ಉರಿ ಸೇನಾ ಕೇಂದ್ರದ ಮೇಲೆ ದಾಳಿ: 17 ಯೋಧರು ಬಲಿ; ನಾಲ್ಕು ಉಗ್ರರ ಹತ್ಯೆ
ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ

ಉರಿ, ಸೆ.18: ಜಮ್ಮು-ಕಾಶ್ಮೀರದ ಉರಿಯಲ್ಲಿ ನಿಯಂತ್ರಣ ರೇಖೆಯ ಬಳಿ ಭಾರತೀಯ ಸೇನಾಕೇಂದ್ರದ ಮೇಲೆ ರವಿವಾರ ಮುಂಜಾನೆ ನಡೆದ ಬೃಹತ್ ಭಯೋತ್ಪಾದಕ ದಾಳಿಯಲ್ಲಿ 17 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ದಾಳಿಯಾಗಿದೆ.
ಎಲ್ಲ ನಾಲ್ವರು ಭಯೋತ್ಪಾದಕರೂ ಕೊಲ್ಲಲ್ಪಟ್ಟಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಸರಕಾರವು ಈ ದಾಳಿಗೆ ಪಾಕಿಸ್ತಾನವನ್ನು ದೂಷಿಸಿದೆ. ಆತ್ಮಹತ್ಯಾ ದಾಳಿಕಾರರೆನ್ನಲಾದ ಭಯೋತ್ಪಾದಕರು ಮುಂಜಾನೆ 5 ಗಂಟೆಯ ವೇಳೆ ಸೇನಾ ಕೇಂದ್ರದೊಳಗೆ ನುಸುಳಿ ಗ್ರೆನೇಡ್ಗಳನ್ನೆಸೆದು, ಯದ್ವಾತದ್ವಾ ಗುಂಡು ಹಾರಿಸಲಾರಂಭಿಸಿದರು. ಗ್ರೆನೇಡ್ ಎಸೆತದಿಂದ ಗುಡಾರಗಳಿಗೆ ಬೆಂಕಿ ಹತ್ತಿಕೊಂಡು ಹೆಚ್ಚಿನ ಸೈನಿಕರು ಸಾವಿಗೀಡಾದರು.
ಉರಿಯಲ್ಲಿ ಸೇನಾ ಬ್ರಿಗೇಡ್ನ ಮುಖ್ಯಾಲಯವಿದೆ. ಸೈನಿಕ ಘಟಕಗಳ ಪಾಳಿ ಬದಲಾವಣೆಯ ವೇಳೆ ಈ ದಾಳಿ ನಡೆದಿದ್ದು, ಹಲವು ಸೈನಿಕರು ತಾತ್ಕಾಲಿಕ ಗುಡಾರಗಳಲ್ಲಿದ್ದರು.
ಭಯೋತ್ಪಾದಕರೊಂದಿಗಿನ 6 ತಾಸುಗಳ ಗುಂಡಿನ ಚಕಮಕಿಯಲ್ಲಿ ಸುಮಾರು 30 ಮಂದಿ ಯೋಧರು ಗಾಯಗೊಂಡಿದ್ದಾರೆ. ಭಯೋತ್ಪಾದಕರು ನಿಯಂತ್ರಣ ರೇಖೆಯ ಕಾಲುವೆಯೊಂದನ್ನು ದಾಟಿ, ಗಡಿ ಬೇಲಿ ತುಂಡ ರಿಸಿ ಕಾಶ್ಮೀರದೊಳಗೆ ನುಸುಳಿದ್ದರೆಂದು ನಂಬಲಾಗಿದೆ.
ಪಾಕಿಸ್ತಾನವು ಭಯೋತ್ಪಾದಕ ದೇಶವಾಗಿದೆ. ಅದನ್ನು ಗುರುತಿಸಿ, ಏಕಾಂಗಿಯನ್ನಾಗಿಸಬೇಕು. ದಾಳಿಕೋರರು ಭಾರೀ ತರಬೇತಿ ಪಡೆದವರಾಗಿದ್ದು, ಭಾರೀ ಶಸ್ತ್ರಾಸ್ತ್ರ ಹಾಗೂ ವಿಶೇಷ ಉಪಕರಣಗಳು ಅವರಲ್ಲಿದ್ದವೆಂದು ಗೃಹ ಸಚಿವ ರಾಜನಾಥ ಸಿಂಗ್ ಟ್ವೀಟೊಂದರಲ್ಲಿ ಆರೋಪಿಸಿದ್ದಾರೆ.
