ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳು ಮೃತ್ಯು: ಹುತಾತ್ಮ ಯೋಧರ ಸಂಖ್ಯೆ 18ಕ್ಕೇರಿಕೆ

ಹೊಸದಿಲ್ಲಿ,ಸೆ.19: ಜಮ್ಮು-ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ ರವಿವಾರ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ 18ಕ್ಕೇರಿದೆ. ರವಿವಾರವೇ 17 ಯೋಧರು ಮೃತಪಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಸಿಪಾಯಿ ಕೆ.ವಿಕಾಸ ಜನಾರ್ಧನ ಅವರು ಸೋಮವಾರ ಇಲ್ಲಿಯ ಆರ್.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ರವಿವಾರ ನಸುಕಿನಲ್ಲಿ ಸಶಸ್ತ್ರ ಉಗ್ರರು ಯೋಧರು ಗಾಢನಿದ್ರೆಯಲ್ಲಿದ್ದಾಗ ಅವರ ಟೆಂಟ್ಗಳು ಮತ್ತು ಬ್ಯಾರಕ್ಗಳ ಮೇಲೆ ಗ್ರೆನೇಡ್ಗಳನ್ನು ಎಸೆದಿದ್ದರು ಹಾಗೂ ಕಟ್ಟಡವೊಂದಕ್ಕೆ ಬೆಂಕಿ ಹಚ್ಚಿದ್ದರು. ಬಳಿಕ ನಡೆದ ಗುಂಡಿನ ಚಕಮಕಿ ಇನ್ನಷ್ಟು ಸಾವುನೋವುಗಳಿಗೆ ಕಾರಣವಾಗಿತ್ತು. ಅಂತಿಮವಾಗಿ ಎಲ್ಲ ನಾಲ್ವರು ಭಯೋತ್ಪಾದಕರು ಬಲಿಯಾಗಿದ್ದರು. 17 ಯೋಧರು ಸಾವನ್ನಪ್ಪಿದ್ದರೆ, ಗಾಯಗೊಂಡಿದ್ದ ಇತರ 28 ಯೋಧರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿರುವ 18 ಯೋಧರನ್ನು ನಾವು ವಂದಿಸುತ್ತೇವೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಹಿರಿಯ ಸೇನಾಧಿಕಾರಿಗಳು ಮೃತ ಯೋಧರ ಕುಟುಂಬಗಳಿಗೆ ಗಾಢ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ.
ಯೋಧರ ಮಾರಣಹೋಮಕ್ಕೆ ರಾಷ್ಟ್ರಾದ್ಯಂತ ತೀವ್ರ ಶೋಕ ವ್ಯಕ್ತವಾಗಿದೆ. ಹುತಾತ್ಮ ಯೋಧರು ಬಿಹಾರ,ಜಮ್ಮು-ಕಾಶ್ಮೀರ,ಜಾರ್ಖಂಡ್,ಮಹಾರಾಷ್ಟ್ರ,ರಾಜಸ್ಥಾನ,ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಲ ರಾಜ್ಯಗಳಿಗೆ ಸೇರಿದವರಾಗಿದ್ದಾರೆ.
ಹುತಾತ್ಮ ಯೋಧರ ಹೆಸರುಗಳು
ಹವಿಲ್ದಾರ್ಗಳಾದ ಅಶೋಕ ಕುಮಾರ್ ಸಿಂಗ್(ಬಿಹಾರ), ಎನ್.ಎಸ್.ರಾವತ್(ರಾಜಸ್ಥಾನ) ಮತ್ತು ರವಿ ಪಾಲ್(ಜಮ್ಮು-ಕಾಶ್ಮೀರ), ನಾಯ್ಕಾ ಎಸ್.ಕೆ.ವಿದ್ಯಾರ್ಥಿ(ಬಿಹಾರ), ಲಾನ್ಸ್ ನಾಯ್ಕ್ಗಳಾದ ಜಿ.ಶಂಕರ(ಮಹಾರಾಷ್ಟ್ರ) ಮತ್ತು ಆರ್.ಕೆ.ಯಾದವ(ಉತ್ತರ ಪ್ರದೇಶ), ಸಿಪಾಯಿಗಳಾದ ರಾಕೇಶ ಸಿಂಗ್(ಬಿಹಾರ), ಗಣೇಶ ಶಂಕರ, ರಾಜೇಶಕುಮಾರ ಸಿಂಗ್, ಹರಿಂದರ್ ಯಾದವ(ಎಲ್ಲರೂ ಉತ್ತರ ಪ್ರದೇಶ), ನೈಮಾನ್ ಕುಜು ಮತ್ತು ಜಾವ್ರಾ ಮುಂಡಾ(ಇಬ್ಬರೂ ಜಾರ್ಖಂಡ್), ಉಯಿಕೆ ಜಾನರಾವ್, ಟಿ.ಎಸ್.ಸೋಮನಾಥ ಮತ್ತು ಕೆ.ವಿಕಾಸ ಜನಾರ್ಧನ(ಎಲ್ಲರೂ ಮಹಾರಾಷ್ಟ್ರ), ಬಿಸ್ವಜಿತ್ ಘೋರಾಯ್ ಮತ್ತು ಜಿ.ದಲಾಯಿ(ಇಬ್ಬರೂ ಪ.ಬಂಗಾಲ) ಹಾಗೂ ಸುಬೇದಾರ್ ಕರ್ನೈಲ್ ಸಿಂಗ್(ಜಮ್ಮು-ಕಾಶ್ಮೀರ).
ಗಾಯಾಳುಗಳ ಪೈಕಿ ಹೆಚ್ಚಿನವರಿಗೆ ತೀವ್ರ ಸುಟ್ಟಗಾಯಗಳಾಗಿದ್ದು ಕಣಿವೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರನ್ನು ದಿಲ್ಲಿಯ ಆರ್.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸೋಮವಾರ ಬೆಳಿಗ್ಗೆ ಸಹಾಯಕ ರಕ್ಷಣಾ ಸಚಿವ ಸುಭಾಷ್ ಭಾಮ್ರೆ ಅವರು ಸುದ್ದಿಗಾರರಿಗೆ ತಿಳಿಸಿದರು.







