ್ಲಿ ಹುಟ್ಟಿ ಬರುವುದೇ ಒಂದು ಪುಣ್ಯ. ಮಾನವನಾಗಿ ಹುಟ್ಟಿ, ಮಾನವನಾಗಿ ಇದ್ದು ಒಳ್ಳೆಯ ಗುಣವನ್ನು ಹೊಂದಿ, ಸೇವೆ ಮಾಡುವ ಮನೋಭಾವನೆಯನ್ನು ಇಟ್ಟುಕೊಳ್ಳಬೇಕು. ಈ ತಾಲೂಕಿನ ಜನತೆ ನೀಡಿದ ಬೆಂಬಲದ ಪರಿಣಾಮವಾಗಿ ನಾನು ಇಂದು ಈ ಸಚಿವ ಸ್ಥಾನದಲ್ಲಿ ಇದ್ದೇನೆ. ಇಲ್ಲಿನ ಮತದಾರರು 25 ವರ್ಷಗಳ ಕಾಲ ನನ್ನನ್ನು ಚುನಾಯಿಸಿ ವಿಧಾನಸಭೆಗೆ ಕಳುಹಿಸಿದ್ದಾರೆ. ಈ ಆಸ್ಪತ್ರೆಯಿಂದ ಇಲ್ಲಿನ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಜಿಲ್ಲೆಯ ಆರೋಗ್ಯ ಇಲಾಖೆಯ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ ತಂದಿದ್ದೇನೆ. ಈವರೆಗೂ ಇಷ್ಟು ಅನುದಾನವನ್ನು ತರಲು ಯಾರಿಂದಲೂ ಸಾಧ್ಯವಾಗಿಲ್ಲ. ಸರಕಾರ ವೈದ್ಯರ ವೇತನವನ್ನು ಹೆಚ್ಚಿಸಿದರೂ ಕೂಡ ವೈದ್ಯರು ಸರಕಾರಿ ಸೇವೆಗೆ ಬರಲು ಹಿಂದೇಟು ಹಾಕುತ್ತಿರುವುದು ವಿಷಾದನೀಯ ಎಂದರು.
ಕೆಎಲ್ಇ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ಹೊಂದಿದೆ. ಈ ಸಂಸ್ಥೆ 1 ಲಕ್ಷಕ್ಕಿಂತ ಹೆಚ್ಚು ಜನರಿಗೆ ಉಚಿತ ಆರೋಗ್ಯ ತಪಾಸಣೆ ಮಾಡುವ ಗುರಿ ಹೊಂದಿದೆ. ಈ ಪೈಕಿ 80ರಿಂದ 85 ಸಾವಿರ ಜನರಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ. ಆರೋಗ್ಯ ತಪಾಸಣೆಯ ನಂತರ ಐದು ದಿನಗಳ ಕಾಲ ಔಷಧೋಪಚಾರ ಕೂಡ ನೀಡಲಾಗುತ್ತದೆ. ಕೆಎಲ್ಇ ಸಂಸ್ಥೆಯ ಈ ಸಮಾಜಮುಖಿ ಕಾರ್ಯಕ್ಕೆ ನಾನೂ ಕೂಡ ಸಹಕಾರ ನೀಡುವುದರೊಂದಿಗೆ ಬೆಂಬಲ ನೀಡುತ್ತೇನೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆ ಪ್ರಯುಕ್ತ ಅವರಿಗೆ ಶುಭಹಾರೈಸಿ, ಕಾವೇರಿ ವಿವಾದ ಇತ್ಯರ್ಥಕ್ಕೆ ನರೇಂದ್ರ ಮೋದಿ ಆಸಕ್ತಿ ವಹಿಸುವಂತಾಗಲಿ ಎಂದರು.
ವೇದಿಕೆಯಲ್ಲಿ ಮುಂಡಗೋಡ ಪಟ್ಟಣಕ್ಕೆ 9 ಕೋಟಿ ರೂ. ವೆಚ್ಚದಲ್ಲಿ 24x7 ಕುಡಿಯುವ ನೀರು ಒದಗಿಸುವ ಕಾಮಗಾರಿಗೆ ಚಾಲನೆ ನೀಡಿದರು. ಸಾಲಗಾಂವ ಗ್ರಾಮದಲ್ಲಿ ನಿರ್ಮಿಸಲು ಉದ್ಧೇಶಿಸಿರುವ ಡಿಪ್ಲೊಮಾ ಕಾಲೇಜು ಕಟ್ಟಡ ಕಾಮಗಾರಿ ಮತ್ತು ಪಾಳಾ ಗ್ರಾಮದ ಶಾಲಾ ನೂತನ 6 ಕೊಠಡಿ ಮತ್ತು ಅಕ್ಷರದಾಸೋಹ ಕೊಠಡಿಯನ್ನು ಉದ್ಘಾಟಿಸಿದರು.
ಕೆಎಲ್ಇ ಸಂಸ್ಥೆಯ ಶತಮಾನೋತ್ಸವ ಆಚರಣೆ ಅಂಗವಾಗಿ ಕೆಎಲ್ಇ ವಿಶ್ವವಿದ್ಯಾನಿಲಯ ಜವಾಹರಲಾಲ್ ನೆಹರೂ ವೈದ್ಯಕೀಯ ಮಹಾವಿದ್ಯಾಲಯ, ಡಾ. ಪ್ರಭಾಕರ ಕೋರೆ ಆಸ್ಪತ್ರೆ, ಬೆಳಗಾವಿ ಹಾಗೂ ಕೆನರಾ ಬ್ಯಾಂಕ್ ದೇಶಪಾಂಡೆ ರುಡ್ಸೆಟ್ ಹಳಿಯಾಳ ಇವರ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ಜನ ಸರದಿ ಸಾಲಿನಲ್ಲಿ ನಿಂತು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಶಾಸಕ ಶಿವರಾಮ ಹೆಬ್ಬಾರ, ಜಿಲ್ಲಾ ಡಿಎಚ್ಒ ಡಾ. ಅಶೋಕ್ ಕುಮಾರ್, ವಿಭಾಗ ಕಾರ್ಯನಿರ್ವಾಹಕ ಅಭಿಯಂತರ ಎಸ್.ಎಸ್.ಪಾಳೆಗಾರ, ಶಿರಶಿ ಎ.ಸಿ ರಾಜು ಮೊಗವೀರ, ಮಾಜಿ ಶಾಸಕ ವಿ.ಎಸ್.ಪಾಟೀಲ, ಜಿಪಂ ಸದಸ್ಯರಾದ ಎಲ್.ಟಿ.ಪಾಟೀಲ, ರವಿಗೌಡ ಪಾಟೀಲ, ಜಯಮ್ಮ ಹಿರೇಹಳ್ಳಿ, ತಾಪಂ ಅಧ್ಯಕ್ಷೆ ದ್ರಾಕ್ಷಾಯಿಣಿ ಸುರಗೀಮಠ, ಉಪಾಧ್ಯಕ್ಷ ಕೃಷ್ಣಮೂರ್ತಿ ನಾಡಿಗ, ಪಪಂ ಅಧ್ಯಕ್ಷ ರಫೀಕ್ ಇನಾಮದಾರ, ಉಪಾಧ್ಯಕ್ಷ ಫಕೀರಪ್ಪ ಅಂಟಾಳ, ಪಪಂ ಸರ್ವಸದಸ್ಯರು, ಜನಪ್ರತಿನಿಧಿಗಳು, ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.