ಕೆಲವು ವರ್ಷಗಳಲ್ಲಿ ಒಂದೇ ಭಯೋತ್ಪಾದಕ ದಾಳಿಯಲ್ಲಿ ಇಷ್ಟೊಂದು ಸಂಖ್ಯೆಯ ಸೈನಿಕರು ಬಲಿಯಾಗಿರುವುದು ಇದೇ ಮೊದಲು. ಜನವರಿಯಲ್ಲಿ 6 ಮಂದಿ ಉಗ್ರರು ನಡೆಸಿದ್ದ ಪಠಾಣ್ಕೋಟ್ ಭಯೋತ್ಪಾದಕ ದಾಳಿಯಲ್ಲಿ 7 ಮಂದಿ ಸೈನಿಕರು ಹುತಾತ್ಮರಾಗಿದ್ದರು.
ರಾಜನಾಥ್ ಇಂದು ಆರಂಭಿಸಬೇಕಿದ್ದ ರಶ್ಯ ಹಾಗೂ ಅಮೆರಿಕ ಪ್ರವಾಸವನ್ನು ಮುಂದೂಡಿದ್ದಾರೆ. ಅವರು ತುರ್ತು ಭದ್ರತಾ ಸಭೆಯೊಂದನ್ನು ನಡೆಸಿದ್ದಾರೆ.
ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಹಾಗೂ ಭೂ ಸೇನಾ ದಂಡನಾಯಕ ದಲ್ಬೀರ್ ಸಿಂಗ್ ಕಾಶ್ಮೀರದಲ್ಲಿದ್ದಾರೆ. ಈ ದಾಳಿಯು ಜಮ್ಮು-ಕಾಶ್ಮೀರದಲ್ಲಿ ಅಶಾಂತಿ ಹರಡಲು ಪಾಕಿಸ್ತಾನ ನಡೆಸಿರುವ ದೊಡ್ಡ ಹೂಟವೆಂದು ಉನ್ನತ ಸರಕಾರಿ ಮೂಲಗಳು ಆರೋಪಿಸಿವೆ.
ಶೋಚನೀಯ ಅಪಮಾನ: ಸೋನಿಯಾ
ಹೊಸದಿಲ್ಲಿ: ಉರಿಯಲ್ಲಿ ನಡೆದಿರುವ ಭಯೋತ್ಪಾದಕ ದಾಳಿ ರಾಷ್ಟ್ರೀಯ ಪ್ರಜ್ಞೆಯ ಮೇಲಿನ ಶೋಚನೀಯ ಅಪಮಾನವಾಗಿದೆಯೆಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ವ್ಯಾಖ್ಯಾನಿಸಿದ್ದಾರೆ. ಈ ದಾಳಿಯ ಪಿತೂರಿಗಾರರನ್ನು ಕಟಕಟೆಗೆಳೆಯಲಾಗುವುದೆಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದ್ದಾರೆ.
ದಾಳಿಯಲ್ಲಿ 17 ಸೈನಿಕರು ಸಾವಿಗೀಡಾಗಿರುವುದಕ್ಕೆ ಸೋನಿಯಾ ದುಃಖ ವ್ಯಕ್ತಪಡಿಸಿದ್ದಾರೆ.
ಉರಿಯಲ್ಲಿ ನಡೆದ ಭೀಕರ ದಾಳಿಯಲ್ಲಿ ಭಾರತೀಯ ಸೈನಿಕರು ಹುತಾತ್ಮರಾಗಿರುವ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಘಾತ ಹಾಗೂ ತೀವ್ರ ದುಃಖವನ್ನು ವ್ಯಕ್ತಪಡಿಸಿದ್ದಾರೆಂದು ಪಕ್ಷದ ಹೇಳಿಕೆಯೊಂದು ತಿಳಿಸಿದೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಹ ದಾಳಿಯನ್ನು ಖಂಡಿಸಿದ್ದಾರೆ. ದಾಳಿಯಲ್ಲಿ ಹುತಾತ್ಮರಾಗಿರುವ ವೀರ ಯೋಧರ ಕುಟುಂಬಗಳಿಗೆ ಅವರು ಸಂತಾಪ ಸೂಚಿಸಿದ್ದಾರೆ.
