ಸಮುದಾಯ ಭವನ ಸರ್ವರಿಗೂ ಸದುಪಯೋಗವಾಗಲಿ: ಶಾಸಕ ಬಿ.ಬಿ.ನಿಂಗಯ್ಯ
ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನೆ

ಚಿಕ್ಕಮಗಳೂರು, ಸೆ.18: ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣವಾಗಿರುವ ಸಮುದಾಯ ಭವನಗಳು ಸ್ಥಳೀಯ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಿ ಸರ್ವಜನಾಂಗಕ್ಕೂ ಸದು ಪಯೋಗವಾದಾಗ ಯೋಜನೆ ಫಲಪ್ರದವಾಗುತ್ತದೆ ಎಂದು ಶಾಸಕ ಬಿ.ಬಿ. ನಿಂಗಯ್ಯ ತಿಳಿಸಿದ್ದಾರೆ.
ಅವರು ರವಿವಾರ ತಾಲೂಕಿನ ತೊಂಡವಳ್ಳಿ ಮತ್ತು ನಂದಿಕೆ ರೆಯಲ್ಲಿ 20ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಅಂಬೇಡ್ಕರ್ ಸಮುದಾಯ ಭವನಗಳನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮದ ಸಾರ್ವಜನಿಕ ಸ್ಥಳಗಳು ಸ್ವಚ್ಛತೆಯಿಂದ ಕೂಡಿದಾಗ ಆರೋಗ್ಯ ವೃದ್ಧ್ದಿಗೆ ಸಹಕಾರಿಯಾಗುತ್ತದೆ. ಸಮುದಾಯ ಭವನಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಒಗ್ಗೂಡಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಜಿಲ್ಲೆ, ರಾಜ್ಯಗಳಿಗೆ ಪರಿಚಯಿಸುವ ಮೂಲಕ ಸಹಕಾರಿಯಾಗಬೇಕು ಎಂದರು. ನನ್ನ ಕ್ಷೇತ್ರದ ಬಸ್ಕಲ್, ಆಲ್ದೂರು, ಬೂದನಿಕೆ, ಬಸಗೋಡು, ಬಾಳೆಹಳ್ಳಿ, ಕೆಳಗೂರು, ಗಾಳಿಪೇಟೆ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಾಣ ಮಾಡಿ ಅನುಕೂಲ ಮಾಡಿಕೊಡಲಾಗಿದೆ. ಈ ಭವನಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸ್ಥಳೀಯರ ಸಲಹೆ, ಸಹಕಾರ ಪಡೆದು ಒಂದು ಸಮಿತಿಯನ್ನು ರಚಿಸಲಾಗುತ್ತದೆ. ಅಗತ್ಯವಿರುವವರಿಗೆ ಸಮುದಾಯ ಭವನಗಳನ್ನು ನೀಡಬೇಕಾದರೆ ಅವರಿಂದ ಸ್ವಲ್ಪ ನಿರ್ವಹಣಾ ವೆಚ್ಚ ಪಡೆದರೆ ವರ್ಷಕ್ಕೊಮ್ಮೆ ಸುಣ್ಣ ಬಣ್ಣಬಳಿದು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಮಾತನಾಡಿ, ಸಮುದಾಯ ಭವನಗಳನ್ನು ಯಾವ ಜಾತಿಗೂ ಸೀಮಿತ ಮಾಡಿ ಕೊಳ್ಳದೆ, ಎಲ್ಲರೂ ಒಂದಾಗಿ ಸಭೆ ಸಮಾರಂಭಗಳನ್ನು ಮಾಡಿ ಪ್ರೀತಿ ವಿಶ್ವಾಸದಿಂದ ಬಾಳಲು ಸಹಕಾರಿಯಾಗಬೇಕು. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ರಹಿತವಾಗಿ ಬಡವರ್ಗದ ಜನರ ಧ್ವನಿಯಾಗಿ ಸಮಾಜದ ಹಿತಕಾಯೋಣ ಎಂದರು.
ಹಿರೇಮಗಳೂರು ಕಣ್ಣನ್ ಮಾತನಾಡಿ, ರಾಜಕೀಯದ ನಾಲ್ಕಕ್ಷರಕ್ಕೆ ಅರ್ಥ ಹೇಳಿ ಹಾಸ್ಯ ಚಟಾಕಿಯಿಂದಲೇ ಮಾತನಾಡ ಾರಂಭಿಸಿ ನೆರೆದಿದ್ದ ಗ್ರಾಮಸ್ಥರನ್ನು ನಗೆಗಡಲಲ್ಲಿ ತೇಲಿಸಿದ ಅವರು, ಪ್ರಾಣೇಶ್, ನಿಂಗಯ್ಯ ಅವರು ಸರಳ ಸಜ್ಜನ ರಾಜಕಾರಣಿಗಳು ಎಂದು ಹೇಳಿದರು. ಜನಪ್ರತಿನಿಧಿಗಳು ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಮುಂದಾಗಿ ಊರಿನ ಜನರ ಹಿತಕಾಯುವಲ್ಲಿ ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಸಕ ಬಿ.ಬಿ. ನಿಂಗಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಪಂ ಸದಸ್ಯ ಹಿರಿಗಯ್ಯ, ತಾಪಂ ಸದಸ್ಯ ಡಿ.ಜೆ. ಸುರೇಶ್, ನಗರಸಭೆ ಸದಸ್ಯ ಎಚ್.ಎಸ್. ಪುಟ್ಟಸ್ವಾಮಿ, ಗ್ರಾಪಂ ಅಧ್ಯಕ್ಷ ವಸ್ತಾರೆ ರವಿ, ಉಪಾಧ್ಯಕ್ಷೆ ಜ್ಯೋತಿ, ಸದಸ್ಯರಾದ ಪಾರ್ವತಮ್ಮ, ಅನ್ನಪೂರ್ಣ, ಲಲಿತಾ, ರವಿ, ಸೋಮಶೇಖರ್, ವಸ್ತಾರೆ ಹೋಬಳಿ ಕಸಾಪ ಅಧ್ಯಕ್ಷ ನಿಂಗೇಗೌಡ, ಕಣ್ಣಪ್ಪ, ಹೊಳಗೇರಳ್ಳಿ ಸುರೇಶ್ ಉಪಸ್ಥಿತರಿದ್ದರು.