ಗುಡಾರಕ್ಕೆ ಬೆಂಕಿ ಹಚ್ಚಿ ಯೋಧರು ಹೊರಬಂದಾಗ ಗುಂಡು?
ಹೊಸದಿಲ್ಲಿ, ಸೆ.18: ಉರಿ ಸೇನಾ ಕೇಂದ್ರದಲ್ಲಿ ಭಯೋತ್ಪಾದಕರು ಬಹುಶಃ ಗುಡಾರಗಳಿಗೆ ಬೆಂಕಿ ಹಚ್ಚಿರಬೇಕು. ಸೈನಿಕರು ಹೊರಗೋಡಿ ಬರುವ ವೇಳೆ ಗುಂಡು ಹಾರಿಸಿ ಹತ್ಯೆ ನಡೆಸಿರುವ ಸಾಧ್ಯತೆಯಿದೆಯೆಂದು ಹಿರಿಯ ಸೇನಾಧಿಕಾರಿಯೊಬ್ಬರು ಅಂದಾಜಿಸಿದ್ದಾರೆ.
ಸೇನಾ ಕೇಂದ್ರದೊಳಗೆ ಕನಿಷ್ಠ ಇನ್ನಿಬ್ಬರು ಭಯೋತ್ಪಾದಕರು ಅವಿತು ಕೊಂಡಿರುವ ಶಂಕೆಯಿಂದ ಅಲ್ಲಿ ಎಚ್ಚರಿಕೆಯ ಶೋಧ ಕಾರ್ಯ ನಡೆಸು ತ್ತಿದ್ದೇವೆಂಬ ಸೂಚನೆಯನ್ನು ಅವರು ನೀಡಿದ್ದಾರೆ.
ಉರಿ ದಾಳಿಯ ವಿವರವನ್ನು ಗಮನಿಸಿದರೆ, ಸಾಧ್ಯವಾದಷ್ಟು ಹೆಚ್ಚು ಪ್ರಾಣ ಹಾನಿ ಮಾಡುವ ಯೋಜನೆಯನ್ನು ಭಯೋತ್ಪಾದಕರು ಹಾಕಿಕೊಂಡಂತಿದೆ. ನಾಲ್ವರು ಭಯೋತ್ಪಾದಕರನ್ನು ಕೊಲ್ಲಲಾಗಿದ್ದು, ಇನ್ನೂ 2-3 ಮಂದಿ ಜೀವಂತವಾಗಿರುವ ಶಂಕೆಯಿದೆ. ಅವರ ಪತ್ತೆಗಾಗಿ ಶೋಧ ನಡೆಯುತ್ತಿದೆಯೆಂದು ಅಧಿಕಾರಿ ಹೇಳಿದ್ದಾರೆ.
ಉಗ್ರರ ದಾಳಿಗೆ ಬಲಿಯಾದ ಸೈನಿಕರಲ್ಲಿ ಹೆಚ್ಚಿನವರು 6 ಬಿಹಾರ್ ರೆಜಿಮೆಂಟ್ಗೆ ಸೇರಿದವರೆನ್ನಲಾಗಿದೆ.
ಭಾರತವೂ ಫಿದಾಯಿನ್ತಂಡ ಕಟ್ಟಬೇಕು: ಜ.ಚೌಧರಿ
ನಿವೃತ್ತ ಸೇನಾಧಿಕಾರಿಗಳ ಆಕ್ರೋಶ
ಹೊಸದಿಲ್ಲಿ, ಸೆ.18: ಭಾರತವು ತನ್ನದೇ ಆದ ಫಿದಾಯಿನ್ (ಆತ್ಮಹತ್ಯಾ ದಾಳಿಕಾರರು) ತಂಡವನ್ನು ಕಟ್ಟಬೇಕೆಂದು ಭೂ ಸೇನೆಯ ಮಾಜಿ ದಂಡನಾಯಕ ಶಂಕರ್ ರಾಯ್ ಚೌಧರಿ ರವಿವಾರ ಹೇಳಿದ್ದಾರೆ. ಉತ್ತರ ಕಾಶ್ಮೀರದ ಉರಿಯಲ್ಲಿ 17 ಸೈನಿಕರ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿಯ ಕುರಿತಾದ ಆಕ್ರೋಶ ಅವರ ಈ ಮಾತಿನಲ್ಲಿ ಪ್ರತಿಫಲಿಸಿದೆ.
ಈ ದಾಳಿಯು ಹಲವು ನಿವೃತ್ತ ಸೇನಾ ಸಿಬ್ಬಂದಿಯಲ್ಲಿ ಆಕ್ರೋಶ ಮೂಡಿಸಿದ್ದು, ಉಗ್ರರ ವಿರುದ್ಧ ಪ್ರತಿಕಾರಾತ್ಮಕ ಕ್ರಮಕ್ಕೆ ಕರೆ ನೀಡಿದ್ದಾರೆ.
ಚೌಧರಿ, ಭಾರತದ ಭೂ ಸೇನಾ ದಂಡನಾಯಕರಲ್ಲಿ ಅತ್ಯಂತ ಪ್ರಸಿದ್ಧರಾದವರಲ್ಲೊಬ್ಬರಾಗಿದ್ದು, ಹಲವು ಪ್ರಶಸ್ತಿ-ಪದಕಗಳಿಗೆ ಭಾಜನರಾಗಿದ್ದಾರೆ. ಅವರು 1965 ಭಾರತ-ಪಾಕ್ ಯುದ್ಧ ಹಾಗೂ 1971ರ ಬಾಂಗ್ಲಾ ವಿಮೋಚನಾ ಸಮರದಲ್ಲಿ ಪಾಲ್ಗೊಂಡವರಾಗಿದ್ದಾರೆ.
ಮಾಜಿ ಸೇನಾ ಮೇಜರ್ ಗೌರವ್ ಆಚಾರ್ಯ, ಈ ದಾಳಿಗೆ ಹೊಣೆಯಾಗಿರುವ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪಾಕಿಸ್ತಾನ ಮತ್ತೆ ಮತ್ತೆ ಇದನ್ನು ಮಾಡುತ್ತಿದೆ. ನಾವು ತುರ್ತು ಕ್ರಮ ಕೈಗೊಳ್ಳಬೇಕು. ಪಾಕಿಸ್ತಾನದೊಂದಿಗೆ ಸಂಬಂಧ ಕಡಿಮೆ ಮಾಡಬೇಕು. ವ್ಯಾಪಾರ ನಿಲ್ಲಿಸಬೇಕು. ನಾವು ಗಂಭೀರವಾಗಿದ್ದೇವೆಂದು ಪ್ರಪಂಚಕ್ಕೆ ತೋರಿಸಬೇಕೆಂದು ಅವರು ಹೇಳಿದ್ದಾರೆ.
ಇನ್ನೊಬ್ಬ ಹಿರಿಯ ಸೇನಾಧಿಕಾರಿ ಲೆ.ಜ.ರಾಜ್ ಕಾಡ್ಯನ್, ಇದು ಪಾಕಿಸ್ತಾನ ಭಾರತದ ಮೇಲೆ ನಡೆಸಿರುವ ಸ್ಪಷ್ಟ ದಾಳಿಯಾಗಿದೆ. ಎಲ್ಲ ಮೃದು ಮಾರ್ಗಗಳು ಮುಚ್ಚಲ್ಪಟ್ಟಿವೆ. ಅವರು ಕ್ರಮ ಕೈಗೊಳ್ಳುವುದಿಲ್ಲ. ಭಾರತೀಯ ಸೇನೆ ಅತ್ಯಂತ ಪ್ರಬಲ ಪ್ರತಿಕಾರಾತ್ಮಕ ದಾಳಿ ನಡೆಸಬೇಕು. ನಿಷೇಧಕ್ಕಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ವಿಷಯ ಎತ್ತಬೇಕೆಂದು ಕಿಡಿಗಾರಿದ್ದಾರೆ.







